ಬದುಕನ್ನು ಸೌಂದರ್ಯಪೂರ್ಣಗೊಳಿಸುವ ಓಶೋ ರಹಸ್ಯವಿದು; ಮನಸೆಂಬ ಅಮೃತ ಬಟ್ಟಲಿನಲ್ಲಿ ಸಹನೆ-ಪ್ರೀತಿ-ಕಾರುಣ್ಯ-ಸಹಾನುಭೂತಿ ಮಿಶ್ರಣದ ಅಮೃತ ಬೆರೆಸಿ ನೋಡಿ ಅದೇ ನಿಜವಾದ ರಸವಿದ್ಯೆ:- Saakshatv Oshoyisam episode 6
ಓಶೋ ತಮ್ಮ ಪ್ರತೀ ಉಪನ್ಯಾಸಗಳಲ್ಲಿ ಜೀವನದ ಸರಳ ಸಂಗತಿಗಳನ್ನು ಅತ್ಯಂತ ಸರಳವಾಗಿ ಬೋಧಿಸಿದರು. ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕಾದ ಸರಳ ಗುಣಗಳನ್ನು ತನ್ಮೂಲಕ ಬದುಕನ್ನು ಮತ್ತಷ್ಟು ಆಪ್ತವಾಗಿಸಿಕೊಳ್ಳುವ ಬಗೆಯನ್ನು ತಿಳಿಸಿದರು. ಓಶೋರನ್ನು ಅರ್ಥಮಾಡಿಕೊಂಡವರಿಗೆ ಅವರ ಪದೇ ಪದೇ ನಿರೂಪಿಸಿದ, ವಾದಿಸಿದ, ಸಮರ್ಥಿಸಿದ ಪ್ರೀತಿಯ, ಕಾರುಣ್ಯದ, ಸಹಾನುಭೂತಿಯ ಮತ್ತು ಸಹನೆಯ ವ್ಯಾಖ್ಯಾನಗಳು ಖಂಡಿತಾ ಅರ್ಥವಾಗಿರುತ್ತವೆ. ಓಶೋ ಮನುಷ್ಯನ ಕ್ಲಿಷ್ಟಕರ ಜೀವನವನ್ನು ಸರಳವಾಗಿಸುವುದು ಹೇಗೆ? ಜೀವನದಲ್ಲಿ ಸೌಂದರ್ಯ ಬೆರೆಸುವುದು ಹೇಗೆ? ಬದುಕನ್ನು ಮಧುರುವಾಗಿಸಿಕೊಳ್ಳುವುದು ಹೇಗೆ? ಅನುಭವಗಳಿಂದ ಸುಖ ಪ್ರಾಪ್ತಗೊಳಿಸಿಕೊಳ್ಳುವ ವಿಧಾನ ಹೇಗೆ? ಇತ್ಯಾದಿ ವಿಷಯಗಳನ್ನು ಹೇಳಿದರು. ಸರಳಜೀವನ, ಸುಖೀ ಜೀವನ ಮತ್ತು ಪ್ರೀತಿ ಪೂರ್ಣ ಸಂತೃಪ್ತ ಜೀವನದ ಕುರಿತಾದ ಓಶೋ ವಿವರಣೆ ಹೀಗಿದೆ..
