ಧರ್ಮ ಸ್ವತಂತ್ರ, ಧರ್ಮ ನಿರಾವಲಂಬಿ ಮತ್ತು ಧರ್ಮ ದೇವರಂತೆಯೇ ಸರ್ವವ್ಯಾಪಿ;
ಧರ್ಮರಕ್ಷಕರೆಂಬ ಪಾಖಂಡಿಗಳಿಂದ ದೂರವಿರಿ ನಿಜವಾದ ಭಗವಂತ ನಿಮಗೆ ಹತ್ತಿರನಾಗುತ್ತಾನೆ:Saakshatv Oshoyisam episode 3
ಓಶೋ ತಮ್ಮ ಉಪನ್ಯಾಸಗಳಲ್ಲಿ ನಿಜವಾದ ಧರ್ಮ ಎಂದರೇನು? ನಿಜವಾದ ಭಕ್ತಿ ಎಂದರೇನು? ಭಕ್ತಿಮಾರ್ಗದ ಅನುಸರಣೆ ಮುಕ್ತಿಮಾರ್ಗದ ನಿರೀಕ್ಷಣೆ ಮತ್ತು ಸದ್ಧರ್ಮ ಪಾಲನೆಯಿಂದ ಭಗವಂತನ ಒಲೈಕೆ ಹೇಗೆ ಸಾಧ್ಯ? ಎಂಬಿತ್ಯಾದಿಗಳು ಅನೇಕ ಆಯಾಮಗಳನ್ನು ಅನೇಕ ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಓಶೋ ವ್ಯಾಖ್ಯಾನಿಸಿದ ಸ್ವತಂತ್ರ ಧರ್ಮ ಮತ್ತು ನಿರಾವಲಂಬಿ ಧರ್ಮಗಳು ಸಂಪ್ರದಾಯದತ್ತ ದೈವ ಕೇಂದ್ರಿತ ಧರ್ಮಕ್ಕೆ ಸಂಪೂರ್ಣ ವಿರುದ್ಧ
ದಿಕ್ಕಿನಲ್ಲಿರುವಂತದ್ದು. ಧರ್ಮ ಎನ್ನುವ ಅಂಶ ರಾಜಕಾರಣದ ಒಳಗೆ ಸೇರಿಕೊಂಡರೆ
ಅದರಿಂದಾಗುವ ಅಪಾಯಗಳೇನು? ಸಮಾಜವನ್ನು ಈ ಧರ್ಮ ರಾಜಕಾರಣ ಹೇಗೆ ಅಜ್ಞಾನದ ಕಂದಕಕ್ಕೆ ಕೆಡವುತ್ತದೆ ಎಂಬ ಕುರಿತಾಗಿಯೂ ಓಶೋ ಸುದೀರ್ಘವಾಗಿ ಚರ್ಚಿಸಿದ್ದಾರೆ. ಓಶೋ ಕಂಡುಕೊಂಡ ಭಗವಂತ, ಓಶೋ ದೃಷ್ಟಿಯಲ್ಲಿ ವ್ಯಾಖ್ಯಾನಿಸಿದ ಧರ್ಮಕ್ಕೆ ಯಾವುದೇ ಅವಲಂಬನೆಯ ಹಂಗಿಲ್ಲ. ಯಾವುದೇ ನೆಲೆಯ ಅವಶ್ಯಕತೆಯಿಲ್ಲ. ಯಾವುದೇ ಬಂಧನದ ಭೀತಿಯಿಲ್ಲ.
