ಧೂರ್ತ ರಾಜಕೀಯದ ಹುಸಿ ವಿಕಾಸವಾದದ ಭೂತಕುಣಿತಕ್ಕೆ ಬಲಿಯಾಗುವ ಶೇರ್ನಿ; ಒಂದು ಮನಕಲಕುವ ಕಥಾನಕವುಳ್ಳ ಸಿನಿಮಾ: Marjala manthana Sherni movie
ಅಮೇಜಾನ್ ಪ್ರೈಂನಲ್ಲಿ ಒಂದು ಸೂಕ್ಷ್ಮ ಸಂಗತಿಯ ಪ್ರಶ್ನೆ ಎತ್ತುವ ಸಿನಿಮಾ ಬಿಡುಗಡೆಯಾಗಿದೆ. ಪ್ರಶ್ನೆಯೆಂದರೆ ಕಾಡು ಮುಖ್ಯವೇ ಅಥವಾ ಅಭಿವೃದ್ಧಿಯೆನ್ನುವ ಮಾಯಾಜಿಂಕೆಯೆ. ಕಾಡು ಮತ್ತು ವನ್ಯಜೀವಿಗಳ ಬದುಕಿಗೆ ಕಂಟಕ ತರುವ ವಿಕಾಸವಾದ ಅಗತ್ಯವಿದೆಯೆ? ಕಾಡಿನ ನಡುವೆ ಹೈವೆ ಮತ್ತು ಗಣಿಗಾರಿಕೆ ಕಾಡಿನ ವ್ಯವಸ್ಥೆಗೆ ಅದೆಷ್ಟು ದೊಡ್ಡ ಧಕ್ಕೆ ಉಂಟುಮಾಡುತ್ತಿದೆ? ಅಂತಿಮವಾಗಿ ಕಾಡು ಮತ್ತು ಮನುಷ್ಯನ ನಡುವಿನ ಕೊಂಡಿ ಹೇಗಿರಬೇಕಿತ್ತು ಮತ್ತು ಅದ್ಯಾಕೆ ಹಾಗಿಲ್ಲ!! ಈ ಎಲ್ಲಾ ಪ್ರಶ್ನೆಗಳನ್ನು ಈ ಸಿನಿಮಾ ನೋಡಿಕೊಂಡವರು ಒಮ್ಮೆ ಕೇಳಿಕೊಂಡರೆ ಖಂಡಿತಾ ಕಾಡಿನ ಉಳಿವು ಮತ್ತು ವನ್ಯಜೀವಿಗಳ ಬದುಕು ಸಾಧ್ಯ.
ಒಂದು ಕಾಡು.. ಕಾಡಿನ ನಿಯಮ.. ಅಭಿವೃದ್ಧಿ ಎನ್ನುವ ಮಿಥ್ಯೆ.. ಎರಡು ಮರಿಗಳಿರುವ ತಾಯಿ ಹುಲಿ ಟಿ-12.. ಹೀನ ರಾಜಕಾರಣದ ನೀಚ ವ್ಯವಸ್ಥೆ.. ಪರಮ ಅವಿವೇಕಿ ರಾಜಕಾರಣಿಗಳು.. ಕಾಡಂಚಿನ ಗ್ರಾಮವಾಸಿಗಳ ದಾರಿತಪ್ಪಿಸುವ ಪರಮ ದುರುಳ ನಾಯಕರು.. ಒಬ್ಬ ಶೋಕಿಲಾಲ ಪ್ರಭಾವಿ ಬೇಟೆಗಾರ.. ಬೇಜವಾಬ್ದಾರಿ ಮತ್ತು ಅಧಿಕಾರಶಾಹಿಗಳ ಕೈಗೊಂಬೆಯಾದ ಬ್ಯೂರೋಕ್ರಸಿ.. ಕಾಡಿನ ತವರಿನಲ್ಲಿ ಜೀವಿಸುವ ಹುಲಿಯನ್ನು ನರಭಕ್ಷಕ ಎಂದು ಬಿಂಬಿಸುವ ಹೊಣೆಗೇಡಿ ಮಾಧ್ಯಮ.. ಒಬ್ಬಳು ಪ್ರಾಮಾಣಿಕ ಅಧಿಕಾರಿಣಿಯ ಸಂಘರ್ಷ.. ಹೆಣ್ಣುಹುಲಿಯನ್ನು ಶತಾಯಗತಾಯ ರಕ್ಷಿಸಲೇಬೇಕೆಂಬ ತಹತಹಿಕೆಯ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳು.. ಕೊನೆಗೂ ಶೇರ್ನಿಯನ್ನು ಉಳಿಸಿಕೊಳ್ಳಲಾಗದ ಹತಾಷೆ.. ಅಮೇಜಾನ್ ಪ್ರೈಮ್ ನಲ್ಲೊಂದು ಸಿನಿಮಾ ಬಂದಿದೆ ನೋಡಿ ವಿದ್ಯಾ ಬಾಲನ್ ಳ ಶೇರಿಣಿ. ಕಥೆಯ ಓಘ ನಿಧಾನವಿದೆ ಆದರೆ ಎಲ್ಲಾ ಪರಿಸರ ಪ್ರಿಯರನ್ನು ಕಾಡುತ್ತದೆ. ನಿಮಗೆ ಮಹಾರಾಷ್ಟ್ರದಲ್ಲಿ ಸ್ಟೇಟ್ ಸ್ಪಾನ್ಸರ್ಡ್ ಮರ್ಡರ್ ಬಲಿಯಾದ ಹೆಣ್ಣು ಹುಲಿ ಅವ್ನಿ ನೆನಪಿದ್ದಾಳಾ? ಇದು ಅದರದ್ದೇ ಕಥೆಯೇನೋ ಅನ್ನಿಸುತ್ತದೆ. Marjala manthana Sherni movie
