ಧರ್ಮ ಅವಿನಾಶಿ; ಅದನ್ನು ಯಾರೂ ರಕ್ಷಿಸಬೇಕಿಲ್ಲ, ಅದೇ ಎಲ್ಲರನ್ನೂ ರಕ್ಷಿಸುತ್ತದೆ-ಭಗವಂತನ ಸಾಕ್ಷಾತ್ಕಾರವಾಗಬೇಕಿದ್ದರೇ ಶಾಸ್ತ್ರಗಳನ್ನು ಪ್ರಶ್ನಿಸಿ:
ಓಶೋ, ಧ್ಯಾನದ ಕುರಿತಾಗಿ ಸಾಕಷ್ಟು ಬಾರಿ ತಮ್ಮ ಪ್ರವಚನದಲ್ಲಿ ಮಾತಾಡಿದ್ದಾರೆ. ಅವರ ದೃಷ್ಟಿಯಲ್ಲಿ ಧ್ಯಾನವೆಂದರೇ ಭಕ್ತಿ ಮಾರ್ಗದ ಅನುಸರಣೆ ಮತ್ತು ಮುಕ್ತಿ ಮಾರ್ಗದ ನಿರೀಕ್ಷೆ. ಧ್ಯಾನದ ಮಹತ್ವ ಹೇಳುವ ಪ್ರತೀ ಬಾರಿಯೂ ಅವರು ಡಾಂಭಿಕತೆಯನ್ನು ವಿಡಂಬಿಸಿದ್ದಾರೆ. ಶಾಸ್ತ್ರ-ಸಂಪ್ರದಾಯ ಮತ್ತು ಕಂದಾಚಾರಗಳನ್ನು ನೇರವಾಗಿ ಟೀಕಿಸಿದ್ದಾರೆ. ಓಶೋ ಮತ್ತವರ ಧ್ಯಾನ ಅರ್ಥವಾಗಬೇಕಿದ್ದರೇ ಅವರ ಭಕ್ತಿ ಮಾರ್ಗ, ಮುಕ್ತಿ ಮಾರ್ಗ ಮತ್ತು ಭಗವಂತನ ಸಾಕ್ಷಾತ್ಕಾರದ ವಿಧಾನಗಳನ್ನು ಅರ್ಥ ಮಾಡಿಕೊಳ್ಳಬೇಕು.
ಕಟ್ಟುಪಾಡುಗಳು, ನಂಬಿಕೆ-ಆಚರಣೆಗಳು, ಶ್ರದ್ಧೆ-ಭಕ್ತಿ, ಆಸ್ಥೆ-ಆರಾಧನೆಗಳು ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿವೆ. ಪರಂಪರೆಯನ್ನು ಧಿಕ್ಕರಿಸಿ ಬದುಕುವುದು ಸುಲಭ ಸಾಧ್ಯವಲ್ಲ, ಎಲ್ಲರಿಂದಲೂ ಸಾಧ್ಯವಿಲ್ಲ. ಮೌಢ್ಯಗಳನ್ನು ವಿರೋಧಿಸುವವನು ಶಾಸ್ತ್ರಗಳ-ಸಂಪ್ರದಾಯಗಳ ಇತಿಹಾಸ ಮತ್ತು ಆಚರಣೆಗಳನ್ನು ಅರಿತುಕೊಂಡೇ ವಿರೋಧಿಸಬೇಕೇ ವಿನಃ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆನೆಯನ್ನು ಮುಟ್ಟಿದಂತೆ ಇದಮಿತ್ಥಂ ಎನ್ನಬಾರದು. ನೀವು ಹೊಸ ಇತಿಹಾಸವನ್ನು ಸೃಷ್ಟಿಸುವ ಮೊದಲು ಹಳೆಯ ಇತಿಹಾಸವನ್ನು ಅರಿತಿರಲೇಬೇಕು ಎನ್ನುವುದು ಕೇವಲ ರೂಢಿಮಾತಲ್ಲ, ಇದೇ ಸತ್ಯ. ನಿಮ್ಮ ವ್ಯವಸ್ಥೆಯ ಅರ್ಥಮಾಡಿಕೊಳ್ಳದೇ ವ್ಯವಸ್ಥೆಯನ್ನು ದೂಷಿಸುತ್ತಾ ಕೂರುವುದು ಒಂದು ಬಗೆಯ ಅಜ್ಞಾನವಿದ್ದಂತೆ. ಹಾಗೆಯೇ ಶಾಸ್ತ್ರ ಸಂಪ್ರದಾಯಗಳನ್ನು ವಿನಾಕಾರಣ ಜರಿಯುವ ಬದಲು, ಅದರಲ್ಲಿನ ಹುಳುಕುಗಳನ್ನು ಗುರುತಿಸಬೇಕು. ಸುಮ್ಮನೆ ಅವಹೇಳನೆ ಮಾಡುವ ಬದಲು ನ್ಯೂನ್ಯತೆಗಳನ್ನು ಬಯಲು ಮಾಡಬೇಕು. ನಿಜವಾದ ನಂಬಿಕೆ ಯಾವುದು? ನಿಜವಾದ ಭಕ್ತಿ ಯಾವುದು? ನಿಜವಾದ ಆಚರಣೆ ಹೇಗಿರಬೇಕು? ಮೌಢ್ಯಗಳೆಂದರೆ ಏನು? ಅನ್ನುವುದರ ಸ್ಪಷ್ಟ ವ್ಯಾಖ್ಯಾನ ನೀಡಬೇಕು. ಹೀಗಾದಾಗ ಮಾತ್ರ ಪರಂಪರೆಗಳಿಗೆ ಬದ್ಧರಾಗಿರುವವರಲ್ಲಿ ಅರಿವು ಮೂಡಲು ಸಾಧ್ಯ. ಸತ್ಯದ ದಾರಿಯನ್ನು ತೋರಿಸುವ ಮೊದಲು ಮಿಥ್ಯಾಹಾದಿಯ ಪ್ರಭಾವ ನಾಶ ಮಾಡಲೇಬೇಕು.
ಈಗ ಶಾಸ್ತ್ರಗಳ ವಿಚಾರಕ್ಕೆ ಬರೋಣ. ನೀವು ಶಾಸ್ತ್ರಗಳನ್ನು ಓದಿಕೊಂಡಿದ್ದೀರಾ? ಆಯ್ತು ಒಪ್ಪಿಕೊಳ್ಳೋಣ ನೀವು ಶಾಸ್ತ್ರಗಳನ್ನು ಓದಿಕೊಂಡು ಸಂಪ್ರದಾಯಕ್ಕನುಗುಣವಾಗಿ ಅದನ್ನು ಪಾಲಿಸುತ್ತಾ ಬಂದಿದ್ದೀರಾ! ಸರಿ ನೀವು ಶಾಸ್ತ್ರಗಳನ್ನು ಓದಿಕೊಂಡ ಬಗೆ ಹೇಗೆ? ವೇದ, ಉಪನಿಷತ್, ಗೀತೆ, ಇತ್ಯಾದಿಗಳು ನಿಮಗೆ ಅರ್ಥವಾದ ಬಗೆ ಹೇಗೆ? ನಿಮ್ಮ ಪರಿಕಲ್ಪನೆಯಲ್ಲಿ ಶಾಸ್ತ್ರಗಳೆಂದರೇನು? ಸಂಪ್ರದಾಯಗಳ ಪಾಲನೆಯಿಂದ ಭಗವಂತನ ಧ್ಯಾನ, ಸ್ಮರಣೆ, ತಪನೆ, ಆರಾಧನೆಗಳು ಹೇಗೆ ಸಾಧ್ಯ? ಶಾಸ್ತ್ರಗಳು ನಿಮಗೆ ಹೇಗೆ ಅರ್ಥವಾಗಿವೆ? ನಿಮ್ಮ ಪರಿಕಲ್ಪನೆಯಂತೆ ಶಾಸ್ತ್ರಗಳ ವ್ಯಾಖ್ಯಾನವೇನು? ಭಕ್ತಿಮಾರ್ಗ ಮತ್ತು ಮುಕ್ತಿಮಾರ್ಗಕ್ಕೂ ನಿಮ್ಮ ಶಾಸ್ತ್ರ ಸಂಪ್ರದಾಯಗಳ ಕಟ್ಟುಪಾಡಿಗೂ ಇರುವ ಸಂಬಂಧಗಳೇನು? ಶಾಸ್ತ್ರಕ್ಕೂ ಧರ್ಮಕ್ಕೂ ನಡುವಿನ ಸಂಬಂಧವೇನು? ಭಗವಂತನಿಗೂ ಶಾಸ್ತ್ರಕ್ಕೂ ಇರುವ ಸಂಬಂಧವೇನು? ಈ ತರಹ ವಿವಿಧ ಕೋನಗಳಲ್ಲಿ ನಿಖರವಾಗಿ ಮತ್ತು ಸ್ಪಷ್ಟವಾಗಿ ಪ್ರಶ್ನಿಸಿ, ಉತ್ತರ ಪಡೆದುಕೊಳ್ಳಿ. ಅವರಿಗೆ ನಿಮ್ಮ ಪ್ರಶ್ನೆಗಳಲ್ಲೇ ಶಾಸ್ತ್ರದ ಕುರಿತಾಗಿ ಸ್ಪಷ್ಟ ಆಲೋಚನೆ ಮೂಡಬೇಕು. ನಿಮ್ಮ ಪ್ರಶ್ನೆಗಳು ಅವರನ್ನು ಚಿಂತನೆಗೆ ಹಚ್ಚಬೇಕು. ತಮ್ಮೊಳಗೆ ಅವರು ಸಂಪ್ರದಾಯ ಮತ್ತು ಭಕ್ತಿ-ಮುಕ್ತಿಮಾರ್ಗಗಳ ಕುರಿತಾಗಿ ಅಂತರಂಗವನ್ನು ಮಥಿಸುವಂತಾಗಬೇಕು. ಇಷ್ಟಾದರೆ ನಿಮ್ಮ ನಂತರದ ದಾರಿ ಬಹುಸುಲಭ. ಒಬ್ಬ ವ್ಯಕ್ತಿ ತಾನು ನಡೆಯುತ್ತಿರುವ ಹಾದಿ ಸರಿ ಎಂದುಕೊಂಡೇ ಚಲಿಸುತ್ತಿದ್ದಾನೆ ಎಂದುಕೊಳ್ಳಿ. ಅವನು ಹೋಗುವ ಮಾರ್ಗ ತಪ್ಪಿದ್ದರೇ, ಅದು ನಿಮ್ಮ ಗಮನಕ್ಕೆ ಬಂತಾದರೇ, ಕೂಡಲೇ ಆ ವ್ಯಕ್ತಿಯನ್ನು ಪ್ರಶ್ನಿಸಿ. ಅವನು ನಡೆಯುವ ದಾರಿಯ ಬಗ್ಗೆ ತಿಳಿಸಿ. ಆ ದಾರಿಯ ಕುರಿತಾಗಿ ಅವನಿಗೆ ಎಷ್ಟು ಜ್ಞಾನವಿದೆ? ಸ್ಪಷ್ಟತೆಯಿದೆ? ಎಂದು ತಿಳಿದುಕೊಳ್ಳಿ. ತಾನು ನಡೆಯುತ್ತಿರುವ ದಾರಿ ಸರಿಯಲ್ಲವಾ? ಎನ್ನುವ ಸಂದೇಹ ಅವನಿಗೆ ಬಂದ ನಂತರವೇ ಸರಿಯಾದ ದಾರಿಯ ಬಗ್ಗೆ ತಿಳಿಸಿಕೊಡಿ. ಇದೇ ನಿಜವಾದ ಅರಿವಿನ ವಿಧಾನ; ಶಿಕ್ಷಣ ಮತ್ತು ಕಲಿಕಾ ಕ್ರಮ.