Saakshatv Oshoyisam episode 3
***
ಧರ್ಮ ಅನ್ನುವ ಭ್ರಾಂತಿಗೆ ಒಳಗಾಗುವವರೇ ಧರ್ಮ ರಕ್ಷಣೆ ಮಾಡುತ್ತೇವೆ ಎನ್ನುವ ಹುಚ್ಚು
ನೆತ್ತಿಗೇರಿಸಿಕೊಳ್ಳುತ್ತಾರೆ. ಧರ್ಮಕ್ಕೆ ಯಾವ ದೊಣ್ಣೆನಾಯಕನ ರಕ್ಷಣೆಯ ಅಗತ್ಯವೇ
ಇಲ್ಲ. ತಾನು ಧರ್ಮವನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಹೊತ್ತಿದ್ದೇನೆ ಎಂದು ಹೇಳುವ
ಹುಚ್ಚನಿಗೆ ಧರ್ಮದ ನಿಜವಾದ ಅರ್ಥವೇ ತಿಳಿದಿರುವುದಿಲ್ಲ. ಅವನು ತನ್ನ ಹುಚ್ಚನ್ನು
ಸಮಾಜಕ್ಕೆ ವರ್ಗಾಯಿಸುತ್ತಾನೆ. ಧರ್ಮದ ಅರ್ಥ ತಿಳಿಯದ ಸಮಾಜದ ಮುಗ್ದ ಜನ ಇದನ್ನೇ
ಸತ್ಯವೆಂದು ನಂಬಿಕೊಂಡು ಸಮೂಹ ಸನ್ನಿಯಲ್ಲಿ ತೇಲುತ್ತಾರೆ. ಧರ್ಮ ನಿರಾವಲಂಬಿ ಆದರೆ
ಧರ್ಮದ ರಕ್ಷಣೆ ಮಾಡುತ್ತೇವೆನ್ನುವ ಜನರಿದ್ದಾರಲ್ಲ ಅವರು ಪರಾವಲಂಬಿಗಳು. ಅವರು ಮೊದಲು ಹುಡುಕುವುದೇ ಧರ್ಮವೆನ್ನುವ ಅವರ ಹುಸಿ ನಂಬಿಕೆಯ ಬಳ್ಳಿಗೆ ದೈವ ಎನ್ನುವ ಬೃಹತ್ ವೃಕ್ಷ. ಇಲ್ಲಿ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾದ ಸತ್ಯವೊಂದಿದೆ. ಧರ್ಮ ಎನ್ನುವ ಮೂಲ ಆಶಯಕ್ಕೆ ಯಾವುದೇ ಆಸರೆಗಳ ಅಗತ್ಯವಿಲ್ಲ. ಅದು ತನ್ನಿಂತಾನೇ ಹಬ್ಬಿ ಹರಡುವ ಹಸಿರು ಪ್ರಕೃತಿಯಿದ್ದಂತೆ, ಪ್ರಕೃತಿಯಷ್ಟೇ ವಿಸ್ಮಯಕಾರಿ, ಪ್ರಕೃತಿಯಷ್ಟೇ ಕರುಣಾಮಯಿ ಹಾಗೂ ಪ್ರಕೃತಿಯಂತೆಯೇ ಸ್ವಚ್ಛಂದ ಪ್ರವೃತ್ತಿಯುಳ್ಳದ್ದು. ಅಸಲಿ ಧರ್ಮವೆನ್ನುವ ರಥಕ್ಕೆ
ಪ್ರಕೃತಿಯೇ ಕುದುರೆಗಳು. ಅಸಲಿ ಧರ್ಮ ಎನ್ನುವ ದೇವಾಲಯದ ಗರ್ಭಗುಡಿಯ ದೇವರು ಪ್ರಕೃತಿ
