ಸದ್ಯದ ಕೊರೊನಾ ಪರಿಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ : ಭಾಗವತ್
ನವದೆಹಲಿ : ಮೊದಲ ಅಲೆ ಬಳಿಕ ದೇಶದಲ್ಲಿ ಸದ್ಯದ ಪರಿಸ್ಥಿತಿಗೆ ಸರ್ಕಾರ, ಆಡಳಿತ ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವಿಚಾರವಾಗಿ ಆನ್ ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋಹನ್ ಭಾಗವತ್, ಕೊರೊನಾ ಬಗ್ಗೆ ವೈದ್ಯರು ಎಷ್ಟೇ ಎಚ್ಚರಿಕೆ ನೀಡಿದರೂ ಸರ್ಕಾರ, ಆಡಳಿತ ವರ್ಗ ಇದನ್ನ ನಿರ್ಲಕ್ಷ್ಯಸಿದ್ದು, ಜನರು ಕೂಡ ಇದನ್ನೇ ಮುಂದುವರೆಸಿದ್ದಾರೆ.
ಹೀಗಾಗಿಯೇ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇಂತಹ ಪರೀಕ್ಷೆ ಸಂದರ್ಭದಲ್ಲಿ ದೇಶದ ಜನತೆ ಇತರರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಒಗ್ಗಟ್ಟಾಗಿ, ತಂಡಗಳಾಗಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಮೂರನೇ ಅಲೆ ವಿಚಾರವಾಗಿ ಮಾತನಾಡಿ, ನಾವು ಯಾವುದಕ್ಕೂ ಹೆದರಬಾರದು, ಬಂಡೆಯಂತೆ ನಿಲ್ಲಬೇಕು.
ಪ್ರಸ್ತುತ ಪರಿಸ್ಥಿತಿಯಲ್ಲಿ ಋಣಾತ್ಮಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆಕೊಟ್ಟರು.