ಹಾಸನದಿಂದ ಸ್ಪರ್ಧಿಸುವಂತೆ ರೇವಣ್ಣ ,ಭವಾನಿ ರೇವಣ್ಣಗೆ ಆಹ್ವಾನ ನೀಡಿದ ಪ್ರೀತಂಗೌಡ
ಹಾಸನ: ಹಾಸನದಿಂದ ಸ್ಪರ್ಧೆ ಮಾಡುವಂತೆ ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ನಾನೇ ಆಹ್ವಾನ ನೀಡುತ್ತೇನೆ ಎಂದ ಬಜೆಪಿ ಶಾಸಕ ಪ್ರೀತಂಗೌಡ ಸವಾಲ್ ಹಾಕಿದ್ದಾರೆ.
ಅಲ್ಲದೇ ಅವರು ಸ್ಪರ್ಧಿಸಿದರೆ ನನಗೆ ಸಂತೋಷ. ರೆಡಿಯಾಗಿ ಬರಬೇಕಿದ್ದು ಅವರು, ನಾನು ರೆಡಿಯಾಗಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಒಪ್ಪಿಗೆಯಾಗಿದ್ದರೆ ನನಗೆ ಮತದಾರರು ಆಶಿರ್ವಾದ ಮಾಡಲಿ. ರೇವಣ್ಣ ಮಾಡಿರುವ ಕೆಲಸಗಳು ಇಷ್ಟವಾಗಿದ್ದರೆ ಅವರಿಗೆ ಮತ ಕೊಡುವ ಬಗ್ಗೆ ಜನರೇ ತೀರ್ಮಾನ ಮಾಡಲಿ. ಹಾಸನದಲ್ಲಿ ರೇವಣ್ಣ ಅಥವಾ ಭವಾನಿ ರೇವಣ್ಣ ಯಾರೇ ಬಂದರೂ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂದರು.
ಮುಂದುವರೆದು ಹಾಸನದಲ್ಲಿ ಸುಸಜ್ಜಿತ ತಾಲೂಕು ಕಚೇರಿ ಕಟ್ಟಡ ನಿರ್ಮಿಸಬೇಕೆಂದು ನಿರ್ಧಾರ ಮಾಡಿದ್ದೇನೆ. ಈ ಕೆಲಸಕ್ಕೆ ರೇವಣ್ಣ ಅಪ್ಪಣೆ ಬೇಕೆ? ಹಾಸನವೇನು ಇವರ ಮನೆ ಆಸ್ತಿ ಅಲ್ಲ. ಪ್ರೀತಂ ಗೌಡ ಹೆಬ್ಬಟ್ಟಲ್ಲ. ಎರಡು ಹೋಬಳಿ ಅವರ ಕ್ಷೇತ್ರಕ್ಕೆ ಸೇರಿರಬಹುದು, ಹಾಗೆಂದು ಇಡೀ ತಾಲ್ಲೂಕಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳವ ಅಧಿಕಾರ ಯಾರು ಕೊಟ್ಟವರು? ತಾಲೂಕು ಕಚೇರಿಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಚಟುವಟಿಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಇನ್ನೂ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಹಲವು ಆಶ್ವರ್ಯಕರ ಸಂಗತಿಗಳು ನಡೆಯಲಿವೆ. ಯಾರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ. ಪಕ್ಷಕ್ಕೆ ಬನ್ನಿ ಎಂದು ನಾವು ಯಾರಿಗೂ ಆಹ್ವಾನ ಪತ್ರಿಕೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ನೀವೆಲ್ಲರೂ ಆಶ್ಚರ್ಯಪಡುವ ಸಂಗತಿಗಳು ನಡೆಯಲಿವೆ ಎಂದು ತಿಳಿಸಿದರು.