ಪೈಲಟ್ ಬಣ ಅನರ್ಹ ಪ್ರಕರಣ – ಸ್ಪೀಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಸು.ಕೋ
ಜೈಪುರ, ಜುಲೈ 23: ಸಚಿನ್ ಪೈಲಟ್ ಮತ್ತು ಇತರ 18 ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವ ಕ್ರಮಗಳನ್ನು ನಡೆಸದಂತೆ ತಡೆಯುವ ರಾಜಸ್ಥಾನ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಜುಲೈ 23 ವಿಚಾರಣೆ ನಡೆಸಿ ಪ್ರಕರಣವನ್ನು ಸೋಮವಾರ ಜುಲೈ 27ಕ್ಕೆ ಮುಂದೂಡಿದೆ
ಆದಾಗ್ಯೂ, ಸುಪ್ರೀಂ ಕೋರ್ಟ್ ರಾಜಸ್ಥಾನ ಹೈಕೋರ್ಟ್ನ ವಿಚಾರಣೆಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಮತ್ತು ತಮ್ಮ ಪ್ರಕರಣದ ಬಗ್ಗೆ ಸಂಕ್ಷಿಪ್ತ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಎರಡೂ ಕಡೆಯವರಿಗೆ ನಿರ್ದೇಶನ ನೀಡಿದೆ. ರಾಜಸ್ಥಾನ ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್, ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ನ್ಯಾಯಪೀಠ ವಾದವನ್ನು ಆಲಿಸಿತು
ಸಚಿನ್ ಪೈಲಟ್ ಪರ ಹಾಜರಾದ ಹರೀಶ್ ಸಾಲ್ವೆ, ಸ್ಪೀಕರ್ ಹೈಕೋರ್ಟ್ ಮುಂದೆ ವಿಚಾರಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸ್ಪೀಕರ್ ಜೋಶಿ ಅವರು ಹೈಕೋರ್ಟ್ನಲ್ಲಿ ತಮ್ಮ ಪ್ರಕರಣವನ್ನು ವಾದಿಸಿದ್ದರು ಮತ್ತು ಮೊದಲನೇ ದಿನದಂದು ಆಕ್ಷೇಪಣೆ ವ್ಯಕ್ತಪಡಿಸಬೇಕಾಗಿತ್ತು ಎಂದು ಹೇಳಿದ್ದರು.
ಇದಕ್ಕೂ ಮೊದಲು ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ರಾಜಸ್ಥಾನ್ ಸ್ಪೀಕರ್ ಗೆ ಯಾವ ಆಧಾರದ ಮೇಲೆ ಅನರ್ಹತೆ ಕೋರಿದೆ? ಎಂದು ಪ್ರಶ್ನಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಭಿನ್ನಮತೀಯ ಶಾಸಕರು ಪಕ್ಷದ ಸಭೆಯಲ್ಲಿ ಭಾಗವಹಿಸಲು ವಿಫಲರಾಗಿದ್ದಾರೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಶಾಸಕರು ಹರಿಯಾಣ ಹೋಟೆಲ್ನಲ್ಲಿದ್ದಾರೆ ಎಂದು ತಮ್ಮ ವಾದವನ್ನು ಪ್ರಾರಂಭಿಸಿದ್ದರು.
ತಮ್ಮ ವಾದವನ್ನು ಮುಂದುವರಿಸಿದ ಸಿಬಲ್ ಪಕ್ಷಾಂತರ ವಿರೋಧಿ ನೋಟಿಸ್ಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಲು ಸ್ಪೀಕರ್ಗೆ ನಿರ್ದೇಶಿಸಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ. ಸ್ಪೀಕರ್ಗೆ ನಿರ್ದೇಶನ ನೀಡುವಲ್ಲಿ ರಾಜಸ್ಥಾನ ಹೈಕೋರ್ಟ್ ತಪ್ಪಾಗಿದ್ದು, ಇತ್ಯರ್ಥಪಡಿಸಿದ ಕಾನೂನಿಗೆ ವಿರುದ್ಧವಾಗಿದೆ. ಇದು ಸ್ಪೀಕರ್ ವಿವೇಚನೆಗೆ ಒಳಪಟ್ಟಿದ್ದು ಅನರ್ಹತೆಯ ಬಗ್ಗೆ ಅವರ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬಹುದು ಎಂದು ಸಿಬಲ್ ಹೇಳಿದರು. ಅನರ್ಹಗೊಳಿಸುವ ಪ್ರಕ್ರಿಯೆಯ ಮೊದಲು ನಡೆಯುವ ಯಾವುದನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಸಿಬಲ್ ಹೇಳಿದರು.
ಸುಪ್ರೀಂ ಕೋರ್ಟ್ ಸಿಬಲ್ ಅವರನ್ನು, “ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದರೆ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದು, ಸಿಬಲ್ ಪ್ರತಿಕ್ರಿಯಿಸಿ ಹೌದು, ಆದರೆ ನಿರ್ಧಾರಗಳನ್ನು ತೆಗೆದುಕೊಂಡ ನಂತರವಷ್ಟೇ ಹಸ್ತಕ್ಷೇಪ ಮಾಡಬಹುದು. ಆದರೆ ಪಕ್ಷಾಂತರ ವಿರೋಧಿ ನೋಟಿಸ್ಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸುವ ಸಮಯವನ್ನು ವಿಸ್ತರಿಸಲು ಸ್ಪೀಕರ್ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದು ನ್ಯಾಯಾಲಯದ ವ್ಯಾಪ್ತಿಗೆ ಮೀರಿದೆ ಎಂದು ಅವರು ವಾದಿಸಿದರು.