ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಲ್ಲಿ ಕನ್ನಡದ ಕುತ್ತಿಗೆ ಹಿಸುಕುವ ಕೆಲಸ
ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಬಿಜೆಪಿ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾತನಾಡಿರುವ ಸಿದ್ದರಾಮಯ್ಯ, ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ಈ ವರೆಗೆ ನಾಲ್ಕು ಸೆಮಿಸ್ಟರ್ಗಳ ಅವಧಿಗಳಲ್ಲಿ ಕಲಿಸುತ್ತಿದ್ದು, ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್ಗಳಿಗೆ ಮಿತಿಗೊಳಿಸಿರುವುದು ಕನ್ನಡ ಭಾಷೆಗೆ ಮಾಡಿದ ದ್ರೋಹ.
ಹೊಸ ಶಿಕ್ಷಣ ನೀತಿಯ ಭಾಗವಾಗಿ ಈಗ ಇರುವ ಮೂರು ವರ್ಷದ ಬದಲಾಗಿ ನಾಲ್ಕು ವರ್ಷದ ಪದವಿ ಕೋರ್ಸನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅದಕ್ಕೋಸ್ಕರ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ಸಮಿತಿಯನ್ನು ನೇಮಿಸಲಾಗಿದೆ.
ಪಠ್ಯಪುಸ್ತಕ ರಚನೆಯ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಮಿತಿಗೊಳಿಸಿ ಶಿಫಾರಸ್ಸುಗಳನ್ನು ಮಾಡಿದೆ. ಈ ಶಿಫಾರಸ್ಸುಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶಗಳಲ್ಲಿ ದೇಶ, ಭಾಷೆಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ಅಂಶವೂ ಇದೆ. ಆದರೆ ರಾಜ್ಯದ ಈ ಸಮಿತಿಯು ಕನ್ನಡದ ಪಾಲಿಗೆ ಮಹಾ ದ್ರೋಹವೆಸಗುವಂತಹ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಆರೋಪಗಳನ್ನು ನಾಡಿನ ಹಿರಿಯರು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಒಂದು ಸೆಮಿಸ್ಟರ್ನಲ್ಲಿ ಗರಿಷ್ಠ 90 ದಿನಗಳ ಅವಧಿಯ ಬೋಧನೆ ಇರುತ್ತದೆ. ಪ್ರತಿ ವಿಷಯಕ್ಕೆ ವಾರಕ್ಕೆ 4 ಗಂಟೆಯಂತೆ, ಒಂದು ಸೆಮಿಸ್ಟರ್ನಲ್ಲಿ ಒಂದು ವಿಷಯಕ್ಕೆ 48 ಗಂಟೆ ಬೋಧನಾ ಅವಧಿ ಇರುತ್ತದೆ. 2 ಸೆಮಿಸ್ಟರುಗಳಿಂದ ಗರಿಷ್ಠ 96 ಗಂಟೆಗಳು ಇರುತ್ತದೆ. ಕೇವಲ 96 ಗಂಟೆಗಳ ಅವಧಿಯಲ್ಲಿ ಯಾವ ವಿಷಯವನ್ನು ಕಲಿಸಲು ಸಾಧ್ಯ?
ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿ ತನ್ನ ಕಲಿಕೆಯುದ್ದಕ್ಕೂ ಬೌದ್ಧಿಕತೆಯನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರವಾದ ಮನಸ್ಸನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ. ಇದು ಶಿಕ್ಷಣದ ಮೂಲ ಉದ್ದೇಶವೂ ಹೌದು.
ಸರ್ಕಾರವು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿದರೆ ಅವರು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಕಲಿಯುವುದು ಹೇಗೆ? ವಿದ್ಯಾರ್ಥಿಗಳಿಗೆ ವಿಷಯ ಜ್ಞಾನದಷ್ಟೇ ನೈತಿಕ ಶಿಕ್ಷಣವೂ ಮುಖ್ಯ.
ಕನ್ನಡದ ಶ್ರೇಷ್ಠ ಅಭಿವ್ಯಕ್ತಿಗಳಾದ ವಚನಗಳನ್ನು, ಪಂಪ, ರನ್ನ, ಕುಮಾರವ್ಯಾಸ ಮತ್ತು ಹರಿದಾಸರ ಕಾವ್ಯಗಳನ್ನು ಕಲಿಯುವುದು ಹೇಗೆ? ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮೇರು ಸಾಹಿತಿಗಳಾದ ಕುವೆಂಪು, ಕಾರಂತರು, ಬೇಂದ್ರೆ, ಮಾಸ್ತಿ, ಪು.ತಿ.ನ ಮುಂತಾದವರು ರೂಪಿಸಿದ ಜೀವನೋತ್ಸಾಹದ ಬದುಕಿನ ದರ್ಶನಗಳನ್ನು ಮಕ್ಕಳು ಕಲಿಯುವುದು ಹೇಗೆ?
