ಕೃಪೆ ಹಿಂಡವಿ
ಲೋಕಮಾತೆ ರಾಣಿ ಕೆಂಪುನಂಜಮ್ಮಣ್ಣಿ ಮತ್ತು ಬ್ರಿಟೀಶ್ ಪ್ರಭುತ್ವ ದಯಪಾಲಿಸಿ ೧೯ ಫಿರಂಗಿಯ ಗೌರವಾರ್ಪಣೆಯ ಹಿಂದಿನ ಕಥೆ:
ದಿನಾಂಕ ೦೮ ಆಗಸ್ಟ್ ೧೯೦೨ ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಿಂಹಾಸನಾರೋಹಣ ಜರುಗಿತು. ಕೃಷ್ಣರಾಜ ಒಡೆಯರ್ ೧೮೯೫ರಲ್ಲಿ ಪಟ್ಟಕ್ಕೇರಿದ್ದರೂ ಅಪ್ರಾಪ್ತರಾಗಿದ್ದುದರಿಂದ ಅವರ ತಾಯಿಯವರೇ ಗಾರ್ಡಿಯನ್ ಅಥವಾ ರೀಜೆಂಟ್ ಆಗಿ ರಾಜ್ಯಾಡಳಿತ ನೋಡಿಕೊಳ್ಳುತ್ತಿದ್ದರು. ಆ ವೇಳೆಗೆ ನಾಲ್ವಡಿಯವರಿಗೆ ಹದಿನೆಂಟು ತುಂಬಿದ್ದರಿಂದ (೦೪-೦೬-೧೮೮೪) ಸಿಂಹಾಸನವನ್ನೇರಿ ರಾಜ್ಯಭಾರ ಮಾಡಲಿದ್ದರು. ಅದಕ್ಕಾಗಿ ವೈಸ್ರಾಯ್ ಲಾರ್ಡ್ ಕರ್ಜನ್ ಶಿಮ್ಲಾದಿಂದ ಮೊದಲ ಬಾರಿಗೆ ಸ್ವತಃ ಮೈಸೂರಿಗೆ ಬಂದಿದ್ದರು. ದೇಶ ವಿದೇಶಗಳಿಂದ ಅತಿಥಿ ಗಣ್ಯರು ಆಗಮಿಸಿದ್ದರು. ಇಡೀ ನಗರ ಅಲಂಕೃತವಾಗಿತ್ತು. ಸಂಸ್ಥಾನದ ಗೌರವಾರ್ಥ ಇಪ್ಪತ್ತೊಂದು ಕುಶಾಲುತೋಪುಗಳ ಗೌರವಾರ್ಪಣೆ ನಡೆಯಿತು. ಫಿರಂಗಿಗಳನ್ನು ಇಪ್ಪತ್ತೊಂದು ಬಾರಿ ಸ್ಫೋಟಿಸುವ ಮೂಲಕ ಸಮಸ್ತ ಸೇನೆ ಸಲ್ಲಿಸುವ ಅತ್ಯುನ್ನತ ಗೌರವಾರ್ಪಣೆ ಅದು. ಈ ಗೌರವ ಸೌಲಭ್ಯವನ್ನು ಕೆಲವೇ ಸಂಸ್ಥಾನಗಳಿಗೆ ನೀಡಲಾಗಿತ್ತು. ಆನೆ ಅಂಬಾರಿಯಲ್ಲಿ ಕುಳಿತು ನಡೆಸುವ ದಸರಾ ಜಂಬೂಸವಾರಿ ಮೆರವಣಿಗೆ ವಿಶ್ವದಲ್ಲೇ ಅಪರೂಪದಲ್ಲಿ ಅಪರೂಪದ್ದು. ಅದರ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಬ್ರಿಟಿಷ್ ಚಕ್ರವರ್ತಿನಿ ೨೧ ಫಿರಂಗಿ ಸ್ಫೋಟಕ್ಕೆ ಅನುಮತಿ ದಯಪಾಲಿಸಿದ್ದರು. ಬ್ರಿಟಿಷ್ ರಾಣಿಗೆ ಇದ್ದ ಈ ಗೌರವಾರ್ಪಣೆಯ ಸಂಖ್ಯೆ ಮೂವತ್ತೊಂದು. ವಿಶ್ವದಲ್ಲೇ ಅತಿ ಹೆಚ್ಚು. ಇತರ ಸಂಸ್ಥಾನಗಳಿಗೆ ನೀಡಿದ್ದ ಸಂಖ್ಯೆ ೧೫, ೧೭ ಹೀಗೆ. ಆಗಿನ ಬ್ರಿಟಿಷ್ ರೆಸಿಡೆಂಟಿಗೆ ಕೊಡಮಾಡಿದ್ದ ಸಂಖ್ಯೆ ಕೂಡ ಕೇವಲ ಹದಿಮೂರು..