ಮಾತ್ರವೇ. ಅಸಲಿ ಧರ್ಮ ಎನ್ನುವ ಬೃಹತ್ ಸೌಧದ ತಳಪಾಯ ಪ್ರಕೃತಿ ಮಾತ್ರವೇ. ಅಸಲಿ ಧರ್ಮ ಎನ್ನುವ ಪತಂಗದ ಸೂತ್ರವೇ ಪ್ರಕೃತಿ. ಅಸಲಿ ಧರ್ಮ ಎನ್ನುವುದು ಒಂದು ಅನನ್ಯ
ಕಲಾಕೃತಿಯಾದರೇ ಅದನ್ನು ಕೆತ್ತುವ ಕಲಾವಿದ ಪ್ರಕೃತಿ. ಧರ್ಮ ಎನ್ನುವ ಪಾಠಶಾಲೆಗೆ
ಪ್ರಕೃತಿಯೇ ಏಕೋಪಾಧ್ಯಾಯ. ಧರ್ಮವನ್ನು ಉಳಿಸುತ್ತೇವೆ ಎಂದು ಬಡಾಯಿ
ಕೊಚ್ಚಿಕೊಳ್ಳುವ ಯಾರಿಗೂ ಧರ್ಮದ ಮೂಲನೀತಿಯ ಅರಿವೇ ಇರುವುದಿಲ್ಲ. ಅಸಲಿ ಧರ್ಮಹಿಡಿಯಲ್ಲಿ ಹಿಡಿದುಕೊಳ್ಳಲಾಗದ ಮಹಾಸಮುದ್ರದ ನೀರಿದ್ದಂತೆ. ಅದಕ್ಕೊಂದು ನೆಲೆ ಕೊಟ್ಟಿದ್ದು ಪ್ರಕೃತಿ ಎಂಬ ಗೋಚರ ವಾಸ್ತವ ಮಾತ್ರ. ಧರ್ಮ ಎನ್ನುವ ಬ್ರಹ್ಮನಿಗೆ ಸತ್ಯ,
ನ್ಯಾಯ, ಕಾರುಣ್ಯ ಮತ್ತು ಪ್ರೇಮಗಳೆಂಬ ನಾಲ್ಕು ತಲೆಗಳಿವೆ. ಧರ್ಮ ಎನ್ನುವ ಜಗನ್ಮಾತೆಗೆ ಒಂದು ಕಡೆ ಸತ್ಯ, ನ್ಯಾಯ, ಕಾರುಣ್ಯ ಮತ್ತು ಪ್ರೇಮ ಮತ್ತೊಂದು ಕಡೆ ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ಸಹನೆ ಮತ್ತು ಪ್ರಜ್ಞಾವಂತಿಕೆ ಎಂಬ ಅಷ್ಟಬಾಹುಗಳಿವೆ. ಧರ್ಮ ಎಂಬ ಶಿವನ ಕೊರಳಲ್ಲಿ ಸತ್ಯ ಎಂಬ ಘಟಸರ್ಪವಿದೆ, ನ್ಯಾಯ ಎನ್ನುವ ತ್ರಿಶೂಲವಿದೆ, ಪ್ರೇಮ ಎನ್ನುವ ಮೂರನೆಯ ಕಣ್ಣು ಹಾಗೂ ಶಿರದಲ್ಲಿ ಕಾರುಣ್ಯವೆಂಬ ಗಂಗೆಯಿದ್ದಾಳೆ. ಧರ್ಮದ ಕಲ್ಪನೆಯನ್ನು ಹೀಗೆ ಮಾಡಿಕೊಳ್ಳಬೇಕೇ ವಿನಃ ದೈವ ಕೇಂದ್ರಿತವಾಗಿ ಧರ್ಮವನ್ನು ಸೃಜಿಸಬಾರದು. Saakshatv Oshoyisam episode 3
ದೈವ ಕೇಂದ್ರಿತ ಧರ್ಮ ಎನ್ನುವುದೊಂದು ದೊಡ್ಡ ಮಿಥ್ಯ. ಈ ಕಪೋಲಕಲ್ಪಿತ ಮಿಥ್ಯಾ
