ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ಸಂಪುಟ ಕಸರತ್ತಿನ ಸುನಾಮಿ ಎದ್ದಿದೆ. ದೆಹಲಿಯಿಂದ ಸಚಿವರ ಪಟ್ಟಿಯನ್ನ ಹೊತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ, ಅವರ ಸದಾಶಿವನಗರದ ನಿವಾಸ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಪ್ರಭಾವಿ ನಾಯಕರು ಸಾಲು ಸಾಲಾಗಿ ಡಿಕೆಶಿ ಮನೆಗೆ ಧಾವಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಬೆಳಗಾವಿಯ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರ ಭೇಟಿ ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.
ಸಾಹುಕಾರ್ ಹಾಕಿದ ಡಬಲ್ ಡಿಮ್ಯಾಂಡ್ ಗೇಮ್
ಸತೀಶ್ ಜಾರಕಿಹೊಳಿ ಅವರು ಕೇವಲ ಸೌಜನ್ಯದ ಭೇಟಿಗಾಗಿ ಡಿಕೆಶಿ ಮನೆಗೆ ಹೋಗಿಲ್ಲ. ಅವರ ಕೈಯಲ್ಲಿ ಎರಡು ಪ್ರಬಲ ಬೇಡಿಕೆಗಳ ಪಟ್ಟಿಯಿದೆ. ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ (DCM) ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದಲ್ಲಿ, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ತನಗೇ ನೀಡಬೇಕು ಎಂಬ ಮಾಸ್ಟರ್ ಪ್ಲಾನ್ ಅನ್ನು ಅವರು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ ಸಾಮ್ರಾಜ್ಯದ ಮೇಲೆ ಕಣ್ಣು
ಸತೀಶ್ ಜಾರಕಿಹೊಳಿ ಅವರಿಗೆ ಇಷ್ಟೊಂದು ಆತುರ ಮತ್ತು ಪಟ್ಟು ಏಕಪ್ಪಾ ಅಂದರೆ, ಅದು ಬೆಳಗಾವಿ ಜಿಲ್ಲೆಯ ಮೇಲಿರುವ ಅವರ ಹಿಡಿತ. ಒಂದು ವೇಳೆ ಸಂಪುಟದಲ್ಲಿ ತಮಗೆ ಸಿಗಬೇಕಾದ ಪ್ರಬಲ ಸ್ಥಾನ ಸಿಗದಿದ್ದರೆ, ಜಿಲ್ಲೆಯಲ್ಲಿ ತಮ್ಮ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಆತಂಕ ಜಾರಕಿಹೊಳಿ ಅವರನ್ನ ಕಾಡುತ್ತಿದೆ. ಹೀಗಾಗಿ ಮಂತ್ರಿ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನವನ್ನೇ ಕೇಳ್ತಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಹೈಕಮಾಂಡ್ ಹಾಕಿದ ಬ್ರೇಕ್ ಮತ್ತು ಹರಿಪ್ರಸಾದ್ ಎಂಟ್ರಿ
ಸತೀಶ್ ಜಾರಕಿಹೊಳಿ ಅವರ ಈ ಎರಡು ಹುದ್ದೆಗಳ ಬೇಡಿಕೆಗೆ ಹೈಕಮಾಂಡ್ ಸದ್ಯಕ್ಕೆ ಮಣೆ ಹಾಕಿದಂತೆ ಕಾಣುತ್ತಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಇದೇ ಗ್ಯಾಪ್ ನಲ್ಲಿ ಈಗ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಹಿರಿಯ ನಾಯಕ ಹಾಗೂ ಓಬಿಸಿ ಸಮುದಾಯದ ಪ್ರಬಲ ಧ್ವನಿಯಾಗಿರುವ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಿದ್ಧರಾಮಯ್ಯ ಮತ್ತು ಯತೀಂದ್ರ ಫ್ಯಾಕ್ಟರ್
ಇನ್ನೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರಿಗೆ ಡಿಸಿಎಂ ಸ್ಥಾನ ಬೇಡ ಎಂದು ಈಗಾಗಲೇ ಹೇಳಿದ್ದಾರೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆಯಿಂದಾಗಿ ಬಿ.ಕೆ. ಹರಿಪ್ರಸಾದ್ ಅವರ ಹಾದಿ ಸುಗಮವಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ, ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ ಡಬಲ್ ಡಿಮ್ಯಾಂಡ್ ಪ್ಲಾನ್ ವರ್ಕೌಟ್ ಆಗುತ್ತಾ ಅಥವಾ ಹೈಕಮಾಂಡ್ ಹರಿಪ್ರಸಾದ್ ಅವರಿಗೆ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ಒಗಟನ್ನ ಹೇಗೆ ಬಿಡಿಸುತ್ತಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲವಾಗಿದೆ.







