ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ಕಾಂಗ್ರೆಸ್ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಹೆಚ್ ಡಿಕೆ, ಮೈತ್ರಿ ಸರ್ಕಾರ ಪತನ ಬಗ್ಗೆ ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನ ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಬಗ್ಗೆಯೂ ಕುಮಾರಣ್ಣ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ, ನಾವು ಕುಮಾರಸ್ವಾಮಿ ಅವರಿಗೆ ಉತ್ತರ ಕೊಡುವುದಿಲ್ಲ, ಜನರಿಗೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕುಮಾರಸ್ವಾಮಿ ಅವರಿಗೆ ಉತ್ತರ ಕೊಡುವುದಿಲ್ಲ, ಜನರಿಗೆ ಉತ್ತರ ಕೊಡುತ್ತೇವೆ. ಕಾಂಗ್ರೆಸ್ ನವರು ಉತ್ತರ ಕೊಡದೇ ಓಡಿ ಹೋಗುವ ಪಲಾಯನವಾದಿಗಳಲ್ಲ. ಯಾವುದೇ ಸಂದರ್ಭದಲ್ಲಿ ಆದರೂ ಹೆದರಿಸುವ ನೈತಿಕತೆ ಇದೆ. ಬಿಜೆಪಿ ಸರ್ಕಾರದ ಲೋಪಗಳನ್ನ ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ.. ಇದರಲ್ಲಿ ಯಾವುದೇ ಪ್ರಚಾರವನ್ನೂ ಪಡೆಯುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಸರ್ಕಾರ ಅವ್ಯವಹಾರ ನಡೆಸಿರುವ ಬಗ್ಗೆ ದಾಖಲೆಗಳಿದ್ದರೇ ದೂರು ಯಾಕೆ ಕೊಟ್ಟಿಲ್ಲ ಎಂಬ ಹೆಚ್ ಡಿಕೆ ಹೇಳಿಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವ ಉದ್ದೇಶಕ್ಕಾಗಿ ಹೇಳಿದ್ದಾರೋ ಗೊತ್ತಿಲ್ಲ, ಯಾವ ಏಜೆನ್ಸಿಗೆ ಕೊಡಬೇಕು ಅಂತಾ ಅವರೇ ಹೇಳಲಿ. ಅವರು ಹೇಳಿದ ಏಜೆನ್ಸಿಗೆ ಕೊಡುತ್ತೇವೆ. ಅವರೂ ದಾಖಲೆಗಳನ್ನ ಕೊಡಲಿ, ಅವರೂ ಪ್ರತಿಪಕ್ಷದಲ್ಲಿ ಇದ್ದಾರೆ ಅಲ್ಲವೇ. ಅವರಿಗೂ ಜವಾಬ್ದಾರಿ, ಕಳಕಳಿ ಇಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.