***
ಜಗತ್ತಿನಲ್ಲಿ ಅತ್ಯಂತ ಮಧುರವಾದುದ್ದು ಅಂತ ಏನಾದರೂ ಇದ್ದರೆ ಅದು ಕೇವಲ ಪ್ರೇಮ ಮಾತ್ರ. ಪ್ರೀತಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವೇ ಅತ್ಯಂತ ಮೂರ್ಖತನದ್ದು. ಪ್ರೀತಿಯನ್ನು ಕೇವಲ ಪ್ರೀತಿಸಬೇಕು ಮತ್ತು ಅದರ ಕುರಿತಾಗಿ ಮೆಚ್ಚುಗೆ ಹೊಂದಬೇಕು ಜೊತೆಗೆ ಪ್ರೀತಿಯನ್ನು ಅತೀವವಾಗಿ ಗೌರವಿಸಬೇಕು ಅಷ್ಟೆ. ಪ್ರೀತಿಯನ್ನು ಬಯಸುವುದು ತಪ್ಪಲ್ಲ; ಉತ್ಕಟತೆಯೂ ತಪ್ಪಲ್ಲ ಆದರೆ ಅದನ್ನು ಹೊಂದಲೇಬೇಕೆಂಬ ಹಠ ಹಾಗೂ ಛಲ ಖಂಡಿತಾ ತಪ್ಪು. ಪ್ರೀತಿ ಅದಾಗಿಯೇ ಒಲಿದು ಬರಬೇಕೇ ವಿನಃ ಹಠ ಕಟ್ಟಿ ಒಲಿಸಿಕೊಳ್ಳಬಾರದು. ಪ್ರೀತಿಯೆನ್ನುವುದು ಆಗ ತಾನೆ ಬಿರಿದ ಗುಲಾಬಿ ಮೊಗ್ಗಿನಿಂದ ಅರಳಿದ ಸುಂದರ ಕೆಂಪು ಹೂವು. ಅದು ಗಿಡದಲ್ಲೇ ಉಳಿದರೆ ಅದೆಷ್ಟು ಚೆಂದ; ಆದರೆ ಅದೇ ಹೂವನ್ನು ಕಿತ್ತು ತನ್ನಿ, ಒಂದೇ ದಿನದಲ್ಲಿ ಬಾಡಿ ಸತ್ತು ಹೋಗುತ್ತದೆ. ಪ್ರೀತಿ ಈ ಜಗತ್ತಿನ ಪದಗಳಲ್ಲಿ ವರ್ಣಿಸಲಾಗದ ಅವರ್ಣನೀಯ ಅನುಪಮ ಸೌಂದರ್ಯ. ಪ್ರೀತಿಯನ್ನು ಬೊಗೆಸೆಯಲ್ಲಿ ಅದುಮಿಟ್ಟುಕೊಂಡಷ್ಟೂ ಅದು ಉಸಿರುಗಟ್ಟುತ್ತದೆ. ಪ್ರೀತಿ ಸ್ವೇಚ್ಛೆ ಬಯಸುತ್ತದೆ, ಸ್ವಚ್ಛಂದತೆಯನ್ನು ನಿರೀಕ್ಷಿಸುತ್ತದೆ. ಪ್ರೀತಿಯ ಭಾವಕ್ಕೆ ಯಾವುದೇ ಅಂಕಿತವಿಲ್ಲ, ಮಿತಿಗಳಿಲ್ಲ ಮತ್ತು ನಿಯಂತ್ರಣಗಳಿರುವುದಿಲ್ಲ. ಪ್ರೀತಿ ಯಾವತ್ತೂ ಬಂಧನಕ್ಕೆ ಒಳಪಡುವುದಿಲ್ಲ. ನೀವು ಸೌಂದರ್ಯ ಉಪಾಸಕರಾದರೆ ಕೇವಲ ಆ ಸೌಂದರ್ಯವನ್ನು ಹೇಗೆ ಆಸ್ವಾಧಿಸುತ್ತೀರೋ ಹಾಗೆಯೇ ಪ್ರೀತಿಯ ಆರಾಧಕರಾದರೇ ಕೇವಲ ಪ್ರೀತಿಯನ್ನು ಪವಿತ್ರ ದೃಷ್ಟಿಯಿಂದ ಆರಾಧಿಸಿ ಅಷ್ಟೆ. ಅದು ನಿಮ್ಮ ಪಾಲಿಗೆ ದಕ್ಕುವುದಾದರೇ ಅದಾಗಿಯೇ ನಿಮ್ಮ ತೋಳು ಬಯಸಿ ಬರುತ್ತದೆ. ಬಲವಂತದ ಬಾಹುಪ್ರಯೋಗ ಮಾಡಿದರೆ ಉಸಿರುಕಟ್ಟಿ ಸಾಯುತ್ತದೆ. Saakshatv Oshoyisam episode 6
