ಅಯೋಧ್ಯೆಯಲ್ಲಿ ಜೋರಾಗಿದೆ ರಿಯಲ್ ಎಸ್ಟೇಟ್ ಭರಾಟೆ
ಅಯೋಧ್ಯೆ, ಸೆಪ್ಟೆಂಬರ್28: ಅಯೋಧ್ಯೆಯಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಭೂಮಿ ಬೆಲೆಗಳು ಶೇಕಡಾ 30-40ರಷ್ಟು ಏರಿಕೆಯಾಗಿದ್ದವು. ಈ ವರ್ಷದ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಡೆಸಿ ಕೊಟ್ಟ ಭೂಮಿ ಪೂಜಾ ಸಮಾರಂಭದ ನಂತರ ಅದರ ಮೇಲೆ ದ್ವಿಗುಣಗೊಂಡಿದೆ.
ವಾಸ್ತವವಾಗಿ, ಕಳೆದ ವರ್ಷದಿಂದ ಅಯೋಧ್ಯೆಯಲ್ಲಿ ಆಸ್ತಿ ಬೆಲೆಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಕಳೆದ ವರ್ಷ ಪ್ರತಿ ಚದರ ಅಡಿಗೆ 400-500 ರೂ.ಗಳ ದರದಲ್ಲಿ ಲಭ್ಯವಾಗಿದ್ದ ಅಯೋಧ್ಯೆ ಪಟ್ಟಣದ ಹೊರವಲಯದಲ್ಲಿರುವ ಭೂಮಿ ಈಗ 1,000-1,500 ರೂ ರಷ್ಟಾಗಿದೆ.
ಕರ್ನಾಟಕದಲ್ಲಿ ಎಲ್ಲಾ ಟಿಬಿ ರೋಗಿಗಳಿಗೆ ಕೋವಿಡ್-19 ಪರೀಕ್ಷೆ
ಪಟ್ಟಣದ ಹೃದಯಭಾಗದಲ್ಲಿ, ಭೂಮಿಯ ಲಭ್ಯತೆ ಸೀಮಿತವಾಗಿದ್ದು, ದರವು ಪ್ರತಿ ಚದರ ಅಡಿಗೆ 2,000 ರಿಂದ 3,000 ರೂ.ಗಳಷ್ಟಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಮೊದಲು ಪಟ್ಟಣದಲ್ಲಿ ಪ್ರತಿ ಚದರ ಅಡಿಗೆ 1,000 ರೂ.ಗೆ ಸುಲಭವಾಗಿ ಭೂಮಿಯನ್ನು ಪಡೆಯಬಹುದಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆಯ ಅವಧ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿನೋದ್ ಕುಮಾರ್ ಶ್ರೀವಾಸ್ತವ, ಆಸ್ತಿ ದರಗಳು ಗಗನಕ್ಕೇರುತ್ತಿವೆ. ದೊಡ್ಡ ಉದ್ಯಮಿಗಳಿಂದ ಹಿಡಿದು ಸಾಮಾನ್ಯರವರೆಗೆ ಬಹಳಷ್ಟು ಜನರು ಅಯೋಧ್ಯೆಯಲ್ಲಿ ಭೂಮಿಯನ್ನು ಬಯಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ನ್ಯಾಯಾಲಯದ ತೀರ್ಪಿನಿಂದ, ಅಯೋಧ್ಯೆ ರಿಯಲ್ ಎಸ್ಟೇಟ್ ಭರಾಟೆ ಜೋರಾಗಿ ನಡೆದಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಆಡಳಿತವು ಈಗಾಗಲೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂ ನೋಂದಣಿಗೆ ನಿರ್ಬಂಧ ಹೇರಿದೆ. ಅಯೋಧ್ಯೆಯಲ್ಲಿ ಹೆಚ್ಚಿನ ಸಂಖ್ಯೆಯ ವಿವಾದಿತ ಭೂಪ್ರದೇಶಗಳಿವೆ. ಇದು ಭೂಮಿಯ ಲಭ್ಯತೆಯನ್ನು ಮತ್ತಷ್ಟು ಸೀಮಿತಗೊಳಿಸುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ನೆನೆದು ಕಣ್ಣೀರು ಹಾಕಿದ ಗಾನ ಕೋಗಿಲೆ ಎಸ್ ಜಾನಕಿ
ಅಲ್ಲದೆ, ಆಸ್ತಿ ಏಜೆಂಟರು ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಹಳಷ್ಟು ಗದ್ದೆ ಮತ್ತು ಆಸ್ತಿಗಳಲ್ಲಿ ಯಾವುದೇ ನಿರ್ಮಾಣಕ್ಕೆ ಪರಿಸರ ಅನುಮತಿ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 9 ರಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿತ್ತು ಮತ್ತು ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ ಐದು ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡಿತು. ಉತ್ತರ ಪ್ರದೇಶದ ಪವಿತ್ರ ಪಟ್ಟಣದ ಪ್ರಮುಖ ಸ್ಥಳದಲ್ಲಿ ಹೊಸ ಮಸೀದಿಯನ್ನು ನಿರ್ಮಿಸಲಾಗುತ್ತಿದೆ.