ಧರ್ಮಕ್ಕೆ ನೆಲೆಯಿಲ್ಲ. ಇದಕ್ಕೊಂದು ಆಸರೆ ಬೇಕು. ಅದು ದೈವದ ಆಸರೆ, ದೇಗುಲಗಳ ಆಸರೆ, ಪುರೋಹಿತರ ಆಸರೆ, ಸಂಪ್ರದಾಯಗಳ ಆಸರೆ, ಚರ್ಚು-ಮಸೀದಿ-ಪ್ರಾರ್ಥನಾ ಮಂದಿರಗಳ ಆಸರೆ. ಈ ಮಿಥ್ಯಾ ಧರ್ಮ ಒಂದು ತರಹದ ಮಾರುಕಟ್ಟೆಯಷ್ಟೆ. ಇಲ್ಲಿ ಸ್ವತಃ ಈ ಮಿಥ್ಯಾ ಧರ್ಮವೇ ಒಂದು ಮಾರಾಟದ ಸರಕು. ಇಲ್ಲಿ ಅಧ್ಯಾತ್ಮದ ಹೆಸರಲ್ಲಿ ನಡೆಯುವುದು ಧರ್ಮಬೋಧನೆಯಲ್ಲ; ಶುದ್ಧ ವ್ಯಾಪಾರವಷ್ಟೆ. ನೀನು ಧರ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? ಧರ್ಮದ ದೃಷ್ಟಿಯಲ್ಲಿ ಧರ್ಮವನ್ನು ಅನುಸರಿಸುವವನು ಗ್ರಾಹಕನೇ? ಧರ್ಮದ ತಿರುಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಮೂರ್ಖರು ಧರ್ಮವನ್ನು ವ್ಯಾಪಾರ ಮಾಡಲು ಹೊರಟಿದ್ದಾರೆ. ಮೂರ್ಖರ ಮಾತುಗಳನ್ನೇ ನಂಬಿ ಅವರ ಬಾಯಲ್ಲಿ ಉದುರಿದ ಧರ್ಮದ ಸ್ವರೂಪವೇ ನಿಜವೆಂದುಕೊಂಡ ಅಧರ್ಮಿಗಳು ಮಾತ್ರ ಸಂಪ್ರದಾಯಗಳೆಂಬ ಕೂಪದಲ್ಲಿ ಬಿದ್ದು ಮೇಲೆ ಏಳಲಾಗದಂತೆ ಒದ್ದಾಡುತ್ತಿದ್ದಾರೆ. ಇವರಿಗೆ ಸತ್ಯದರ್ಶನ ಮಾಡಿಸಬೇಕು ಎಂದರೆ ಇವರ ಧರ್ಮವನ್ನು ಮಿಥ್ಯವೆಂದು ಸಾಬೀತು ಮಾಡಬೇಕು. ಆದರೆ ಮಿಥ್ಯಾ ಧರ್ಮದ ಅನುಸರಣೆಯೆಂಬ ಕುರುಡು ವ್ಯಾಮೋಹ ಇವರನ್ನು ಬಿಡಲಾರದು. ಒಂದು ವೇಳೆ ಇವರು ಸತ್ಯದರ್ಶನಕ್ಕೆ ಸಿದ್ಧರಾದರೂ ಇವರನ್ನು ದಾರಿ ತಪ್ಪಿಸಲು ಸಿದ್ಧರಾಗಿರುವ ಧೂರ್ತ ಧರ್ಮಪ್ರವರ್ತಕರು ಚಾಟಿ ಹಿಡಿದು
ನಿಂತಿರುತ್ತಾರೆ. ಇವರು ಜನರನ್ನು ಶ್ರದ್ಧೆಯಿಂದಲ್ಲ, ಭಕ್ತಿಯಿಂದಲ್ಲ ಕೇವಲ ಭಯದಿಂದ
ಕಟ್ಟಿಹಾಕಿದ್ದಾರೆ. ಅದೇ ದೈವದ ಭಯ, ಸಂಪ್ರದಾಯಗಳ ಭಯ, ಶಾಪದ ಭಯ.
