ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಐಎ ತಂಡ ಇಬ್ಬರು ಶಂಕಿತರನ್ನು ಬಂಧಿಸಿದೆ.
ಬಂಧಿತರು ಬಾಂಬರ್ ಜೊತೆ ನೇರ ಸಂಪರ್ಕದಲ್ಲಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ವಶಕ್ಕೆ ಪಡೆದ ಇಬ್ಬರನ್ನು ತನಿಖೆಗೆ ಒಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 13ರಂದು ಎನ್ ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಶಬ್ಬೀರ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದ ಎಂಬುವುದು ಸದ್ಯ ತನಿಖೆಯಿಂದ ತಿಳಿದು ಬಂದಿದೆ.
ಬಾಂಬ್ ಸ್ಫೋಟಗೊಂಡ ದಿನ ಶಂಕಿತ ಉಗ್ರ ಧರಿಸಿದ್ದ 10 ನಂಬರ್ ಎಂದು ಬರೆದಿದ್ದ ಕ್ಯಾಪ್ನ ಜಾಡು ಹಿಡಿದು ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನಂತರ ಆತ ಕ್ಯಾಪ್ ನ್ನು ಕೆಫೆಯಿಂದ ದೂರ ಇರುವ ಧಾರ್ಮಿಕ ಸ್ಥಳದ ಹತ್ತಿರ ಬಿಟ್ಟು ಶರ್ಟ್ ತೆಗೆದು, ರೌಂಡ್-ನೆಕ್ ಟೀ ಶರ್ಟ್ ಹಾಕಿಕೊಂಡು ಅಲ್ಲಿಂದ ಹೋಗಿದ್ದಾನೆ. ಸದ್ಯ ಟೋಪಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಶಂಕಿತನ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಮೂಲಗಳು ಹೇಳಿವೆ. ಇದರೊಂದಿಗೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.