ಶಾಸ್ತ್ರಗಳು ಮತ್ತು ಸಂಪ್ರದಾಯಗಳ ಬಗ್ಗೆ ಒಂದು ಮಾತು. ಸಾಯುವ ಸಮಯದಲ್ಲಿ ಭಗವನ್ನಾಮ ಸ್ಮರಣೆಯಿಂದ ಮಾತ್ರವೇ ಮುಕ್ತಿ ಸಾಧ್ಯವಾಗುತ್ತದೆ ಎಂದಾದರೇ, ಬದುಕಿನ ಕರ್ಮಗಳ ಪಾಡೇನು? ಒಬ್ಬ ಪರಮ ಕ್ರೂರಿ, ಅನಾಗರೀಕ, ಅಮಾನವೀಯ ಗುಣಗಳುಳ್ಳ ನೀಚ ಅಧಮ ಬದುಕಿನುದ್ದಕ್ಕೂ ಪಾಪಕಾರ್ಯಗಳನ್ನೇ ಮಾಡಿ ಸಾಯುವಾಗ ಶ್ರೀರಾಮಚಂದ್ರ ಪ್ರಭುವಿನ ಹೆಸರು ಹೇಳಿದನೆಂದರೇ ಅವನ ಬದುಕಿನ ಪಾಪಕರ್ಮಗಳಿಂದ ಅವನಿಗೆ ಮುಕ್ತಿ ದೊರಕಿಬಿಡುತ್ತದೆಯೇ? ರಾಮಚಂದ್ರಪ್ರಭು ಅಷ್ಟು ದಯಾಮಯನೇ ಆದರೇ ಈ ಭೂಮಿಯಲ್ಲಿ ಪುಣ್ಯವಂತರಿಗೆ ಆ ದೇವರು ಮಾಡುವ ಅನ್ಯಾಯ ಅದಲ್ಲವೇ? ಹೀಗೆಯೇ ಆಗುತ್ತದೆ ಎಂದಾದರೇ ಭೂಮಿಯಲ್ಲಿ ಪುಣ್ಯವಂತರೇ ಕಡಿಮೆಯಾಗಿ ಪಾಪಿಗಳ ಸಂಖ್ಯೆಯೇ ಹೆಚ್ಚಾಗುತ್ತದೆ ಅಲ್ಲವೇ? ಹೇಗಿದ್ದರೂ ಸಾಯುವಾಗ ರಾಮಚಂದ್ರ ಪ್ರಭು ಎನ್ನುವ ಆಂಟಿಸಿಪೇಟರಿ ಬೇಲ್ ತೆಗೆದುಕೊಳ್ಳಬಹುದು ಎನ್ನುವುದು ಖಾತ್ರಿಯಾದರೇ ಯಾವ ಮನುಷ್ಯ ಬದುಕಿನಲ್ಲಿ ಸತ್ಕರ್ಮಗಳನ್ನು ಮಾಡಿ ಬಾಳುತ್ತಾನೆ? ನೀಚರು, ಅಯೋಗ್ಯರು, ಕಳ್ಳರು, ಖೂಳರು, ಖದೀಮರು, ಪಾತಕಿಗಳು, ರಕ್ತಪಿಪಾಸುಗಳು, ದರೋಡೆಕೋರರು, ಸಂಚುಕೋರರು, ಅತ್ಯಾಚಾರಿಗಳು ಮುಂತಾದ ಪಾಪಿಗಳ ಸಂಖ್ಯೆ ಹೆಚ್ಚಾದರೆ ಅದು ಧರ್ಮ ಹೇಗಾದೀತು? ಹೀಗೆ ಅಧರ್ಮ ಹೆಚ್ಚಾದಾಗ ಮಾತ್ರವಲ್ಲವೇ ಅವನು ಅವತಾರವೆತ್ತಿ ಬಂದು ದುಷ್ಟ ಶಿಕ್ಷಕನಾಗಿ, ಶಿಷ್ಟ ರಕ್ಷಕನಾಗಿ ಕರ್ತವ್ಯ ನಿಭಾಯಿಸುವುದು; ಸಂಭವಾಮಿ ಯುಗೇ ಯುಗೇ..