ಈಶ್ವರನೋ, ಬ್ರಹ್ಮನೋ, ಅವತಾರಿ ವಿಷ್ಣುವೋ, ಜಗನ್ಮಾತೆಯೋ ತನ್ನ ಭಕ್ತರನ್ನು
ಪ್ರೀತಿಸುತ್ತಾರೆಯೇ ಅಥವಾ ಭಯಭೀತಗೊಳಿಸಿ ಕಪಿಮುಷ್ಟಿಯಲ್ಲಿ ಬಂಧಿಯಾಗಿಸಿಕೊಳ್ಳುತ್ತಾರೆಯೇ! ಪುರಾಣಗಳ ಪ್ರಕಾರ ಬ್ರಹ್ಮನಿಗೆ ಗುಡಿಯೇ ಇಲ್ಲ;
ಪೂಜೆಯೂ ಇಲ್ಲ. ಹಾಗೆಯೇ ಧರ್ಮಕ್ಕೂ ಸರಪಳಿ ಬಿಗಿದು ಲಾಯಕ್ಕೆ ಕಟ್ಟಿಹಾಕಬೇಕಿಲ್ಲ,
ಪೂಜೆಯಿಲ್ಲ ಎಂದ ಮಾತ್ರಕ್ಕೆ ಬ್ರಹ್ಮನ ಅಸ್ತಿತ್ವ ಸುಳ್ಳೇ? ಅವನು ಸೃಷ್ಟಿಕರ್ತನಲ್ಲವೇ? ಹಾಗೆಯೇ ಧರ್ಮದ ಅಸ್ತಿತ್ವವೂ ಸಹ, ಅದನ್ನು ಪ್ರತಿನಿತ್ಯ
ಆರಾಧಿಸಿ, ಮಂತ್ರಾಕ್ಷತೆ, ಧೂಪದೀಪಾರತಿ ಮಾಡಿ ಭಜಿಸುವ ಅಗತ್ಯವಿಲ್ಲ. ಅದರ ಪಾಡಿಗದು
ಇರುತ್ತದೆ. ನಾವು ಅಸಲಿ ಧರ್ಮಸೂತ್ರಗಳನ್ನು ಪಾಲಿಸಿ ಬದುಕಿದರಷ್ಟೇ ಸಾಕು. ಪುರಾಣಗಳ
ಅನ್ವಯ ಶಿವನಿಗೆ ಬದಲು ಲಿಂಗಕ್ಕೆ ಪೂಜೆಯಾಗುತ್ತದೆ ಅಂದರೆ ಧರ್ಮದ ವ್ಯಾಖ್ಯಾನ ಎನ್ನುವ ಅಲಂಕಾರಕ್ಕೆ ಬದಲು ಧರ್ಮಸೂತ್ರವೆಂಬ ಲಿಂಗವನ್ನು ಆರಾಧಿಸಿದರೆ ಸಾಕು. ಧರ್ಮಸಂಸ್ಥಾಪನೆಗೆ ವಿಷ್ಣು ಹತ್ತು ಅವತಾರಗಳನ್ನು ಎತ್ತಿದ; …ಸಂಭವಾಮಿ ಯುಗೇ ಯುಗೇ. Saakshatv Oshoyisam episode 3
ಧರ್ಮಕ್ಕೂ ಅವತಾರಗಳಿವೆ. ಆಯಾ ಕಾಲಘಟ್ಟಕ್ಕನುಗುಣವಾಗಿ ಧರ್ಮವೂ ರೂಪಾಂತರ ಹೊಂದುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಮಾಡಿಕೊಳ್ಳುತ್ತದೆ. ಆದರೆ ಧರ್ಮದ ಮೂಲನೆಲೆಯಾದ ಸತ್ಯ, ನ್ಯಾಯ, ಕಾರುಣ್ಯ ಮತ್ತು ಪ್ರೇಮಗಳ ಮೂಲಪ್ರತಿಮೆ ಹಾಗೆಯೇ ಇರುತ್ತದೆ. ನಾವು ಉತ್ಸವ ಮೂರ್ತಿಯನ್ನು ಮಾತ್ರ ಗಮನಿಸುತ್ತಿದ್ದೇವೆ, ನಮಿಸುತ್ತಿದ್ದೇವೆ. ನಿಜವಾದ ಮೂರ್ತಿ ಗರ್ಭಗುಡಿಯಲ್ಲಿದೆ.
ಧರ್ಮ ಸಂಸ್ಥಾಪನೆಗೆ ಸಂಘಟನೆಗಳ ಅವಶ್ಯಕತೆಯೇ ಇಲ್ಲ. ಧರ್ಮವನ್ನು ಜನ
ಹೃದಯದಲ್ಲಿಟ್ಟುಕೊಂಡರೇ ಸಾಕು, ಸಂಘ ಕಟ್ಟಿ ಧರ್ಮವನ್ನುಳಿಸಬೇಕಾದ ಜರೂರತ್ತು ಎಂದಿಗೂ
ಇಲ್ಲ. ಯಾವುದಾದರೂ ಧರ್ಮ ರಕ್ಷಣೆಯ ಸಂಘಟನೆ ಅಸ್ಥಿತ್ವದಲ್ಲಿದೆ ಎಂದಾದರೇ ಅವರ ಅಸಲು ಉದ್ದೇಶ ಧರ್ಮ ರಕ್ಷಣೆಯಲ್ಲ ಅದರ ಹಿಂದಿನ ಅಜೆಂಡಾ ಬೇರೆಯೇ ಇದೆ ಎಂದು ಅರ್ಥ
ಮಾಡಿಕೊಳ್ಳಬೇಕಿದೆ. ಧರ್ಮ ಎನ್ನುವ ಎರಡೂವರೆ ಅಕ್ಷರದ ಪದ ರಾಜಕಾರಣದ ಅತ್ಯಂತ ಶಕ್ತಿಶಾಲಿ ಅಸ್ತ್ರ. ರಾಜಕಾರಣವಾಗಲೀ, ಪ್ರಭುತ್ವವಾಗಲೀ ಧರ್ಮವನ್ನು ಉಳಿಸುವುದಿಲ್ಲ.