ಬದುಕಿನಲ್ಲಿ ಎಲ್ಲವೂ ಒಂದು ಪರಿಪೂರ್ಣ ಅನುಭವಗಳೇ, ಬದುಕಿನಲ್ಲಿ ನೀವು ಎದುರಿಸುವ ಯಾವುದೇ ಸವಾಲುಗಳೂ ನಿಮ್ಮ ಅದೃಷ್ಟವೂ ಆಗಿರುವುದಿಲ್ಲ, ದುರದೃಷ್ಟವೂ ಆಗಿರುವುದಿಲ್ಲ. ಪ್ರೀತಿಯೂ ಜೀವನದ ಒಂದು ಸುಂದರ ಅನುಭವ ಅಷ್ಟೆ. ಅದು ಬಹಳಷ್ಟು ಪ್ರೇಮಿಗಳಿಗೆ ಅಮೃತದ ಸವಿ ಉಣಿಸುತ್ತದೆ ಜೊತೆಗೆ ಕೊನೆಯಲ್ಲಿ ಕಾಲಕೂಟದ ವಿಷದ ಬಟ್ಟಲನ್ನೂ ಎದುರಿಡುತ್ತದೆ. ಸಹಿ ಉಂಡವನು ಕಹಿಯನ್ನೂ ಸಹ ಸ್ವೀಕರಿಸಲೇಬೇಕಲ್ಲವೇ! ಬದುಕಿನಲ್ಲಿ ಘಟಿಸುವ ಎಲ್ಲಾ ಅನುಭವಗಳಿಗೂ ತೆರೆದುಕೊಳ್ಳಿ; ಅನುಭವಿಸಿ. ಅನುಭವಗಳು ಕಲಿಸುವ ಅತ್ಯುತ್ತಮ ಪಾಠಗಳನ್ನು ಪ್ರಪಂಚದ ಯಾವ ವಿಶ್ವವಿದ್ಯಾನಿಲಯಗಳೂ ಕಲಿಸುವುದಿಲ್ಲ. ಒಳಿತು-ಕೆಡುಕು, ಕತ್ತಲು-ಬೆಳಕು, ಬೇಸಿಗೆ-ಚಳಿಗಾಲ ನಡುವೆ ಒಂದಷ್ಟು ಮಳೆ, ಎಲ್ಲಾ ಅನುಭವಗಳೂ ಬದುಕೆಂಬ ಹಣ್ಣನ್ನು ಮಾಗಿಸುತ್ತವೆ. ನೀವು ಈ ಅನುಭವಗಳನ್ನು ಎದುರಿಸಲು ಕೊಂಚ ಹಿಂಜರಿದರೂ ನಿಮ್ಮ ವ್ಯಕ್ತಿತ್ವ ಪ್ರಬುದ್ಧವಾಗುವ ಅವಕಾಶ ಕಳೆದುಕೊಳ್ಳುತ್ತೀರಿ. ನೀವೆಷ್ಟು ಕಹಿ ಉಣ್ಣುತ್ತೀರೋ ಅಷ್ಟೇ ಸಿಹಿಯ ಪರಮಾನ್ನ ನಿಮಗೆ ಕಾದಿರುತ್ತದೆ ಎನ್ನುವುದನ್ನು ಮರೆಯದಿರಿ. ಜೀವನ ಕೇವಲ ಸುಖವನ್ನಷ್ಟೇ ನೀಡಬೇಕು ಎಂದು ಬಯಸುವುದು ಅಜ್ಞಾನ. ಸುಖಜೀವನ ಮಾಡುವ ಸಿರಿವಂತನ ಮಾತಾಡಿಸಿ ನೋಡಿ ಅವನಲ್ಲೂ ಕೊರಗುಗಳಿರುತ್ತವೆ. ಖುದ್ದಾಗೇ ತಾನೇ ಕಷ್ಟಗಳನ್ನು ಸೃಷ್ಟಿಸಿಕೊಂಡಿರುತ್ತಾನೆ ಅಥವಾ ನೋವುಗಳನ್ನು ಎದುರಿಸುವಲ್ಲಿ ಸೋತು ಹತಾಶೆ-ಖಿನ್ನತೆಗೆ ಗುರಿಯಾಗುತ್ತಾನೆ. ಬದುಕಿನ ಅನುಭವಗಳಿಗೆ ತೆರೆದುಕೊಳ್ಳದವರು ಬದುಕಿನ ಆನಂದಗಳನ್ನು ಅನುಭವಿಸುವಲ್ಲಿಯೂ ಸೋಲುತ್ತಾರೆ.