ಸಂಪ್ರದಾಯಗಳು ಇಟ್ಟು ಪೂಜಿಸುವ ದೈವವೂ ಅಲ್ಲ, ಸುಟ್ಟು ಹಾಕಲು ಹೆಣವೂ ಅಲ್ಲ ಅನ್ನುವ ಮಾತು ಸವಕಳಿಯಾಗುವಷ್ಟು ಹಳೆಯದಾಗಿದೆ. ಈಗ ಸಂಪ್ರದಾಯಗಳ ಹುಳುಕು ಬಯಲು ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಇದು ಅರಿವಿನ ಕಾಲ, ಮಾಹಿತಿಯ ಕಾಲ, ಸಾಕ್ಷರತೆಯ ಕಾಲ, ತಂತ್ರಜ್ಞಾನದ ಕಾಲ, ವಿವೇಕ ಬೆಳೆಸಿಕೊಳ್ಳುವ ಪ್ರಶಸ್ತ ಕಾಲ. ಸಂಪ್ರದಾಯಗಳಲ್ಲಿ ಪದೇ ಪದೇ ಉಲ್ಲೇಖಿಸಲ್ಪಡುವ ಉಪನಿಷತ್ ನ ನಿಜವಾದ ಅರ್ಥವೇ ಬ್ರಹ್ಮಜ್ಞಾನವನ್ನು ಬೋಧಿಸುವುದು ಮತ್ತು ಅಜ್ಞಾನವನ್ನು ನಿವಾರಿಸುವುದು. ಬ್ರಹ್ಮಜ್ಞಾನ ಅಥವಾ ಆತ್ಮಜ್ಞಾನವನ್ನು ಬೋಧಿಸುವ ಉಪನಿಷತ್ ನಲ್ಲಿ ನೇತಿ ಎಂಬ ಪದವಿದೆ. ಋಗ್ವೇದದಲ್ಲಿ ಇರುವಷ್ಟು ನಾಸ್ತಿಕವಾದ ಮತ್ತೆಲ್ಲೂ ಇಲ್ಲ. ನೇತಿ ಅಂದರೆ ನʼಇತಿ, ಆದಿ ಶಂಕರರೂ ನೇತಿ ಎಂಬುದನ್ನು ಅನೇಕ ಬಾರಿ ಅನೇಕ ಆಯಾಮಗಳಲ್ಲಿ ಬಳಸಿದ್ದಾರೆ. ಋಗ್ವೇದದ ಛಾಂದೋಗ್ಯದಲ್ಲಿ ಕೆಲವು ವಿವರಣೆಗಳಿವೆ ಗಮನಿಸಿ. ಋಗ್ವೇದದಲ್ಲಿ ಹೇಳುವ ಮೊದಲ ಮಾತೇ ಮೊದಲು ಸೃಷ್ಟಿಯ ರಚನೆಯಾಯಿತು ನಂತರ ದೇವರುಗಳ ಸೃಷ್ಟಿಯಾಯಿತು ಎನ್ನುವುದು. ಛಾಂದೋಗ್ಯದಲ್ಲಿಯೇ “ಏಕಂ ಇವಾಂ ಅದ್ವಿತೀಯಂ” ಅಂದರೆ ದೇವರು ಮತ್ತು ಆತ್ಮ ಎರಡೂ ಒಂದೇ ಎನ್ನುವ ವಿವರಣೆಯಿದೆ ಮತ್ತು “ತತ್ ತ್ವಮ್ ಆಸಿ” ಅಂದರೆ ಆ ದೇವರೇ ನೀನು ಎನ್ನುವ ಅರ್ಥ. ಶಂಕರರ ಅದ್ವೈತ ಹೇಳುವಂತೆ “ಅಹಂ ಬ್ರಹ್ಮಾಸ್ಮಿ” ಎನ್ನುವುದೂ ಇದೇ ನೆಲೆಯಲ್ಲಿದೆ. ಈ ಮೂಲ ವಿಚಾರವನ್ನು ಯಾವ ಸಂಪ್ರದಾಯಗಳು ಹೇಳುವುದೂ ಇಲ್ಲ, ಪಾಲಿಸುವುದೂ ಇಲ್ಲ, ಬೋಧಿಸುವುದೂ ಇಲ್ಲ.
