ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆ : ಒಗ್ಗಟ್ಟಿನ ಮಂತ್ರ ಜಪಿಸ್ತಿದ್ದಾರೆ ಕನ್ನಡ ಅಭಿಮಾನಿ ದೇವರುಗಳು..!
ಚಂದನವನದ ಅಭಿಮಾನಿಗಳ ದೇವರುಗಳ ಒಗ್ಗಟ್ಟಿನ ಮಂತ್ರ..!
ಕೃಪೆ – ಹಿಂದವಿ ಸ್ವರಾಜ್
ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಈ ಬೆಳವಣಿಗೆ ಇಡೀ ಕನ್ನಡ
ಸಿನಿಪ್ರಿಯರಿಗೆ ಖಂಡಿತ ಖುಷಿ ಕೊಡುತ್ತೇ. ಅಂತಹ ಬೆಳವಣಿಗೆ ಏನು ಅಂತಾ ಬಾಯ ಮೇಲೆ ಬೆರಳಿಡ
ಬೇಡಿ. ಇಡೀ ಕನ್ನಡ ಅಭಿಮಾನಿ ದೇವರುಗಳು ಒಗ್ಗಟ್ಟಿನ ಮಂತ್ರ ಜಪಿಸ್ತಿದ್ದಾರೆ. ಅದಕ್ಕೆ ಏಕೈಕ
ಕಾರಣ ಕನ್ನಡದ ಮಾಃನ್ ಶಕ್ತಿಯಾಗಿದ್ದ ರಾಜ್ಕುಮಾರ್ರ ಹೆಮ್ಮೆಯ ಪುತ್ರ ನಾಡು ಕಂಡ
ಅಮೂಲ್ಯ ಮಾಣಿಕ್ಯ ಪುನೀತ್ ರಾಜ್ಕುಮಾರ್.
ಒಬ್ಬ ವ್ಯಕ್ತಿ ಮಹಾನ್ ಆಗುವುದು ಅವನು ಬದುಕಿದ್ದಾಗ ಮಾಡಿದ ಸಾಧನೆಗಳಿಂದ ಮಾತ್ರವಲ್ಲ,
ಅವನ ಮರಣ ಸೃಷ್ಟಿಸುವ ವಿಷಾದ ಮತ್ತು ಅದರ ನೋವಿನಲ್ಲಿ ಒಂದಾಗುವ ಮನಸುಗಳಿಂದ. ಕನ್ನಡ
ಚಂದನವನದ ಸೂತಕದ ವಾತಾವರಣದಲ್ಲಿಯೂ ಒಂದು ಸಣ್ಣ ಮಟ್ಟಿಗಿನ ಸಂಭ್ರಮಕ್ಕೆ
ಕಾರಣವಾದವರು ಅದೇ ಸೂತಕಕ್ಕೆ ಕಾರಣವಾದ ಕರುನಾಡಿನ ಯುವರತ್ನ ಅಜಾತಶತ್ರು ಪುನೀತ್
ರಾಜ್ಕುಮಾರ್. ಗಮನಿಸಿ ನೋಡಿ ಪುನೀತ್ರನ್ನು ದ್ವೇಷಿಸುವ ಒಬ್ಬನೇ ಒಬ್ಬ ಔಷದಿಗೂ ನಿಮಗೆ
ಸಿಗುವುದಿಲ್ಲ. ತಾನು ಬದುಕಿದ್ದಾಗ ಎಲ್ಲ ಕಡೆಯೂ ಸಲ್ಲುತ್ತಿದ್ದ, ಎಲ್ಲಿಯೂ ಒಂದೇ ಒಂದು
ವಿವಾದಕ್ಕೆ ಆಸ್ಪದಕೊಡದ, ಎಲ್ಲರನ್ನೂ ಪ್ರೀತಿಸಿ ಮರೆಯಾದ ಅಪ್ಪು, ದೇಹಾಂತ್ಯದ ನಂತರ
ಸ್ಯಾಂಡಲ್ವುಡ್ನಲ್ಲಿದ್ದ ಅಂತಃಕಲಹ ನಿವಾರಿಸುವ ಏಕತಾ ಪ್ರತಿಮೆಯಂತಾಗಿದ್ದಾರೆ. ಮುರಿದ
ಮನಸುಗಳನ್ನು, ಒಡೆದ ಸ್ನೇಹಗಳನ್ನು ಕಲಕಿದ ಸಂಬಂಧಗಳನ್ನು, ಮತ್ತೆ ಜೋಡಿಸಲು ಪುನೀತ್
ಅಕಾಲಿಕ ಅಂತ್ಯವೆಂಬ ಶೋಕದ ವಾತಾವರಣ ವೇದಿಕೆ ಒದಗಿಸಿಕೊಟ್ಟಿದೆ.
