ರಾಜೀನಾಮೆ ಕೊಟ್ಟು `ಕಂಡೀಷನ್ಸ್ ಅಪ್ಲೆ’ ಎಂದ್ರಂತೆ ಸಾಹುಕಾರರು..!!
ಬೆಂಗಳೂರು : ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಈ ರಾಜೀನಾಮೆ ನೀಡೋವಾಗ ರಮೇಶ್ ಜಾರಕಿಹೊಳಿ ಸಿಎಂಗೆ ಷರತ್ತುಗಳನ್ನ ಹಾಕಿದ್ದಾರೆ ಅನ್ನೋ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಗಿರಗಿಟ್ಟಲೇ ಹೊಡೆಯುತ್ತಿದೆ.
ಹೌದು..! ನಿನ್ನೆ ರಾಸಲೀಲೆಯ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಾಣೆಯಾಗಿದ್ದ ರಮೇಶ್ ಜಾರಕಿಹೊಳಿ ಸಡನ್ ಆಗಿ ಮಾಧ್ಯಮಗಳ ಮುಂದೆ ಬಂದು ನಾನೇನು ತಪ್ಪು ಮಾಡಿಲ್ಲ. ಆ ವಿಡಿಯೋದಲ್ಲಿ ಇರೋದು ನಾನಲ್ಲ. ಅದೊಂದು ಫೇಕ್ ವಿಡಿಯೋ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿ, ಇದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಮಾತೇ ಇಲ್ಲ ಅಂತಾ ಆತ್ಮವಿಶ್ವಾಸದಿಂದ ಹೇಳಿಕೆ ನೀಡಿದ್ದರು. ಆಡಳಿತ ಪಕ್ಷದ ನಾಯಕರು ಕೂಡ ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸುತ್ತಾ, ರಾಜೀನಾಮೆ ಅವಶ್ಯಕತೆ ಇಲ್ಲ ಅಂತಾ ಹೇಳಿಕೆಗಳನ್ನ ನೀಡುತ್ತಿದ್ದರು. ಈ ಮಧ್ಯೆ ಏಕಾಏಕಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಒತ್ತಡದಿಂದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಅನ್ನೊ ಮಾತುಗಳ ಮಧ್ಯೆ ರಾಜೀನಾಮೆ ನೀಡಲು ರಮೇಶ್ ಜಾರಕಿಹೊಳಿ ಕೂಡ ಷರತ್ತುಗಳನ್ನು ಹಾಕಿದ್ದಾರೆ ಅನ್ನೋ ಮಾತು ಭಾರಿ ಸೌಂಡ್ ಮಾಡುತ್ತಿದೆ.
ಷರತ್ತುಗಳು ಏನು..?
ರಾಜೀನಾಮೆ ನೀಡುವಾಗಿ ರಮೇಶ್ ಜಾರಕಿಹೊಳಿ `ನಾನು ರಾಜೀನಾಮೆ ಕೊಟ್ರೆ ನನ್ನ ಕುಟುಂಬಕ್ಕೇ ಸಚಿವಸ್ಥಾನ ಕೊಡಬೇಕು. ಅದೂ ಕೂಡ ಒಂದು ತಿಂಗಳ ಒಳಗೆ ಬಾಲಚಂದ್ರ ಸಚಿವನಾಗಬೇಕು ಅನ್ನೋ ಷರತ್ತನ್ನ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹಾಕಿದ್ದಾರೆ ಅಂತ ಹೇಳಲಾಗುತ್ತಿದೆ. ಒಂದು ವೇಳೆ ಇದು ಸತ್ಯವಾಗಿದ್ದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವರಾಗುವುದು ಪಕ್ಕಾ.
ಎರಡನೇ ಷರತ್ತು : ಜಲಸಂಪನ್ಮೂಲ ಖಾತೆಗೆ ಪಟ್ಟು
ಜಲಸಂಪನ್ಮೂಲ ಖಾತೆ ಮೇಲೆ ಯಾಕೋ ರಮೇಶ್ ಜಾರಕಿಹೊಳಿಗೆ ತುಂಬಾ ಲವ್ ಆಗಿದೆ ಅಂತಾ ಅನ್ಸುತ್ತೆ. ಯಾಕೆಂದ್ರೆ ರಮೇಶ್ ತಮ್ಮ ಎರಡನೇ ಷರತ್ತಿನಲ್ಲಿ ಜಲಸಂಪನ್ಮೂಲ ಖಾತೆಯನ್ನು ನಮ್ಮ ಕುಟುಂಬಕ್ಕೇ ನೀಡಬೇಕು ಅಂತಾ ಹೇಳಿದ್ದಾರಂತೆ. ಅಲ್ಲಿಯವರೆಗೂ ಯಾರಿಗೂ ಈ ಖಾತೆ ನೀಡಬಾರದು ಅಂತ ಷರತ್ತಾಕಿದ್ದಾರೆ ಅನ್ನೋದು ರಾಜಕೀಯ ಮೂಲಗಳ ಖಬರ್.