ತಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಲು ಸಿದ್ಧ – ಸಿದ್ದರಾಮಯ್ಯಗೆ ಸುಧಾಕರ್ ಸವಾಲು
ಬೆಂಗಳೂರು, ಜುಲೈ4: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಕೊರೋನಾ ನಿಯಂತ್ರಣದ ಉಪಕರಣಗಳ ಖರೀದಿಯಲ್ಲಿ ತಮಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಈ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊರೊನಾ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು, ಅದನ್ನು ಬಿಡುಗಡೆ ಮಾಡಿ ಎಂದು ಟ್ವೀಟ್ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನು ಟ್ಯಾಗ್ ಮಾಡಿದ್ದರು.
ಇದಕ್ಕೆ ರೀಟ್ವೀಟ್ ಮಾಡಿರುವ ಸಚಿವ ಸುಧಾಕರ್ ಕೊರೊನಾ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ತಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ಕೊಡಲು ಮುಖ್ಯ ಕಾರ್ಯ ದರ್ಶಿಗಳ ಜೊತೆ ಇಂದೇ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.