ಲವಲವಿಕೆಯ ಉತ್ಸಾಹಿ ಬಹುಮುಖ ಪ್ರತಿಭೆ ಪುನೀತ್ ರಾಜಕುಮಾರ್:
ಹಠಾತ್ ಹೃದಯಸ್ತಂಭನದಿಂದ ಶುಕ್ರವಾರ ಇಹಲೋಕ ತ್ಯಜಿಸಿದ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರ ನಿಧನ ಕನ್ನಡ ಹಾಗೂ ಭಾರತೀಯ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿದೆ. ಸದ ಹಸನ್ಮುಖಿ ಹಾಗೂ ಅತ್ಯಂತ ಕ್ರಿಯಾಶೀಲರಾಗಿದ್ದ ಅಪ್ಪು ರಾಜ್ಯದ ಏಕೈಕ ಯೂತ್ ಐಕಾನ್. ಕನ್ನಡ ಚಿತ್ರರಂಗದಲ್ಲಿ ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಯಶ್ ಸೇರಿದಂತೆ ಹಲವು ನಟರು ರಾಜ್ಯದುದ್ದಗಲಕ್ಕೂ ತಮ್ಮ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಯುವ ಸಮೂಹವದ ‘ಪ್ರತಿನಿಧಿ’ ಯಾರೆಂದು ಕೇಳಿದರೆ ಅದು 46 ವರ್ಷದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪುನೀತ್ ಮಾತ್ರ.
2002ರಲ್ಲಿ ತೆರೆಕಂಡ ‘ಅಪ್ಪು’ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಪುನೀತ್ ರಾಜ್ಕುಮಾರ್, ನಟನಷ್ಟೇ ಅಲ್ಲದೇ ಹಿನ್ನಲೆ ಗಾಯಕನಾಗಿಯೂ ಹೆಸರು ಮಾಡಿದ್ದರು. ಟಿವಿ ನಿರೂಪಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ನಿರೂಪಣೆಯ ಕನ್ನಡದ ಕೋಟ್ಯಾಧಿಪತಿ ಸಾಕಷ್ಟು ನೋಡುಗರ ಮನಗೆದ್ದಿತ್ತು. ಸದಾ ನಗುಮೊಗದ ಪುನೀತ್ ಅದ್ಭುತ ಹಾಸ್ಯ ಪ್ರಜ್ಞೆಯನ್ನೂ ಹೊಂದಿದ್ದರು. ಅವರಿದ್ದಲ್ಲಿ ನಗುವಿನ ಸುನಾಮಿ ಏಳುತ್ತಿತ್ತು.
ಫಿಟ್ನೆಸ್ ಮತ್ತು ಆರೋಗ್ಯ ದೃಷ್ಟಿಯಿಂದ 2008ರಲ್ಲಿ ಆರಂಭವಾದ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ನ ಕಾಯಂ ರಾಯಭಾರಿಯಾಗಿದ್ದ ಪುನೀತ್, ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಫಿಟ್ನೆಸ್ ಹಾಗೂ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದ ಅಪ್ಪು, ಬೆಂಗಳೂರು ಆಧಾರಿತ ಕ್ರೀಡಾ ಫ್ರಾಂಚೈಸಿಗಳಾದ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್ ಮತ್ತು ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ವಲಯದಿಂದ ಯಾವುದೇ ಕ್ರೀಡಾಕೂಟಗಳು ನಡೆದರೂ ಅದರ ಪ್ರಚಾರ ರಾಯಭಾರಿಯ ಹೊಣೆಯನ್ನು ಪುನೀತ್ ವಹಿಸುತ್ತಿದ್ದರು.
ಇತ್ತೀಚೆಗೆ ತೆರೆ ಕಂಡಿದ್ದ ಯುವರತ್ನ ಚಿತ್ರದಲ್ಲಿ (ರಗ್ಬಿ, ಬಾಕ್ಸಿಂಗ್ ದೃಶ್ಯ) ಅವರು ನಟಿಸಿದ್ದು ಕ್ರೀಡೆಯ ಮೇಲೆ ಅವರಿಗಿದ್ದ ಒಲವನ್ನು ಬಿಂಬಿಸಿತ್ತು. ಅವರು ನಿತ್ಯ ಜಾಗಿಂಗ್ ಮಾಡುತ್ತಿದ್ದರು, ನಿರಂತರವಾಗಿ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದರು, ನೀರಿನಲ್ಲಿ ಸರಾಗವಾಗಿ ಈಜುತ್ತಿದ್ದರು. ಕರಾಟೆ, ಜ್ಯುಡೋ, ಕಳರಿ ಪಯಟ್ ನಂತಹ ಸಮರಕಲೆಯೆಡೆಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. ಇತ್ತೀಚೆಗೆ ಸ್ಕೂಬಾ ಡೈವ್ ಮಾಡಿದ್ದ ಫೋಟೋವನ್ನು ಪುನೀತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೀಗ ಅವರ ಹಠಾತ್ ನಿಧನ ಕ್ರೀಡಾ ಕ್ಷೇತ್ರಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ.
-ವಾಸವಿ ಶ್ರೀನಿಧಿ