ಹಾಸನ: ಜಿಲ್ಲೆಯ ಹೊಳೆನರಸೀಪುರದ ಲಕ್ಷ್ಮೀನರಸಿಂಹ ರಥೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ನಡೆದಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ರಥದ ಹಗ್ಗ ಎಳೆಯುವ ಸಂದರ್ಭದಲ್ಲಿ ಹತ್ತಾರು ಜನರು ಆಯ ತಪ್ಪಿ ಕೆಳಗೆ ಬಿದ್ದು, ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಈ ವೇಳೆ ಗಾಬರಿಯಾಗಿರುವ ಜನರು ಒಬ್ಬರ ಮೇಲೆ ಒಬ್ಬರು ತುಳಿದುಕೊಂಡು ಹೋಗಿದ್ದಾರೆ. ಸದ್ಯ ಕೆಳಗೆ ಬಿದ್ದವರನ್ನು ಮೇಲೆ ಎತ್ತಲಾಗಿದ್ದು, ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.
ಮಾಜಿ ಸಚಿವ ರೇವಣ್ಣ ಕುಟುಂಬ ಸಮೇತರಾಗಿ ಜಾತ್ರೆಗೆ ಆಗಮಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರಿಗೆ ರಥಕ್ಕೆ ಎಸೆಯಲಾದ ಬಾಳೆಹಣ್ಣು ರಭಸವಾಗಿ ಬಂದು ತಗುಲಿದೆ.
ಈ ವೇಳೆ ಮಾತನಾಡಿದ ಎಚ್.ಡಿ. ರೇವಣ್ಣ, ಪ್ರತಿ ವರ್ಷವೂ ನಾವು ಕುಟುಂಬ ಸಮೇತರಾಗಿ ಜಾತ್ರೆಗೆ ಆಗಮಿಸುತ್ತೇವೆ. ಜನತೆಗೆ ಒಳ್ಳೆಯದಾಗಲಿ, ಒಳ್ಳೆಯ ಮಳೆ, ಬೆಳೆ ಆಗಲಿ, ಈ ಬಾರಿ ಲೋಕಸಕಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ನಮ್ಮ ಮೈತ್ರಿ ಗೆದ್ದು, ಮೋದಿ ಪ್ರಧಾನಿಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.