ಬದುಕಿನಲ್ಲಿ ನೀವು ಅನುಭವಿಸುವ ಪ್ರತಿಯೊಂದು ಭಾವವೂ ಒಂದು ಭವಿಷ್ಯದ ಸಂಕೇತ ಹೊಂದಿರುತ್ತವೆ ಮತ್ತು ಮುಂದಿನ ದಿನಗಳ ಪರಿಣಾಮದ ಮುನ್ಸೂಚನೆ ನೀಡುತ್ತಿರುತ್ತವೆ. ಬದುಕಿನಲ್ಲಿ ಕಷ್ಟಗಳನ್ನು ಎದುರಿಸುವವನು, ನೋವುಂಡವನು, ಹಸಿವು-ಅವಮಾನ ಮತ್ತು ಬಡತನಗಳಲ್ಲಿ ಬೆಂದವನ ಜೀವನವನ್ನು ಗಮನಿಸಿ, ಆತ ತನಗೇ ಅರಿವಿಲ್ಲದಂತೆ ಅತ್ಯಂತ ಗಟ್ಟಿಯಾದ ತಳಪಾಯ ಹಾಕಿಕೊಂಡಿರುತ್ತಾನೆ. ಜೀವನದಲ್ಲಿ ದುಃಖವು ಆಳವನ್ನು ನೀಡುತ್ತದೆ. ಆದರೆ ಸಂತೋಷ ಎತ್ತರವನ್ನು ನೀಡುತ್ತದೆ. ದುಃಖವು ಬೇರುಗಳನ್ನು ನೀಡುತ್ತದೆ. ಸಂತೋಷವು ಬದುಕಿನ ಮರದ ಶಾಖೆಗಳನ್ನು ನೀಡುತ್ತದೆ. ಇಲ್ಲಿನ ತರ್ಕ ಸರಳ ಸಂತೋಷ ಆಕಾಶದೆತ್ತರ ಬೆಳೆದು ನಿಲ್ಲುವ ಬದುಕಿನ ಮರದಂತೆ, ಆದರೆ ದುಃಖ ಅದೇ ಬದುಕೆಂಬ ಮಹಾವೃಕ್ಷದ ಬೇರುಗಳು ಭೂಮಿಯ ಗರ್ಭಕ್ಕೆ ಆಳವಾಗಿ ಇಳಿಸಿ ದೃಢವಾಗಿಸುತ್ತದೆ. ಒಂದು ಪರಿಪೂರ್ಣ ಬದುಕಿಗೆ ಈ ಎರಡೂ ಅಗತ್ಯವಿದೆ. ಬದುಕಿನ ಮರದ ಬೇರುಗಳು ದೃಢವಾದಷ್ಟು ಅದರ ಶಾಖೆಗಳು ವಿಸ್ತರಿಸಿ ಎತ್ತರೆತ್ತರಕ್ಕೆ ಬೆಳೆಯುತ್ತದೆ. ಒಂದೆಡೆ ಮರದ ಬೇರುಗಳು ಭೂತಳದಲ್ಲಿ ಆಳವಾಗಿ ಊರಿದಷ್ಟೂ. ಇನ್ನೊಂದೆಡೆ ಫಲವತ್ತಾಗಿ ಬೆಳೆಯುತ್ತದೆ; ಇದೊಂದು ಏಕಕಾಲದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಮತ್ತು ಇಲ್ಲಿ ಕಷ್ಟ ಹಾಗೂ ಸುಖಗಳು, ನೋವು ಹಾಗೂ ನಲಿವುಗಳು, ಸಂತೋಷ ಹಾಗೂ ದುಃಖಗಳು ಸಮಾನ ಅನುಪಾತದಲ್ಲಿರುತ್ತವೆ.