ಶಾಸ್ತ್ರ ಮತ್ತು ಸಂಪ್ರದಾಯಗಳು ಹೇಳದೇ ಮುಚ್ಚಿಟ್ಟ ಮುಖ್ಯ ಸಂಗತಿಯೇ ದೇವರು ಮತ್ತು ನಾವು. ನಾವು ಹೊರಗೆಲ್ಲೋ ದೇವರನ್ನು ಹುಡುಕುತ್ತೇವೆ. ಪ್ರತಿಮೆ ಸ್ಥಾಪಿಸಿ, ಗುಡಿ ಕಟ್ಟಿ ಪೂಜಿಸಿ, ಮಂತ್ರ ಭಜಿಸಿ, ಶ್ಲೋಕ ಹಾಡಿ, ಮಡಿ ಮಡಿಯೆಂದು ಬಡಿದಾಡಿ, ಬಲಿ ಕೊಟ್ಟು, ನೈವೇದ್ಯವ ಮಾಡಿ ಯಾವ ದೇವರನ್ನು ಮೆಚ್ಚಿಸುತ್ತಿದ್ದೇವೆ. ಒಳಗಿರುವ ದೇವರನ್ನು ಕಂಡುಕೊಳ್ಳುವ ಬದಲು ಹೊರಗಿನ ದೇವರ ಅಲಂಕಾರ ಮಾಡಿ, ಭಜನೆ ಮಾಡಿ ಮೆರವಣಿಗೆ ಮಾಡಿದರೆ ಏನು ಪ್ರಯೋಜನ. ಆತ್ಮದಲ್ಲಿ ಸತ್ಯವಾದ ಬೆಳಕು ಮೂಡದೇ ಭಗವಂತನ ಸಾಕ್ಷಾತ್ಕಾರ ಹೇಗಾದೀತು? ಧರ್ಮವೆಂದರೆ ಒಳಗಿನ ದೇವರನ್ನು ಕಂಡುಕೊಳ್ಳುವುದು. ನಮ್ಮ ಚಿತ್ತದಲ್ಲಿನ ಅಜ್ಞಾನ-ಅಂಧಕಾರಗಳನ್ನು ತೊಲಗಿಸಿ ಬೆಳಕು ಮೂಡಿಸದ ಹೊರತು ನಮಗೆ ಭಗವಂತನ ಅನುಗ್ರಹವಾಗುವುದೆಂತು? ಆತ್ಮಜ್ಞಾನ ಬೇಕಿದ್ದರೇ ಆತ್ಮದಲ್ಲಿ ಶೂನ್ಯ ಸ್ಥಿತಿ ಬೇಕು. ನಿರ್ವಾತ ಸೃಷ್ಟಿಯಾಗಬೇಕು. ಖಾಲಿಯಾಗುವ ಆತ್ಮದಲ್ಲಿ ದಯೆ, ಅನುಕಂಪ, ಪ್ರೀತಿ, ಸಹನೆ, ಪರೋಪಕಾರ ಇತ್ಯಾದಿ ಮಾನವೀಯ ಗುಣಗಳನ್ನು ತುಂಬಿಕೊಳ್ಳಬೇಕು. ಆಗ ಬರುತ್ತಾನೆ ಭಗವಂತ ನಮ್ಮ ನಿಜವಾದ ಭಕ್ತಿಗೆ ಮೆಚ್ಚಿ ಮುಕ್ತಿ ಮಾರ್ಗ ಕರುಣಿಸಲು. ಧ್ಯಾನದಿಂದ ಭಕ್ತಿ ಮಾರ್ಗ ಮುಕ್ತಿ ಮಾರ್ಗಗಳು ಸಿದ್ಧಿಸುವುದೇ ಹೊರತು ಕಂದಾಚಾರ, ಸಂಪ್ರದಾಯ, ಮೌಢ್ಯ, ಕಟ್ಟುಪಾಡು ಆಚರಣೆಗಳ ತೋರಿಕೆಯ ಭಕ್ತಿಯಿಂದಲ್ಲ. ನೀವೇ ನಿರ್ಮಿಸಿದ ಭವ್ಯ ಆಡಂಬರದ ದೇವರ ಗರ್ಭಗುಡಿಯ ಮುಂದೆ ಕೈ ಮುಗಿದು ಕಣ್ಣು ಮುಚ್ಚಿ ಪ್ರಾರ್ಥಿಸಿಕೊಳ್ಳುವಾಗಲೂ ನಿಮ್ಮ ಮನಸಿನಲ್ಲಿ ಅರಿಷಡ್ವರ್ಗಗಳ ಕೆಟ್ಟ ಪಾಕ ಬೇಯುತ್ತದೆ. ದೇವರೇನು ಕಣ್ಣು ಮುಚ್ಚಿಕೊಂಡು ಕೂತಿರುತ್ತಾನಾ? ಸರ್ವಶಕ್ತ, ಸರ್ವವ್ಯಾಪಿಯಾದ ಆ ಭಗವಂತನಿಗೆ ನಿಮ್ಮೊಳಗೆ ನಡೆಯುವ ಆಂದೋಲನಗಳು ಕಾಣಿಸುವುದಿಲ್ಲವೇ?