ದೇಶದ ಸಂಸ್ಕøತಿ, ಭಾಷೆ, ಮಹಾಕಾವ್ಯಗಳು, ಪುರಾಣಗಳು, ಕಲೆ, ಜಾನಪದ ಮುಂತಾದ ಪರಂಪರೆಗಳ ಬಗ್ಗೆ ಮಾತನಾಡುವ ಬಿಜೆಪಿಯು ಪದವಿ ಕಲಿಯುವ ನಮ್ಮ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿ ಕೇವಲ ಅದಾನಿ, ಅಂಬಾನಿಗಳಂಥ ಲೂಟಿಕೋರರ ಮಾದರಿಗಳನ್ನು ಕಲಿಸಲು ಹೊರಟಿದೆಯೆ?
ನಮ್ಮ ದೇಶಕ್ಕೆ ಜ್ಞಾನ ಇರುವ, ದುಡ್ಡಿರುವ ಜನರ ಅಗತ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಮಾನವೀಯ ಹೃದಯ ಇರುವ ಮನುಷ್ಯರ ಅಗತ್ಯವಿದೆ. ಅಂಥದ್ದಕ್ಕೆ ವಿರುದ್ಧವಾದ ನಿಲುವುಗಳನ್ನು ರೂಪಿಸುವುದಕ್ಕಾಗಿ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.
ಈ ದುರುದ್ದೇಶದ ಭಾಗವಾಗಿಯೇ ಉಪಸಮಿತಿಯವರು ಭಾಷೆಗಳ ಕಲಿಕೆಯನ್ನು ಎರಡು ಸೆಮಿಸ್ಟರುಗಳಿಗೆ ಇಳಿಸಿದ್ದಾರೆ. ಸರ್ಕಾರ ಈ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದೆ ಆದರೆ ಅದು ಬಹಳ ದೊಡ್ಡ ಮಟ್ಟದ ಕನ್ನಡ ದ್ರೋಹವಾಗುತ್ತದೆ. ಇದಕ್ಕೆ
ಬಿಜೆಪಿ ಸರ್ಕಾರ ಅವಕಾಶ ಮಾಡಿಕೊಡಬಾರದು
ಆದ್ದರಿಂದ 4 ವರ್ಷದ ಕೋರ್ಸಿಗೆ ಅನುಗುಣವಾಗಿ 3 ವರ್ಷಕ್ಕೆ ಅಥವಾ 6 ಸೆಮಿಸ್ಟರುಗಳಿಗೆ ಭಾಷಾ ವಿಷಯವನ್ನು ಬೋಧಿಸಲು ಕ್ರಮ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನಾಡಿನ ಮಕ್ಕಳು ಉತ್ತಮ ಪರಂಪರೆಗಳಿಗೆ ವಾರಸುದಾರರಾಗಲು ಸಾಧ್ಯವಾಗುತ್ತದೆ ಮತ್ತು ರಾಷ್ಟ್ರಕ್ಕೆ ಬೇಕಾದ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ.
ಅದರ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಬಿಜೆಪಿ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ. ಈ ನಾಡು ಎಂದಿಗೂ ನಾಡು, ನುಡಿಗೆ ದ್ರೋಹ ಎಸಗಿದವರನ್ನು ಕ್ಷಮಿಸಿಲ್ಲ.
ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ರೂಪಿಸಬೇಕಾಗಿದೆ. ಹಾಗಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವಾಗ ಸಂಬಂಧಿಸಿದ ತಜ್ಞರುಗಳ ಜೊತೆ ಚರ್ಚಿಸಿ ಆರೋಗ್ಯಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ನಾಡು-ನುಡಿಯನ್ನು ಕಟ್ಟಲು ಪೂರಕವಾಗುವ ಪಠ್ಯಗಳನ್ನು ರೂಪಿಸಬೇಕು.
ಕನಿಷ್ಠ ಆರು ಸೆಮಿಸ್ಟರುಗಳಲ್ಲಿ ಕನ್ನಡ ಭಾಷಾ ವಿಷಯವನ್ನು ಎಲ್ಲಾ ಪದವಿ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕೆಂದು ರಾಜ್ಯ
ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಎಚ್ಚರಿಸಿದ್ದಾರೆ.