ಜೀವನವನ್ನು ಹೆಚ್ಚು ಪ್ರೀತಿಸುವವರು ಹೆಚ್ಚು ಸೃಜನಶೀಲರಾಗಿರುತ್ತಾರೆ. ಬದುಕನ್ನು ಸುಂದರಗೊಳಿಸುವವರೆಲ್ಲರೂ ಅಪ್ರತಿಮ ಕಲಾವಿದರೇ ಆಗಿರುತ್ತಾರೆ. ಬದುಕಿನ ಪ್ರತಿಮೆಯ ಸೌಂದರ್ಯ ಹೆಚ್ಚಿಸಲು ಸೃಜನಶೀಲರಾಗಿ ಯೋಚಿಸುವ ಮತ್ತು ಸೃಜನಶೀಲತೆಯಿಂದ ವರ್ತಿಸಬೇಕಾದ ಅಗತ್ಯವಿದೆ. ಬದುಕನ್ನು ಸೃಜನಶೀಲತೆಯಿಂದ ಕೆತ್ತುವುದು ಎಂದರೆ ಒಂದಷ್ಟು ಮಧುರವಾದ ಸಂಗೀತ, ಒಂದಷ್ಟು ಚೇತೋಹಾರಿಯಾದ ನೃತ್ಯ, ಒಂದಷ್ಟು ಹಾಸ್ಯ-ಹರಟೆ-ಮಾತು ಮಂಥನ, ಒಂದಷ್ಟು ಅರ್ಥಗರ್ಭಿತವಾದ ನವಿರಾದ ಕವಿತೆಗಳು, ರೋಚಕತೆಯ ವಸ್ತುವುಳ್ಳ ಕಥೆ-ಕಾದಂಬರಿಗಳು, ನಿರಂತರ ಓದು-ಕಲಿಕೆ, ಉತ್ತಮ ವ್ಯಕ್ತಿಗಳೊಂದಿಗೆ ಒಡನಾಟ, ಸತ್ಸಂಗ-ಸದ್ವಿಚಾರ ಇತ್ಯಾದಿ. ಹೀಗೆ ಒಳ್ಳೆಯತನಗಳನ್ನೇ ಆಲೋಚಿಸಿದಾಗ ಉತ್ತಮವಾದುದ್ದೇ ಸೃಜಿಸಲಾಗುತ್ತದೆ; ಅತ್ಯುತ್ತಮ ಕೃತಿ ನಿರ್ಮಾಣವಾಗುತ್ತದೆ.
