ಕೋಲಾರ : ರಾಜ್ಯ ಅಂತರ್ಜಲ ಪ್ರಾಧಿಕಾರವು ಕೋಲಾರ ಜಿಲ್ಲೆಯ ಆರೂ ತಾಲೂಕಿನಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ನಿಯಮ-2011 ಹಾಗೂ 2012ರ ನಿಯಮಾವಳಿ ಅನುಸಾರ ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೋಲಾರ ಜಿಲ್ಲೆಯ ಆರೂ ತಾಲೂಕುಗಳು ಸೇರಿವೆ.
ಈ ಬಗ್ಗೆ ಅಂತರ್ಜಲ ಇಲಾಖೆ ಹಿರಿಯ ಭೂವಿಜ್ಞಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ತಾಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಅದೇ ರೀತಿ ಬಳಕೆದಾರರು ಕಡ್ಡಾಯವಾಗಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕೊಳವೆ ಬಾವಿಗಳನ್ನು ನೋಂದಾಯಿಸಬೇಕು.
ಅನುಮತಿ ಪತ್ರ ಹೊಂದಿರದ ಯಾವುದೇ ವ್ಯಕ್ತಿ ಕೊಳವೆ ಬಾವಿ ಕೊರೆಯಲು ಹಣಕಾಸಿನ ಸಹಾಯ, ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.
ಜೊತೆಗೆ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ ಕೊಳವೆ ಬಾವಿ ಕೊರೆದರೇ ನಿಯಮಾವಳಿಯ ಸೆಕ್ಷನ್ 32ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತೆ.
ಹಾಗೇ ಪ್ರಾಧಿಕಾರದಲ್ಲಿ ನೋಂದಾಯಿಸದೆ ರಿಗ್ ಯಂತ್ರದ ಮಾಲೀಕರು ಬಾವಿ ಅಥವಾ ಕೊಳವೆ ಬಾವಿ ಕೊರೆದರೆ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಕೆ ನೀಡಲಾಗಿದೆ.
ಇನ್ನು ಕೊರೆದ ನಂತರ ಕೊಳವೆ ಬಾವಿಗಳನ್ನು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಹಾಗೂ ಅಂತರ್ಜಲ ಬಳಸಲು ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಪ್ರತಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.