ಮೈಸೂರು: ನಾಡಹಬ್ಬ ಮೈಸೂರು (Mysuru) ದಸರಾ ಜಂಬೂ ಸವಾರಿಗೆ (Jamboosawari) ಈ ಬಾರಿ ವಿವಿಧ ಜಿಲ್ಲೆಗಳ 31 ಸ್ತಬ್ಧ ಚಿತ್ರಗಳು (Tableau ) ಹಾಗೂ ವಿವಿಧ ಇಲಾಖೆಗಳ 18 ಸ್ತಬ್ಧ ಚಿತ್ರಗಳು ಮೆರಗು ನೀಡಲಿವೆ.
ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರ ಮೆರಗು ನೀಡಲಿದೆ. ಬಾಗಲಕೋಟೆಯಿಂದ ರಾಜವಂಶ ಬಾದಾಮಿ ಚಾಲುಕ್ಯರ ಹಾಗೂ ಬನಶಂಕರಿ ಸ್ತಬ್ಧ ಚಿತ್ರ, ಬಳ್ಳಾರಿ ಜಿಲ್ಲೆಯಿಂದ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಿ ದೇವಾಲಯ, ಕಸೂತಿ ಹಾಗೂ ನಾರಿಹಳ್ಳ ಅಣೆಕಟ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಶಿವಗಂಗೆ ದೇವಸ್ಥಾನ ಹಾಗೂ ನೆಲಮಂಗಲ ಸ್ತಬ್ಧ ಚಿತ್ರ, ಬೆಂಗಳೂರು ನಗರದಿಂದ ಚಂದ್ರಯಾನ-3 ರ ಸ್ತಬ್ಧ ಚಿತ್ರ, ಬೀದರ್ ಜಿಲ್ಲೆಯಿಂದ ಕೃಷ್ಣಮೃಗ ಸಂರಕ್ಷಣಾ ಧಾಮದ ಅರಣ್ಯ ಪ್ರದೇಶದ ಸ್ತಬ್ಧ ಚಿತ್ರ, ಚಾಮರಾಜನಗರದಿಂದ ಜಾನಪದ, ಭಕ್ತಿಯ ಬಿಡು ಹುಲಿ, ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಕತೆಯಲ್ಲಿ ಅನೇಕತೆ ಎಂಬ ಸ್ತಬ್ಧ ಚಿತ್ರ, ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟದಿಂದ ಬಟ್ಟಲಿಗೆ ಎಂಬ ಸ್ತಬ್ಧ ಚಿತ್ರ, ಚಿತ್ರದುರ್ಗ ಜಿಲ್ಲೆಯಿಂದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಿಕುಳ ಗುತ್ತಿನ ಮನೆ, ವಿವೇಕಾನಂದ ತಾರಾಲಯ ಹಾಗೂ ಬೀಚ್ ಸರ್ಫಿಂಗ್ ಸ್ತಬ್ಧ ಚಿತ್ರ ಸಂಚಾರ ನಡೆಸಲಿದೆ.
ದಾವಣಗೆರೆಯಿಂದ ಸಂತ ಸೇವಾವಾಲಾ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯದ ಚಿತ್ರ, ಧಾರವಾಡದಿಂದ ಧಾರವಾಡ ಪೇಡ ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ, ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ, ಹಾಸನ ಜಿಲ್ಲೆಯಿಂದ ಹಾಸನಾಂಬ ದೇವಾಲಯ, ಹಲ್ಮಿಡಿ ಶಾಸನ, ಈಶ್ವರ ದೇವಸ್ಥಾನ ಹಾಗೂ ಸಿದ್ದೇಶ್ವರ ದೇವಾಲಯ ಮೂಡಲಿದೆ. ಇನ್ನುಳಿದಂತೆ ಹಲವು ಜಿಲ್ಲೆಗಳಿಂದ ಹಲವಾರು ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಗು ನೀಡಲಿವೆ.