ಒಂದು ಕ್ಷಣ ಸುಮ್ಮನೆ ಕುಳಿತು ಘಟಿಸಿದ ಘಟನೆಗಳಿಗೆ ಸಾಕ್ಷಿಯಾಗಿ ಮೆಲುಕುಹಾಕಿಕೊಳ್ಳಿ. ನಿಮ್ಮ ಬದುಕಿನ ಘಟನೆಗಳಲ್ಲೆ ನಿಮಗೆ ಒಳಿತು ಮತ್ತು ಕೆಡುಕುಗಳು ಸಾಕಷ್ಟು ಸಿಗುತ್ತವೆ. ಒಳಿತನ್ನು ಆಯ್ದುಕೊಳ್ಳಿ, ಉತ್ತಮವಾದುದ್ದು ಯಾವುದೆಂದು ನಿರ್ಧರಿಸಿ, ಔನ್ನತ್ಯದ ಪರವಾಗಿ ನ್ಯಾಯ ಒದಗಿಸಿ ನೋಡಿ. ನಿಮ್ಮ ವ್ಯಕ್ತಿತ್ವ ಮಂಥನ ಆಗೇಹೋಗುತ್ತದೆ. ಯಾವಾಗ ನೀವು ಒಳಿತು-ಕೆಡುಕು, ಉತ್ತಮ-ಕಳಪೆ, ನ್ಯಾಯೋಚಿತ-ಅನ್ಯಾಯ, ಔನ್ನತ್ಯ-ಹೀನಾಯ ಎಂಬುದಾಗಿ ಸ್ಪಷ್ಟವಾಗಿ ನಿರ್ಧರಿಸುತ್ತೀರೋ ಆಗ ನಿಮ್ಮ ಬದುಕಿನ ಶಿಲ್ಪ ಮತ್ತಷ್ಟು ಸುಂದರಗೊಳ್ಳುತ್ತದೆ. ಇದಕ್ಕಾಗಿ ನೀವು ಹಳೆಯ ಕಟ್ಟುಪಾಡುಗಳನ್ನೋ, ಶಾಸ್ತ್ರ-ಸಂಪ್ರದಾಯಗಳನ್ನೋ, ರೂಢಿ-ರೀತಿ-ರಿವಾಜುಗಳನ್ನೋ, ದೇವರು-ದಿಂಡಿರು-ಧರ್ಮಶಾಸ್ತ್ರಗಳನ್ನೋ ಆಧಾರದಲ್ಲಿಟ್ಟುಕೊಳ್ಳಬೇಕಾಗಿಲ್ಲ. ಇಷ್ಟಕ್ಕೆಲ್ಲಾ ಬೇಕಿರುವುದು ಒಂದು ಸಣ್ಣ ಸಾಮಾನ್ಯ ಜ್ಞಾನ, ವಿವೇಕ, ಅಂತರಂಗದ ಅರಿವು, ವಿವೇಚನೆ ಮತ್ತು ಸದ್ವಿಚಾರ ಆಲೋಚನೆ ಮಾತ್ರ. ಆತ್ಮಸಾಕ್ಷಿಗಿಂತ ಮಿಗಿಲಾದ ನ್ಯಾಯಾಧೀಶ ಮತ್ತೊಬ್ಬನಿಲ್ಲ. ಬೇರೆಯ ಪುರಾವೆಗಳನ್ನು ಹುಡುಕುವುದನ್ನು ಈಗಿಂದೀಗಲೇ ಬಿಟ್ಟುಬಿಡಿ. ನೀವು ಯಾರದ್ದಾದರೂ ಮಾತು ಕೇಳುತ್ತೀರಿ ಎಂದಾದರೇ ಕೇವಲ ನಿಮ್ಮ ಮನಸಿನ ಮಾತುಗಳನ್ನು ಮಾತ್ರ ಕೇಳುವಂತವರಾಗಿ. ನಿಮ್ಮ ನಿಜವಾದ ಮಾಲೀಕ ನಿಮ್ಮ ಮನಸು ಮತ್ತು ಅಂತಃಸಾಕ್ಷಿ ಮಾತ್ರವೇ ಆಗಿರಲಿ. ಆ ಮನಸಿನಲ್ಲಿ ಒಂದಷ್ಟು ಪ್ರೀತಿ, ಮತ್ತೊಂದಷ್ಟು ಕಾರುಣ್ಯ, ಮಗದೊಂದಿಷ್ಟು