ಬೆಂಗಳೂರು: 30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿದೆ.
ಸರಣಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯಾಗಿರುವ ಉಮೇಶ್ ರೆಡ್ಡಿ, ವಯಸ್ಸಾದ ತಾಯಿಯೊಂದಿಗೆ ಇರುವುದಕ್ಕಾಗಿ ಹಾಗೂ ದುಸ್ಥಿತಿಯಲ್ಲಿದ್ದ ಮನೆ ದುರಸ್ತಿ ಮಾಡಬೇಕೆಂಬ ಕಾರಣಕ್ಕೆ ಪೆರೋಲ್ ಗೆ ಮನವಿ ಮಾಡಿದ್ದ.
ಆದರೆ, ವಿಚಾರಣೆ ನಡೆಸಿರುವ ಹೈಕೋರ್ಟ್ ಪೆರೋಲ್ ನೀಡಲು ನಿರಾಕರಿಸಿದೆ. ‘ಪೆರೋಲ್ ನೀಡಿದರೆ ಉಮೇಶ್ ರೆಡ್ಡಿ ಪ್ರಾಣಕ್ಕೆ ಅಪಾಯ ಇದೆ ಎಂಬ ವರದಿ ಹಾಗೂ ಸಹೋದರರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಸುಪ್ರೀಂ ಕೋರ್ಟ್ 30 ವರ್ಷ ಸೆರೆವಾಸದ ನಂತರ ಕ್ಷಮಾಧಾನ ಕೋರಬಹುದೆಂದು ಹೇಳಿದೆ. ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.
ಚಿತ್ರದುರ್ಗ ಮೂಲದ ವಿಕೃತಕಾಮಿ ಉಮೇಶ್ ರೆಡ್ಡಿಗೆ 1998ರಲ್ಲಿ ಬೆಂಗಳೂರಿನಲ್ಲಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಕೂಡ ಈತ ಆರೋಪಿಯಾಗಿದ್ದ. 6 ಬಾರಿ ಪೊಲೀಸಿಂದ ತಪ್ಪಿಸಿಕೊಂಡಿದ್ದ. ಆರಂಭದಲ್ಲಿ ಪೊಲೀಸ್ ಆಗಿದ್ದ ಈತ, ಸೇವೆಯಿಂದ ವಜಾಗೊಂಡಿದ್ದ. ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಕೂಡ ವರದಿಯಾಗಿತ್ತು.