ಲೀವ್ ಎಂಡ್ ಲೆಟ್ ಲೀವ್ ಅನ್ನೋ ಸವಕಳಿಯಾದ ಡೈಲಾಗ್ ಮತ್ತು ಬೇವರ್ಸಿ ರಾಜಕಾರಣ ಅಷ್ಟೇ ಅಲ್ಲ ಇಡೀ ಮನುಷ್ಯ ಸಂಕುಲದ ಮೇಲೆಯೆ ಅಸಹ್ಯ ಹುಟ್ಟುತ್ತದೆ. ಕಾಡು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಕಾಡು ಹುಲಿಯದ್ದು ಮತ್ತು ಅದರ ಪರಂಪರೆಯದ್ದು ಮಾತ್ರ. ಇವತ್ತು ಕಾಡಿನ ಖಜಾನೆ ಕೊಳ್ಳೆಹೊಡೆಯುವ ಯಾವುದೇ ಮನುಷ್ಯನಾದರೂ ಬದುಕಲು ಯೋಗ್ಯನಲ್ಲ.. ಅವನು ರಾಜಕಾರಣಿಯಾದರೂ ಸರಿ, ಅಧಿಕಾರಿಯಾದರೂ ಸರಿ, ವ್ಯವಸ್ಥೆಯ ಲಾಭ ಪಡೆದುಕೊಳ್ಳ ಬಯಸುವ ಯಾವುದೇ ಮನುಷ್ಯನಾದರೂ ಸರಿ..
ಶೇರ್ನಿ ಸಿನಿಮಾದಲ್ಲಿ ಕಥಾನಾಯಕಿಯಾದ ಡಿಎಫ್ಓ ಪಾತ್ರದಲ್ಲಿ ವಿದ್ಯಾ ಬಾಲನ್ ರ ಸಹಜ ಅಭಿನಯ ಮೆಚ್ಚುಗೆ ಮೂಡಿಸುತ್ತದೆ. ವನ್ಯಜೀವಿ ಪ್ರೇಮಿ ಜೀವಶಾಸ್ತ್ರದ ಉಪನ್ಯಾಸಕನಾಗಿ ಹಾಸ್ಯನಟ ವಿಜಯ್ ರಾಝ್ ಗಂಭೀರ ಪಾತ್ರಗಳ ಅಭಿನಯಕ್ಕೂ ತಾವು ಸೈ ಎಂದು ನಿರೂಪಿಸುತ್ತಾರೆ. ಹಂಟರ್ ಪಾತ್ರಧಾರಿ ಟಿ-12 ಹುಲಿಯನ್ನು ಬೇಟೆಯಾಡುವ ಶರತ್ ಸಕ್ಸೇನಾರ ಘಮಂಡ್, ಚಿತ್ರದ ಕಥಾವಸ್ತುವಿನ ಹಿಂದಿರುವ ಆಶಯ ಪೂರ್ತಿ ಮಾಡುತ್ತದೆ. ಇನ್ನು ದಕ್ಷ ಅಧಿಕಾರಿ ಸೋಗಿನ ನೀರಜ್ ಕಬಿ ಅಧಿಕಾರಿಶಾಹಿ ವ್ಯವಸ್ಥೆಯ ಗೋಮುಖ ವ್ಯಾಘ್ರತನವನ್ನು ಸಾಬೀತು ಮಾಡುತ್ತದೆ. ಚಿತ್ರದಲ್ಲಿ ಮನಸೆಳೆಯುವ ಒಂದು ಪ್ರಮುಖ ಅಂಶವೆಂದರೆ ಪ್ರಾಮಾಣಿಕ ಅಧಿಕಾರಿಣಿ ವಿದ್ಯಾ ವಿನ್ಸಂಟ್ ಳ ವನ್ಯಜೀವಿ ಕಾಳಜಿಯನ್ನು ಕಾಡಂಚಿನ ಗ್ರಾಮವಾಸಿಗಳು ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದರಿಂದಾಗಿಯೇ ಹತ್ಯೆಯಾದ ಟಿ -12 ಹೆಣ್ಣು ಹುಲಿಯ ಎರಡೂ ಮರಿಗಳ ರಕ್ಷಣೆಯಾಗುತ್ತದೆ. ಚಿತ್ರವನ್ನು ನೋಡಿದ ಯಾವುದೇ ಪರಿಸರ ಪ್ರೇಮಿಗಳಿಗೆ ಈ ಚಿತ್ರ ಹೇಳುವ ವ್ಯವಸ್ಥೆಯ ಕರಾಳತೆ ಕಣ್ಣೀರು ತರಿಸುವುದರಲ್ಲಿ ಸಂಶಯವಿಲ್ಲ. ಖಂಡಿತಾ ಬಿಡುವು ಮಾಡಿಕೊಂಡು ಶೇರ್ನಿ ನೋಡಿ.
–ವಿಭಾ
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