ಸಹಾನುಭೂತಿ ತುಂಬಿಕೊಂಡಿದ್ದರೇ ನಿಮಗಿಂತ ಸಿರಿವಂತ ಈ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ. ಜಗತ್ತಿನ ಸಕಲ ಜೀವರಾಶಿಗಳ ಮೇಲೆ, ಚರಾಚರ ವಸ್ತು ವಿಚಾರಗಳ ಕುರಿತು ಅಧಮ್ಯ ಪ್ರೇಮ ಹೊತ್ತವನಷ್ಟು ಸುಖಿ ಈ ಜಗತ್ತಿನಲ್ಲಿ ಮತ್ಯಾರೂ ಇರಲು ಸಾಧ್ಯವಿಲ್ಲ. Saakshatv Oshoyisam episode 6
ಮೊದಲು ನಿಮ್ಮ ಮನಸನ್ನು ಖಾಲಿಯಾಗಿಸಿಕೊಳ್ಳಿ; ಆಗ ತನ್ನಿಂತಾನೇ ಅದರೊಳಗಿನ ಕಲ್ಮಶ ಶುಚಿಯಾಗುತ್ತದೆ. ಖಾಲಿಯಾದ ಮನಸು ಖಾಲಿಯಾದ ಅಮೃತ ಬಟ್ಟಲಿನಂತೆ. ಅದರೊಳಗೆ ತುಂಬಬೇಕಿರುವುದು ಪ್ರೀತಿ-ಸಹನೆ-ದಯೆ-ಕಾರುಣ್ಯಗಳೆಂಬ ಪಾಕ ಮಿಶ್ರಣಗೊಂಡ ಅಮೃತವನ್ನಷ್ಟೆ. ಹೀಗೆ ಸವಿಯಾದ ಜೇನಿನಂತಹ ಗುಣಗಳನ್ನು ತುಂಬಿಕೊಂಡ ಮನಸು ಪ್ರಪಂಚವನ್ನು ನೋಡುವ ದೃಷ್ಟಿ ಅತ್ಯುತ್ತಮವಾಗಿರುತ್ತದೆ. ಮನಸು ಶುದ್ಧವಾದಷ್ಟು ನೋಡುವ ದೃಷ್ಟಿ ಲಾವಣ್ಯಭರಿತವಾಗುತ್ತದೆ. ಉತ್ಕಟ ಪ್ರೀತಿಯನ್ನು ಮನಸಿನಲ್ಲಿ ತುಂಬಿಕೊಂಡ ಪ್ರೇಮಿಯೊಬ್ಬನಿಗೆ ಅದೆಷ್ಟೇ ಕುರೂಪ ಹೊಂದಿದ ಪ್ರಪಂಚವೂ ಅದ್ಭುತವಾಗಿಯೇ ಕಾಣುತ್ತದೆ. ಯಾಕೆಂದರೆ ನಿಜವಾದ ಸೌಂದರ್ಯವಿರುವುದು ಹೊರಗಿನ ಭೌತಿಕ ವಿಶ್ವದಲ್ಲಿ ಅಲ್ಲ. ಒಳಗಿನ ಆಂತರ್ಯದ ದೃಷ್ಟಿಯಲ್ಲಿ ಮತ್ತು ನಿರ್ಮಲವಾದ ಮನಸಿನಲ್ಲಿ. ಇದೇ ನಿಜವಾದ ಜ್ಞಾನೋದಯ, ಇದೇ ನಿಜವಾದ ರಸವಿದ್ಯೆ, ಇದೇ ನಿಜವಾದ ವಿವೇಕ.
ನಿರೂಪಣೆ:-
-ವಿಭಾ (ವಿಶ್ವಾಸ್ ಭಾರದ್ವಾಜ್)
#Oshoyisam #ಓಶೋ #ವಿಭಾ
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