ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು..
ಅಸಂಖ್ಯಾತ ಅಭಿಮಾನಿಗಳ ರಾಜಕುಮಾರನಾಗಿ ಬದುಕಿದ ಭಾಗ್ಯವಂತನೊಬ್ಬ ಭೌತಿಕ ರೂಪವನ್ನ ತೊರೆದು ಸೂಕ್ಷ್ಮ ರೂಪದಲ್ಲಿ, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನನಾಗಿದ್ದಾನೆ. ಶರಣರ ಗುಣವನ್ನ ಮರಣದಲ್ಲಿ ಕಾಣು ಎನ್ನುವಂತೆ ತಾನು ಸಂಪಾದಿಸಿದ, ಬೆಲೆಕಟ್ಟಲಾಗದ ಜನರ ಅಪಾರ ಪ್ರೇಮವನ್ನ ತನ್ನಲ್ಲಿ ಹೊತ್ತುಕೊಂಡು ಆ ವ್ಯಕ್ತಿ ಕಾಣದಂತೆ ಮಾಯವಾದನು.
ಕಂಠೀರವ ಸ್ಟೂಡಿಯೋದಲ್ಲಿ ಇಂದು ಬೆಳಿಗ್ಗೆ ಸಕಲ ಸರಕಾರಿ ಗೌರವಗಳೊಂದಿಗೆ ಪುನೀತ್ ಅವರ ಅಂತ್ಯಕ್ರಿಯೆ ಜರುಗಿತು. ಅಭಿಮಾನಿಗಳು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಅವರ ತಂದೆ ತಾಯಿಯ ಸಮಾಧಿ ಬಳಿಯಲ್ಲಿಯೇ ಪುನೀತ್ ಚಿರನಿದ್ರೆಗೆ ಜಾರಿದ್ದಾರೆ.
ಕಂಠೀರವ ಸ್ಟೇಡಿಯಂ ನಿಂದ ಇಂದು ಬೆಳಿಗ್ಗೆ ಹೂವಿನ ಪಲ್ಲಕ್ಕಿಯಲ್ಲಿ ಪುನೀತ್ ಪಾರ್ಥಿವ ಶರೀರವನ್ನ ಕಂಠೀರವ ಸ್ಟೂಡಿಯೋಗೆ ಕರೆತರಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಕಾರ್ಯಗಳನ್ನ ಮಾಡಲಾಯಿತು. ಪುನೀತ್ ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅಂತಿಮ ವಿಧಿ ವಿಧಾನಗಳನ್ನ ನೆರೆವೇರಿಸಿದರು.