ಭಕ್ತಿ ಮಾರ್ಗಕ್ಕೆ ಯಾವುದೇ ಪರ್ಯಾಯಗಳಿಲ್ಲ. ಇರುವುದೊಂದೇ ನೇರವಾದ ದಾರಿ. ಧ್ಯಾನ ಮತ್ತು ಸದ್ಧರ್ಮ ಪಾಲನೆ. ಧರ್ಮ ಎಂದೂ ಅವಿನಾಶಿ. ಧರ್ಮವನ್ನು ಯಾರೂ ರಕ್ಷಿಸಬೇಕಾಗಿಲ್ಲ. ಧರ್ಮ ಎಲ್ಲರನ್ನೂ ರಕ್ಷಿಸುತ್ತದೆ ಮತ್ತು ಅಗತ್ಯ ಬಿದ್ದರೇ ಅಧರ್ಮವನ್ನು ಬುಡಸಹಿತ ಕಿತ್ತುಹಾಕುತ್ತದೆ. ಯಾಕಂದರೇ ನಿಜವಾದ ಧರ್ಮವನ್ನು ಮನುಷ್ಯ ಮಾಡಿದ್ದಲ್ಲ. ಅದು ಆದ್ಯಂತರಹಿತ ಭಗವಂತನ ಕಾಣಿಕೆ. ಧರ್ಮವನ್ನು ಅರ್ಥವೇ ಮಾಡಿಕೊಳ್ಳದ ನಾವು ಧರ್ಮ ರಕ್ಷಣೆಯ ಪೊಳ್ಳು ಮಾತುಗಳನ್ನಾಡುತ್ತೀವಿ. ಇದೊಂದು ತರಹ ಮಣ್ಣಿನ ಭಗವಂತನ ಪ್ರತಿಮೆಗಳನ್ನು ಮಾಡುವ ಕಲಾವಿದ, ತಾನು ಮೂರ್ತಿಯನ್ನು ನಿರ್ಮಿಸಿದೆ ಎಂದು ಹೇಳಿಕೊಳ್ಳುವಂತೆ ಅಷ್ಟೆ. ಆ ಕಲಾವಿದ ತಯಾರಿಸಿದ್ದು ಭಗವಂತನ ಕಾಲ್ಪನಿಕ ಮೂರ್ತಿಯನ್ನೇ ವಿನಃ ಅಮೂರ್ತ, ಅಜೇಯ, ನಿರಾಕಾರ, ನಿರ್ಗುಣ ಸ್ಥಿತಿಯ ಭಗವಂತನ್ನಲ್ಲ. ಧ್ಯಾನದಿಂದ ಮಾತ್ರ ಭಗವಂತನನ್ನು ತಲುಪಲು ಸಾಧ್ಯ. ಆದರೆ ಧ್ಯಾನ ಹೇಗೆ ಮಾಡಬೇಕು ಅನ್ನುವ ಕಲಿಕೆ ಬಹುತೇಕ ಜನರಿಗೆ ಇಲ್ಲ. ಆತ್ಮದೊಂದಿಗೆ ಮೈತ್ರಿ ಸಾಧಿಸಿದಾಗ, ನಿನ್ನ ಅಸ್ತಿತ್ವವನ್ನು ನೀನೇ ಪ್ರಶ್ನಿಸಿದಾಗ, ನಿನ್ನ ಅಹಂಕಾರ ತೊರೆದು ನೀನು ಯಾರೂ ಅಲ್ಲ ಎನ್ನುವ ಅರಿವಾದಾಗ, ನಿನ್ನೊಳಗೆ ಕಾರುಣ್ಯ ಬೆರೆತಾಗ ಧ್ಯಾನಸ್ತ ಸ್ಥಿತಿ ಸಿದ್ಧಿಯಾಗುತ್ತದೆ. ಇದು ಪರಮಾತ್ಮನನ್ನು ತಲುಪುವ ಹಾದಿಯ ಮೊದಲ ಮೆಟ್ಟಿಲಷ್ಟೆ. ಶಾಸ್ತ್ರ ಸಂಪ್ರದಾಯಗಳ ಆಚರಣೆಯೇ ಮುಖ್ಯವಾದಾಗ ಧ್ಯಾನ, ಭಕ್ತಿ ಮತ್ತು ಮುಕ್ತಿ ಮಾರ್ಗಗಳು ಅಸ್ಪಷ್ಟವಾಗುತ್ತವೆ. ಇಷ್ಟು ಮಾತ್ರ ಸತ್ಯ, ಉಳಿದಿದ್ದು ನಿಮ್ಮ ಅಂತರಂಗವನ್ನು ಶೋಧಿಸಿಕೊಳ್ಳಬೇಕಾದ ವಿಚಾರ.
-ವಿಶ್ವಾಸ್ ಪ್ರಭಾಕರ್ ಭಾರದ್ವಾಜ್ (ವಿಭಾ)