ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭಕ್ಕೆ ತೆರಳಿ ಅವರನ್ನು ಅಭಿನಂದಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಇರುವರ ಸ್ನೇಹ ಬಾಂಧವ್ಯಕ್ಕೆ ಇಡೀ ರಾಜ್ಯವೇ ಜೈ ಹೋ ಎಂದಿತ್ತು. ಆದ್ರೆ ಇದೀಗ ರಾಜ್ಯಕೀಯ ಪಡಸಾಲೆಯಲ್ಲಿ ಈ ಬಗ್ಗೆ ಬೇರೆಯದ್ದೇ ಮಾತು ಕೇಳಿ ಬರುತ್ತಿದೆ. ಅದುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಅಭಿನಂದನಾ ಸಮಾರಂಭಕ್ಕೆ ಹೋಗಿದ್ರು ಎಂದು.
ಹೌದು..! ಇಂತಹದ್ದೊಂದು ಮಾತು ರಾಜಕೀಯವಲಯದಲ್ಲಿ ಗಿರಗಿಟ್ಟಲೇ ಹೊಡೆಯುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪರ ಅಭಿನಂದನಾ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಹಲವರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿ ತಮ್ಮ ಮತ್ತು ಬಿಎಸ್ ವೈ ನಡುವಿನ ಸಂಬಂಧ ತುಂಬಾ ಹಳೆಯದ್ದು ಎನ್ನುತ್ತಲೇ ಯಡಿಯೂರಪ್ಪರನ್ನು ಹೊಗಳಿ, ಮನುಷ್ಯತ್ವದ ಬಾಂಧವ್ಯದ ಅರ್ಥವನ್ನು ಉಲ್ಲೇಖಿಸಿದ್ದರು. ರಾಜಕೀಯ ಇದರಿಂದ ಹೊರತಾಗಿದೆ ಎಂದಿದ್ದರು.
ಆದರೆ, ಇದೀಗ ಸಿದ್ದರಾಮಯ್ಯರ ನಡೆ, ರಾಜಕೀಯ ಪ್ರೇರಿತವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದೆ. ತಮ್ಮ ಪುತ್ರ ಡಾ. ಯತೀಂದ್ರರ ರಾಜಕೀಯ ಭವಿಷ್ಯವನ್ನು ವರುಣಾ ಕ್ಷೇತ್ರದಲ್ಲಿ ಭದ್ರವಾಗಿರಿಸಿಕೊಳ್ಳಲು ಸಿದ್ದರಾಮಯ್ಯ, ಸಿಎಂರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನುವ ಊಹಾಪೋಹಗಳು ಕೆಪಿಸಿಸಿ ವಲಯದಲ್ಲಿ ಹರಿದಾಡುತ್ತಿದೆ.
ಅಂದಹಾಗೆ 2018 ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ಕಸರತ್ತು ನಡೆಸಿದ್ದರು. ಅದಕ್ಕಾಗಿ ಕಾರ್ಯಕರ್ತರ ಪಡೆಯೊಂದನ್ನು ಕಟ್ಟಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಈ ನಿಟ್ಟಿನಲ್ಲಿ ಯಡಿಯೂರಪ್ಪರ ಕುಟುಂಬದ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಅಭಿನಂದನಾ ಸಮಾರಂಭಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ.