ಮಂಡ್ಯ : ನಟಿ ರಾಗಿಣಿ ಬಿಜೆಪಿ ಸೇರಿಲ್ಲ, ಉಪಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ ಅಷ್ಟೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್ಲ. ನಮ್ಮ ಯಾವುದೇ ಒಬ್ಬ ಮುಖಂಡ ಡ್ರಗ್ಸ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಈ ವಿಚಾರದಲ್ಲಿ ಸರ್ಕಾರ ಹಿಟ್ ರನ್ ಮಾಡಲ್ಲ. ಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಡ್ರಗ್ಸ್ ದಂಧೆಯನ್ನ ಬುಡಸಮೇತ ಕೀಳುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ನಿಂದ ಯುವಪೀಳಿಗೆ ಅಡ್ಡದಾರಿ ಹಿಡಿಯುತ್ತಿದೆ. ಡ್ರಗ್ಸ್ ದಂಧೆ ಮಟ್ಟಹಾಕಲು ಬಿಜೆಪಿ ಸರ್ಕಾರ ಕಟಿಬದ್ಧವಾಗಿದೆ. ಕಳೆದ ಉಪಚುನಾವಣೆಯಲ್ಲಿ ರಾಗಿಣಿ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು ನಿಜ. ಆದರೆ ಚಿತ್ರನಟ-ನಟಿಯರು ಒಂದೇ ಪಕ್ಷದ ಪರ ಪ್ರಚಾರ ಮಾಡಿದ ಉದಾಹರಣೆ ಇಲ್ಲ. ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ರಾಗಿಣಿ ಬಿಜೆಪಿ ಸೇರಿಲ್ಲ, ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಅಷ್ಟೇ. ಡ್ರಗ್ಸ್ ದಂಧೆ ನೆನ್ನೆ ಮೊನ್ನೆಯದ್ದಲ್ಲ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಸವಾಲನ್ನು ಬಿಜೆಪಿ ಸ್ವೀಕರಿಸಿದೆ. ಈ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.