ಸಿದ್ದು ನಿಜಕನಸು ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್: ಸರಣಿ ಪೋಸ್ಟರ್ ಮೂಲಕ ತಿರುಗೇಟು….
ಬೆಂಗಳೂರು: ಸಿದ್ದು ನಿಜಕನಸುಗಳು ವಿವಾದಿತ ಪುಸ್ತಕಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ಪುಸ್ತಕ ಬಿಡುಗಡೆ ಮುನ್ನವೇ ಸರಣಿ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಅವರ ಸರ್ಕಾರದ ಅವಧಿಯ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ.
ಸೋಮವಾರ ಟೌನ್ ಹಾಲ್ ನಲ್ಲಿ ಸಿದ್ದು ನಿಜ ಕನಸುಗಳುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕದಲ್ಲಿ ಸಿದ್ದರಾಮಯ್ಯ ಫೋಟೋವನ್ನು ಟಿಪ್ಪು ಮಾದರಿಯಲ್ಲಿ ಹಾಕಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಆಯೋಜಕರ ವಿರುದ್ಧ ದೂರು ನೀಡಿದೆ.
ಈ ನಡುವೆ ಈ ಪುಸ್ತಕಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಿದ್ದು ನಿಜಕನಸುಗಳು ಎಂಬ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಗುಡಿಸಲು ಮುಕ್ತ ಕರ್ನಾಟಕದ ಕನಸು
ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಗುಡಿಸಲು ಮುಕ್ತ ಕರ್ನಾಟಕವನ್ನಾಗಿಸುವ ನಿಜಕನಸನ್ನು ಹೊಂದಿತ್ತು, ಇದಕ್ಕಾಗಿ ಪ್ರತಿ ವರ್ಷವೂ 3 ಲಕ್ಷ ಮನೆಗಳನ್ನು ನಿರ್ಮಿಸಿದೆ. ಸಾರ್ವಜನಿಕ ವಸತಿಗೆ ಹೆಚ್ಚಿನ ಆದ್ಯತೆ ನೀಡಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿತ್ತು ಸಿದ್ದರಾಮಯ್ಯನವರ 5 ವರ್ಷದ ಆಡಳಿತದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನ ನಿರ್ಮಿಸಿದ್ದು ಸಿದ್ದು ಸರ್ಕಾರ. ಇದಕ್ಕಾಗಿ ಸರ್ಕಾರವು ಹುಟ್ಕ ಸಂಸ್ಥೆಯಿಂದ ವಸತಿ ಯೋಜನೆಗಳ ಅನುಷ್ಠಾನದ ಅತ್ಯುತ್ತಮ ಸಾಧನೆಯ ಪುರಸ್ಕಾರಕ್ಕೂ ಭಾಜನವಾಗಿದೆ.
ಶಿಕ್ಷಣ ಕ್ರಾಂತಿ -ಸಿದ್ದು ಕನಸು
‘ಪ್ರತಿಯೊಂದು ಮಗು ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ’ ಎನ್ನುವ ಗುರಿಯೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕಾಗಿ ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಮತ್ತು ಬಿಸಿಹಾಲನ್ನು ನೀಡಿತ್ತು. 1 ಕೋಟಿಗೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ.
ಬಡವರಿಗೆ ಉದ್ಯೋಗಾಭಿವೃದ್ಧಿ ಕನಸು
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪಶುಸಂಗೋಪನೆ ಬಹುಮುಖ್ಯ ಕಸುಬಾಗಿದ್ದು ಈ ಕ್ಷೇತ್ರದಲ್ಲಿ ಉದ್ಯೋಗಾಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಪ್ರಮುಖ ಯೋಜನೆಗಳಾದ ಕುರಿಗಾಹಿ ಸುರಕ್ಷಾ ಯೋಜನೆ, ಕ್ಷೀರಭಾಗ್ಯ, ಪಶುಭಾಗ್ಯ ಮುಂತಾದವುಗಳ ಮೂಲಕ ಗ್ರಾಮೀಣ ರೈತರಿಗೆ ಸಿದ್ದರಾಮಯ್ಯ ನವರ ಸರ್ಕಾರವು ಪ್ರೋತ್ಸಾಹ ನೀಡಿದೆ. ಇದರ ಫಲವಾಗಿ ಫಲಾನುಭವಿಗಳ ಸಂಖ್ಯೆಯಲ್ಲಿ ಒಂದು ಲಕ್ಷದಷ್ಟು ಹೆಚ್ಚಳವಾಗಿ 10 ಲಕ್ಷಕ್ಕೆ ಏರಿಕೆಗೊಂಡಿತ್ತು.
ಹಸಿವು ಮುಕ್ತ ಕರ್ನಾಟಕ ಕನಸು
ಬಡಜನರು ಯಾರ ಬಳಿಯೂ ಅನ್ನತ್ತಾಗಿ ಕೈಚಾಚದೆ ಸ್ವಾಭಿಮಾನದ ಬದುಕನ್ನು ಸಾಲಸಬೇಕೆನ್ನುವುದು ಸಿದ್ದರಾಮಯ್ಯ ಸರ್ಕಾರದ ನಿಜಕನಸುಗಳು. ಇದಕ್ಕಾಗಿ ಹಸಿವು ಮುಕ್ತ ಕರ್ನಾಟಕದ ಕನಸಿನೊಂದಿಗೆ ಅನ್ನಭಾಗ್ಯ ಯೋಜನೆಯು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಸಿದ್ದು, ಈ ಯೋಜನೆಯಿಂದ 3.85 ಕೋಟಿ ಬಡ ಜನರ ಪೌಷ್ಠಿಕತೆ ಉತ್ತಮಗೊಂಡಿದೆ.
ಕೃಷಿರಾಮಯ್ಯನಾಗಿ ಸಿದ್ದು ಕನಸುಗಳು
ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾರ್ಚ್ 2018ರವರೆಗೆ 19,561 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಅನೇಕ ಜನಪರ ಯೋಜನೆಗಳನ್ನು ತಂದು ರೈತರ ಕನಸನ್ನು ನೆನಸು ಮಾಡಿದ್ದು ಸಿದ್ದರಾಮಯ್ಯನವರು. ಕಾಂಗ್ರೆಸ್ ಸರ್ಕಾರದ ಅವಧಿಯ ಕೃಷಿ ಬಜೆಟ್ ವೆಚ್ಚವು ಶೇ.256ರಷ್ಟು ಹೆಚ್ಚಾಗಿರುತ್ತದೆ.
ಇಂದಿರಾ ಕ್ಯಾಂಟೀನ್
ಹಸಿದವರ ಹೊಟ್ಟೆ ತಣಿಸುತ್ತಿರುವ ಇಂದಿರಾ ಕ್ಯಾಂಟೀನ್, ಬಡವರು,ಕೂಲಿ ಕಾರ್ಮಿಕರು, ಉದ್ಯೋಗ ಅರಸಿ ದೂರದಿಂದ ಬಂದವರು, ವಿದ್ಯಾರ್ಥಿಗಳು ಮುಂತಾದವರಿಗೆ ಅತೀ ಕಡಿಮೆ ದರದಲ್ಲಿ ಉತ್ತಮ ಆಹಾರ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಯೋಜನೆ ಸಿದ್ದು ಕನಸಿನ ಯೋಜನೆ ನೀಡಲಾಗಿದೆ. ಹೀಗೆ ಪೋಸ್ಟರ್ ಮಾಡುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
Siddaramaiah: Siddaramaiah’s counter to Siddu Nijakanasu book: Retaliation through serial poster….