ಧರ್ಮರಕ್ಷಣೆಯ ಪ್ರತಿಜ್ಞೆ ಮಾಡುವ ಯಾವ ನೇತಾರರೂ, ನಾಯಕರೂ, ಧರ್ಮಗುರುಗಳೂ ಧರ್ಮವನ್ನು ರಕ್ಷಿಸುವ ಕೆಲಸ ಮಾಡುವುದಿಲ್ಲ. ಧರ್ಮಕ್ಕೆ ರಕ್ಷಣೆಯೇ ಬೇಕಿಲ್ಲ ಎಂದ ಮೇಲೆ
ಅದಕ್ಕೊಂದು ಸಂಘಟನೆಯೇತಕ್ಕೆ. ಧರ್ಮ ಎನ್ನುವುದು ಸ್ವತಂತ್ರ ಸ್ಥಿತಿ. ಅದು
ಸ್ವತಂತ್ರವಾಗಿ ಬದುಕುತ್ತದೆ, ಸ್ವತಂತ್ರವಾಗಿ ಚಲಿಸುತ್ತದೆ. ಧರ್ಮವನ್ನು ಸಂಘಟನೆಗಳು
ಬಂಧಿಸಿ ಪೋಷಿಸುವ ಮೂರ್ಖ ಪ್ರಯತ್ನ ಮಾಡುತ್ತವೆ. ಧರ್ಮಸಂಘಟನೆ ಎನ್ನುವುದು
ಬೊಗಸೆಯಲ್ಲಿ ತುಂಬಿಕೊಂಡ ಹಿಡಿನೀರಿನಷ್ಟು ಮಾತ್ರ. ಧರ್ಮದ ಗಾತ್ರ ವ್ಯಾಪ್ತಿ ಮತ್ತು
ವಿಸ್ತಾರ ಬಹುದೊಡ್ಡದು. ಅದನ್ನು ಅಳತೆ ಮಾಡುವ ಸಾಮರ್ಥ್ಯ ಅವರಿಗಾರಿಗೂ ಇಲ್ಲ.
ತಮ್ಮನ್ನು ತಾವು ಧರ್ಮನಿಷ್ಠರು ಮತ್ತು ಧರ್ಮ ರಕ್ಷಕರು ಎಂದು ಕರೆದುಕೊಳ್ಳುವ ಮಂದಿ
ಮೂರ್ಖರಷ್ಟೇ ಅಲ್ಲ ನಿಜವಾದ ಧರ್ಮಕಂಟಕರು. ಇವರು ಒಂದಿಡೀ ಸಮಾಜದ ದಾರಿ ತಪ್ಪಿಸಿ ಅಜ್ಞಾನಿಗಳನ್ನಾಗಿಸಿ ಅಧರ್ಮಿಗಳನ್ನಾಗಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಅಸಲು ಧರ್ಮ ಯಾವತ್ತಿಗೂ ಇಂತಹವರನ್ನು ಕ್ಷಮಿಸುವುದಿಲ್ಲ.