ಕನ್ನಡದ ಸಿನಿಪ್ರೇಮಿಗಳಲ್ಲಿ ಉಗ್ರ ಅಭಿಮಾನಿಗಳ ಅನೇಕ ಪಂಗಡಗಳಿವೆ. ದರ್ಶನ್ ಅಭಿಮಾನಿಗಳ
ಡಿಬಾಸ್ ಗ್ರೂಪ್, ಸುದೀಪ್ನ ಕಿಚ್ಚನ ಫ್ಯಾನ್ಸ್ ಬಳಗ, ಧ್ರುವ ಸರ್ಜಾನ ಫ್ಯಾನ್ ಫಾಲೋವರ್ಸ್,
ಉಪೇಂದ್ರ, ಯಶ್, ರಕ್ಷಿತ್ ಶೆಟ್ಟಿ ಹೀಗೆ ಪ್ರತ್ಯೇಕ ಬಣಗಳಿವೆ. ಇಲ್ಲಿ ಕೆಲವು ಬಣಗಳ ನಡುವೆ
ಬಹಿರಂಗವಾಗಿ ಬಡಿದಾಟಗಳಾಗಿವೆ. ಆದರೆ ಎಲ್ಲಾ ಬಣಗಳ ಅಭಿಮಾನಿಗಳು ಒಕ್ಕೊರಲಿನಿಂದ
ಮೆಚ್ಚಿಕೊಂಡ ತಾರೆ ಪುನೀತ್. ಹಠಾತ್ತನೇ ಪುನೀತ್ ಇನ್ನಿಲ್ಲ ಎಂದಾಗ ಇಡೀ ಕರ್ನಾಟಕದ ಎಲ್ಲಾ
ಸಿನಿಪ್ರೇಮಿಗಳು ಹೃಯವಿದ್ರಾವಕವಾಗಿ ಗೋಳಾಡಿದ್ದರು. ಅವತ್ತು ನಿರ್ಮಾಣವಾಗಿತ್ತಲ್ಲ ಅದೇ
ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪವನ್ನು ಕನ್ನಡದ ಸ್ಟಾರ್ ನಟರು ಇದೀಗ
ಮಾಡಿದ್ದಾರೆ. ಈಗ ಒಗ್ಗಟ್ಟಿನ ಮಂತ್ರ ಜಪಿಸಿದ ಗಂಧದಗುಡಿ ಅಭಿಮಾನಿ ಬಳಗ, ಫ್ಯಾನ್ಸ್ ವಾರ್ಗೆ
ಫುಲ್ ಸ್ಟಾಪ್ ಇಟ್ಟು ಪುನೀತ್ಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಕನ್ನಡದ ರಾಜರತ್ನ, ಯುವರತ್ನ, ಪವರ್ ಸ್ಟಾರ್ ಪುನೀತ್ ಹಠಾತ್ ಸಾವು ಎಲ್ಲರನ್ನು ದಿಗ್ರ್ಬಮೆಗೆ
ತಳ್ಳಿದೆ. ಇರೋ ನಾಲ್ಕೈದು ದಿನ ಎಲ್ಲರು ಖುಷಿಯಿಂದ ಒಗ್ಗಟ್ಟಿನಿಂದ ಇರೋಣಾ. ಈ ಸ್ಟಾರ್
ವಾರ್, ಫ್ಯಾನ್ ವಾರ್ ಎಲ್ಲ ಪಕ್ಕಕ್ಕಿಟ್ಟು. ಒಗ್ಗಟ್ಟಿನಿಂದ ಜೀವಿಸೋಣಾ ಅನ್ನೋ ಸಂದೇಶವನ್ನು
ಅಭಿಮಾನಿಗಳು ಈಗ ಸಾರಿ ಸಾರಿ ಹೇಳ್ತಿದ್ದಾರೆ. ನಮ್ಮ ಕನ್ನಡ ಇಂಡಸ್ಟ್ರೀಯ ಎಲ್ಲಾ ಸ್ಟಾರ್
ಅಭಿಮಾನಿಗಳು ಒಂದಾಗಿದ್ದಾರೆ. ಸದಾ ಸ್ಟಾರ್ ವಾರ್, ಫ್ಯಾನ್ ವಾರ್, ಅಂತಾ ತೊಳೇರಿಸಿಕೊಂಡು
ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಸ್ತಿದ್ದ ಅಭಿಮಾನಿ ದೇವರುಗಳು ಈಗ ನಾವೆಲ್ಲ ಒಂದೇ
ಅನ್ನೋ ಮಂತ್ರ ಜಪಿಸ್ತಿದ್ದಾರೆ.
ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲ
ಅಭಿಮಾನಿಗಳ ಸ್ಟಾರ್ಗಳು ಒಂದಾಗಿರುವ ಫೋಟೋವನ್ನು ಹಂಚಿಕೊಂಡು, ಈ ಭಾವ ನನ್ನಕಣ್ಣಲ್ಲಿ
ಆನಂದಭಾಷ್ಪ ತರಿಸಿತು ಎಂದಿದ್ದಾರೆ. “ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ.
ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ
ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲು ಜೇನು ಸವಿದಂತೆ ಆಯಿತು.
ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ” ಎಂದು ಜಗ್ಗೇಶ್ ಟ್ವೀಟ್
ಮಾಡಿದ್ದಾರೆ.
ಅಭಿಮಾನಿಗಳ ಈ ನಡೆಗೆ ಜಗ್ಗೇಶ್ ಸಾಥ್ ಕೊಟ್ಟಿದ್ದಾರೆ. ಅಪ್ಪು, ಕಿಚ್ಚ, ದಚ್ಚು, ಗಣಿ, ಶಿವಣ್ಣ
ಸೇರಿದಂತೆ ಕನ್ನಡದ ಎಲ್ಲಾ ಹಿರಿ ಕಿರೀಯ ಸ್ಟಾರ್ಗಳ ಫ್ಯಾನ್ಸ್, ಫ್ಯಾನ್ಸ್ ವಾರ್ ಬೇಡ್ವೇ ಬೇಡ
ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಜೇನಿನ ಗೂಡು ನಾವೆಲ್ಲ ಹೀಗೆ ಇರೋಣಾ ಅಂತಾ ಮನವಿ
ಮಾಡಿಕೊಳ್ತಿದ್ದಾರೆ. ಈ ಪರಿವರ್ತನೆ ಶಾಶ್ವತವಾಗಿ ನೆಲೆಗೊಂಡರೆ ಕನ್ನಡ ಸಿನಿ ಉದ್ಯಮ
ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನ ಮುಟ್ಟುವುದರಲ್ಲಿ ಅನುಮಾನವೇ ಇಲ್ಲ.
-ರೂಪಾ ಮಾಲತೇಶ್