SA vs IND | ದಿನೇಶ್ ದರ್ಬಾರ್, ಆವೇಶ್ ವೇಗ
ರಾಜ್ ಕೋಟ್ ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದ ಅಂತರದಲ್ಲಿ ಗೆಲುವು ಸಾಧಿಸಿದೆ.
ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ 2-2 ರಲ್ಲಿ ಸಮಬಲ ಸಾಧಿಸಿದೆ.
ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು.
ಈ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 87 ರನ್ಗಳಿಗೆ ಆಲೌಟ್ ಆಯ್ತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ 82 ರನ್ಗಳ ಹೀನಾಯ ಸೋಲನುಭವಿಸಿತು. ಇದರೊಂದಿಗೆ ಸರಣಿ ಸಮಬಲಗೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀ ಇಂಡಿಯಾಗೆ ಆಘಾತ ಎದುರಾಯ್ತು. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(5), ಇಶಾನ್ ಕಿಶನ್(27), ಶ್ರೇಯಸ್ ಅಯ್ಯರ್(4) ಹಾಗೂ ರಿಷಬ್ ಪಂತ್(17) ರನ್ ಗಳಿಸಿ ಔಟ್ ಆದರು.

ಈ ಸಂಕಷ್ಟದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಆಸರೆ ಆದರು. ಹಾರ್ದಿಕ್ ಜೊತೆ ಸೇರಿ ದಿನೇಶ್ ಕಾರ್ತಿಕ್ ಉತ್ತಮ ಇನ್ನಿಂಗ್ಸ್ ಕಟ್ಟಿದರು.
ಆದರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 46 ರನ್ ಗಳಿಗೆ ಔಟ್ ಆದರು. ಇತ್ತ ಸ್ಪೋಟಕ ಆಟವಾಡಿದ ದಿನೇಶ್ ಕಾರ್ತಿಕ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ದಿನೇಶ್ ಕಾರ್ತಿಕ್ 55 ರನ್ ಗಳಿಸಿ ಕೊನೆಯ ಓವರ್ ನಲ್ಲಿ ಔಟ್ ಆದರು.
ಪರಿಣಾಮ ಭಾರತ 20 ಓವರ್ಗಳಲ್ಲಿ 169 ರನ್ಗಳಿಸಿತು. ಸೌತ್ ಆಫ್ರಿಕಾ ಪರ ಎನ್ಗಿಡಿ 2, ಜಾನ್ಸನ್, ಪ್ರಿಟೋರಿಯಸ್, ನೋಕಿಯಾ ಹಾಗೂ ಮಹಾರಾಜ್ ತಲಾ 1 ವಿಕೆಟ್ ಪಡೆದರು.
ಟೀಂ ಇಂಡಿಯಾ ನೀಡಿದ 170 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ, ಆವೇಶ್ ಖಾನ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾದ ಕ್ವಿಂಟನ್ ಡಿಕಾಕ್ 14 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಕಣಕ್ಕಿಳಿದ ದುಸೇನ್(20) ರನ್ಗಳಿಸಿದ್ದು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಕ್ಲಾಸನ್(8), ಮಿಲ್ಲರ್(9) ಹಾಗೂ ಜಾನ್ಸನ್(12) ರನ್ ಗಳಿಸಿದರು.
ಕೆಳ ಕ್ರಮಾಂಕದಲ್ಲಿ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 87 ರನ್ ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಆವೇಶ್ ಖಾನ್ ನಾಲ್ಕು ವಿಕೆಟ್, ಚಹಲ್ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.