ಅಂತಿಮವಾಗಿ ನಾವು ಅರ್ಥಮಾಡಿಕೊಳ್ಳಬೇಕಿರುವುದು ಪ್ರಕೃತಿ ಎಂಬ ವಾಸ್ತವ ಸತ್ಯ ಮಾತ್ರವೇ. ನಿಜವಾದ ಧರ್ಮ ಉಳಿದ ದೈವಗಳೆಲ್ಲವೂ ಮಿಥ್ಯೆ. ಉಳಿದ ಸಂಪ್ರದಾಯಗಳು, ಗುಡಿ, ಚರ್ಚು,
ಮಸೀದಿ, ಪ್ರಾರ್ಥನಾಮಂದಿರಗಳ ಪ್ರೇರಿತ ಪುರೋಹಿತಶಾಹಿಗಳೆಲ್ಲವೂ ಮಿಥ್ಯೆ. ಸ್ವಾರ್ಥ,
ಕಪಟ, ವಂಚನೆ, ಲೋಭ, ಕುಯುಕ್ತಿ, ಅಜ್ಞಾನ, ಅವಿವೇಕತನ, ಅಧರ್ಮ ರಾಜಕಾರಣ
ಇವೆಲ್ಲವುಗಳಿದ್ದಲ್ಲಿ ಧರ್ಮವಿರುವುದಿಲ್ಲ. ಧರ್ಮ ರಾಜಕಾರಣ ಮತ್ತು ಧರ್ಮ ಸಂಘಟನೆಗಳು
ಈ ಮೇಲಿನ ಎಲ್ಲಾ ಗುಣಗಳ ಆಶ್ರಯದಾತ ವ್ಯವಸ್ಥೆ. ಹೀಗಿದ್ದಾಗ ಅಸಲು ಧರ್ಮ ಇಲ್ಲಿ ಹೇಗೆ
ಬದುಕಿದ್ದೀತು? ಧರ್ಮವಿದ್ದಲ್ಲಿ ದೇವರಿರುವುದಿಲ್ಲ. ದೇವರಿದ್ದಲ್ಲಿ ಧರ್ಮವಿರುವುದಿಲ್ಲ. ದೇವರೇ ಬೇರೆ, ಪ್ರಕೃತಿಯೇ ಬೇರೆ, ಧರ್ಮವೇ ಬೇರೆ. ಈ ಮೂರು ಆಯಾಮಗಳು ಒಂದಕ್ಕೊಂದು ವಿರುದ್ಧ ಪದಗಳು. ಭಕ್ತಿಮಾರ್ಗ, ಮುಕ್ತಿಮಾರ್ಗ ಮತ್ತು ಅಸಲು ಸದ್ಧರ್ಮ ಪಾಲನೆಯಿಂದ ಮಾತ್ರ ನಿಜವಾದ ದೇವರು ಒಲಿಯುತ್ತಾನೆ. ಆತ ಮಂದಿರ, ಮಸೀದಿ, ಚರ್ಚುಗಳ ಚೌಕಟ್ಟಿನಲ್ಲಿ ಬಂಧಿಯಲ್ಲ. ಧರ್ಮ ಹೇಗೆ ಸ್ವತಂತ್ರವೋ ದೇವರೂ ಹಾಗೆಯೇ ಸ್ವತಂತ್ರ. ಧರ್ಮ ಹೇಗೆ ಸರ್ವವ್ಯಾಪಿಯೋ ದೇವರೂ ಹಾಗೆಯೇ ಸರ್ವವ್ಯಾಪಿ. ಅಣುರೇಣು ತೃಣಕಾಷ್ಟಗಳಲ್ಲಿ ದೇವರಿದ್ದಂತೆ ಧರ್ಮವೂ ಹಾಸುಹೊಕ್ಕಿರುತ್ತದೆ. ಧರ್ಮರಕ್ಷಕರೆಂಬ ಪಾಖಂಡಿಗಳಿಂದ ದೂರವಿರಿ ಆಗ ಮಾತ್ರ ನೀವು ಸದ್ಧರ್ಮ ಪರಿಪಾಲಕರಾಗುತ್ತೀರಾ, ನಿಜದೇವರಿಗೆ ಹತ್ತಿರವಾಗುತ್ತೀರಾ.
-ವಿಶ್ವಾಸ್ ಭಾರದ್ವಾಜ್ (ವಿಭಾ)
***
#Oshoyisam #ಓಶೋ #ವಿಭಾ
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