Road safety: ರಸ್ತೆ ಸುರಕ್ಷತೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಅಮರೇಶ.ಎಚ್.ಎಸ್….
ಬೆಂಗಳೂರು: “ಸಂಚಾರ ನಿಯಮಗಳ ಪಾಲನೆ- ಕುಟುಂಬದವರಿಗೆ ಆಶ್ವಾಸನೆ” ಎಂಬ ಮಾತಿನಂತೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್-15018 ಅಮರೇಶ ಎಚ್.ಎಸ್ ರವರು ಇತ್ತೀಚಿಗೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ, ಬೆಂಗಳೂರು ವತಿಯಿಂದ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ 40 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಮಹತ್ವದ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿಯನ್ನ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು “ಸಾರ್ವಜನಿಕರು ಹೊಸ ಮೊಬೈಲ್ ಖರೀದಿಸಿದ ತಕ್ಷಣ ಸುರಕ್ಷತೆಯ ದೃಷ್ಟಿಯಿಂದ ಸ್ಕ್ರೀನ್ ಗಾರ್ಡ್ ಮತ್ತು ಮೊಬೈಲ್ ಪೌಚ್( ಕವಚ ) ನ್ನು ಹಾಕಿಸಿ, ಮೊಬೈಲ್ ಅನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಆದರೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ತಲೆಗೆ ಹೆಲ್ಮೆಟ್ ಇಲ್ಲದೆ ಆಕಸ್ಮಿಕವಾಗಿ ಅಪಘಾತವಾದರೆ ತಲೆಗೆ ಪೆಟ್ಟಾಗಿ ಜೀವ ಹೋಗುವ ಸಂಭವ ಹೆಚ್ಚಾಗಿರುತ್ತದೆ ಎಂಬ ಜ್ಞಾನ ಪ್ರತಿಯೊಬ್ಬರಿಗೂ ಇದ್ದರೂ ಸಹ ದ್ವಿಚಕ್ರ ವಾಹನ ಸವಾರರು ತಮ್ಮ ಜೀವಕ್ಕೆ ರಕ್ಷಣೆ ನೀಡದೆ ಅತೀವ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನವನ್ನು ತೋರಿಸುತ್ತಿರುವುದು ಬೇಸರದ ಸಂಗತಿ” ಎಂದು ತಿಳಿಸಿದರು.
ಯುವ ಸಮುದಾಯ ಹುಟ್ಟುಹಬ್ಬ- ಮದುವೆ ಸಮಾರಂಭದ ಪಾರ್ಟಿಯ ಹೆಸರಲ್ಲಿ ಕುಡಿದು ವಾಹನ ಚಲಾಯಿಸುವಾಗ ಪ್ರಜ್ಞೆ ಇಲ್ಲದೆ ತಾವೇ ಹೋಗಿ ರಸ್ತೆಯ ಡಿವೈಡರ್ ಅಥವಾ ಬೇರೆ ವಾಹನಕ್ಕೆ ಡಿಕ್ಕಿ ಮಾಡಿ ಮರಣ ಹೊಂದಿದರೆ, ನಮ್ಮನ್ನೇ ನಂಬಿರುವಂತಹ ನಮ್ಮ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಕ್ಷಣಿಕ ಮಾತ್ರದ ಪಾರ್ಟಿಯ ಕಿಕ್ ನಮ್ಮ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದರೆ ನಮ್ಮ ಹುಟ್ಟು ವ್ಯರ್ಥವಾಗುತ್ತದೆ.
ಸಮಾಜದಲ್ಲಿ ನಮ್ಮ ಕಣ್ಣ ಮುಂದೆ ಅಪಘಾತಗಳು ಆದಂತಹ ಸಂದರ್ಭದಲ್ಲಿ ಗಾಯಾಳುವನ್ನು ತಕ್ಷಣಕ್ಕೆ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮಾನವೀಯತೆಯನ್ನು ತೋರಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಆಧ್ಯ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಎಂಜಾಯ್ ತೆಗೆದುಕೊಳ್ಳುವ ವಿಕೃತ ಮನಸ್ಸುಗಳು ಹೆಚ್ಚಾಗಿರುವುದು ನೋವಿನ ಸಂಗತಿಯಾಗಿದೆ. ಅಪಘಾತದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯ ಮಾಡುವ ಸಾರ್ವಜನಿಕರಿಗೆ “ಜೀವ ರಕ್ಷಕ” ಎನ್ನುವ ಪ್ರಶಸ್ತಿಯನ್ನು ನೀಡಿ ಸರ್ಕಾರ ಅಭಿನಂದಿಸುವ ಕಾರ್ಯ ಚಾಲ್ತಿಯಲ್ಲಿದೆ.
ಪ್ರತಿಯೊಬ್ಬರ ಜೀವ ಮತ್ತು ಜೀವನ ಕುಟುಂಬಕ್ಕೆ ಆಸ್ತಿ ಇದ್ದಂತೆ ಹಾಗೆಯೇ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಗೂ ಸಹ ಪ್ರತಿಯೊಬ್ಬರು ಆಸ್ತಿವಂತರೇ- ಬೆಂಗಳೂರು ನಗರ ಸಂಚಾರ ಪೊಲೀಸ್ ಸದಾ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಹಿತ ರಕ್ಷಣೆಗೆ ಸಾಕ್ಷಿಪ್ರಜ್ಞೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿ- ಅಪಘಾತಗಳನ್ನು ತಪ್ಪಿಸುವುದರ ಮುಖಾಂತರ ಜೀವಗಳನ್ನು ಉಳಿಸಿಕೊಂಡರೆ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಗೆ ಸಾರ್ಥಕವಾಗುತ್ತದೆ.
ನಾನು ಈ 40 ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅತ್ಯಮೂಲ್ಯ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲು ಸೂಕ್ತ ಸಲಹೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದಂತಹ ನನ್ನ ಇಲಾಖೆಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ನಮ್ಮ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ರೂಪ ಹಡಗಲಿ ಮೇಡಂ ರವರಿಗೆ ಕೃತಜ್ಞನಾಗಿರುತ್ತೇನೆ ಎಂದು ಅಮರೇಶ್ ಹಚ್ ಎಸ್ ತಿಳಿಸಿದ್ದಾರೆ.
Road safety: Police constable Amaresha H.S. is constantly creating awareness about road safety.