ಆಯಾ ಸಂಸ್ಥಾನಗಳ ಅತ್ಯುನ್ನತ ಗೌರವಾರ್ಪಣೆ ಎಂದರೆ ಈ ಕುಶಾಲು ತೋಪುಗಳ ಉಡಾವಣೆ. ಶಾಂತಿ ಸಮೃದ್ಧಿಯ ಸಂಕೇತ. ಸಕಲ ಸೈನ್ಯವೂ ಸಜ್ಜಾಗಿ ನಿಂತಿದ್ದಾಗ, ಒಂದೊಂದೇ ಸಶಸ್ತ್ರ ದಳಗಳು ಪಟ ಪಟನೆ ಗುಂಡನ್ನು ದಿಗಂತಕ್ಕೆ ಹಾರಿಸುತ್ತಾ ಹೋಗುತ್ತವೆ. ಇಪ್ಪತ್ತು ದಳಗಳು ನಿಂತಿವೆ ಎಂದರೆ ಸರಣಿಯಲ್ಲಿ ಹಾರಿಸುತ್ತಾ ಹೋಗುತ್ತವೆ. ಹೀಗೆ ಹಾರಿಸುವಾಗ ರಟ್-ಟಟ್-ಟಟ್ ಎಂಬ ವಿಶಿಷ್ಟ ಲಯದಲ್ಲಿ ಸಾಗುತ್ತದೆ. ಇದು ಮುಖ್ಯ ಅತಿಥಿಗೆ ನೀಡುವ ಗೌರವ. ಮುಂದಿನ ಹಂತವೇ ೨೧ ಬಾರಿ ಫಿರಂಗಿ ಉಡಾವಣೆ. ಇಪ್ಪತ್ತೊಂದನ್ನು ಪ್ರತಿಬಾರಿ ಏಳರಂತೆ ಮೂರು ಹಂತಗಳಲ್ಲಿ ಹಾರಿಸುತ್ತಾರೆ. ಒಂದೊಂದು ಹಂತದಲ್ಲೂ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಅಂದರೆ ೨೧ ಗನ್ ಸಲ್ಯೂಟ್. ಇದು ರಾಷ್ಟ್ರಕ್ಕೆ ಸಲ್ಲಿಸುವ ಅತ್ಯುನ್ನತ ಗೌರವ. ಜನತೆಯ ಪರವಾಗಿ ಮಹಾರಾಜರು ಸ್ವೀಕರಿಸುತ್ತಾರೆ. ಬೆಸ ಸಂಖ್ಯೆಗೂ ಸಕಾರಣವಿದೆ. ಅನೇಕ ಸಂಸ್ಕೃತಿಗಳಲ್ಲಿ ಸಮಸಂಖ್ಯೆ ಸಾವಿನ ಸೂಚಕ. ಅಲ್ಲದೆ ಈ ಜಗತ್ತು ನಿರ್ಮಾಣವಾಗಿದ್ದು ಏಳು ದಿನಗಳಲ್ಲಿ ಎಂಬ ನಂಬಿಕೆ ಬೇರೆ. ಹೀಗಾಗಿ ವಿಶ್ವದ ಸೈನ್ಯಗಳಲ್ಲಿ ಬೆಸಸಂಖ್ಯೆ ಶುಭ ಸೂಚಕವಾಗಿ ಬಳಕೆಯಲ್ಲಿದೆ .
ನಾಲ್ವಡಿಯವರು ಸಿಂಹಾಸನವನ್ನೇರಿದ ಕುರುಹಾಗಿ ಆ ದಿನ ೨೧ ಫಿರಂಗಿ ಸಲ್ಯೂಟ್ ನೀಡಿದ್ದು ಅಸಹಜವೆನಿಸಲಿಲ್ಲ. ಆದರೆ ಆ ದಿನ ಲಾರ್ಡ್ ಕರ್ಜನ್ ಮಾಡಿದ ಅದೊಂದು ಘೋಷಣೆ ಇತರ ರಾಜರ ಹುಬ್ಬೇರಿಸಿತು. ಆವರೆಗೆ ರಾಜಪ್ರತಿನಿಧಿಯಾಗಿ (REGENT) ಏಳು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ್ದ ರಾಜಮಾತೆ ಕೆಂಪು ನಂಜಮ್ಮಣ್ಣಿ ವಾಣಿ ವಿಳಾಸ ಸನ್ನಿಧಾನ ಅವರಿಗೆ ಬ್ರಿಟಿಷ್ ಸಾಮ್ರಾಜ್ಯ ವಿಶೇಷ ಕೊಡುಗೆ ನೀಡಿತ್ತು. ಅವರು ಬದುಕಿರುವ ತನಕ ಹತ್ತೊಂಬತ್ತು ಗನ್ ಸಲ್ಯೂಟಿನ ಗೌರವಾರ್ಪಣೆ. ಆದರದು ಅಧಿಕಾರದಿಂದ ಇಳಿದ ಮೇಲೆ ನೀಡಲಾದ ಕೊಡುಗೆ. ಅದು ಅಸಹಜ, ಅತಿರೇಕವಷ್ಟೇ ಅಲ್ಲ ಅನವಶ್ಯಕ ಎಂದು ಅನೇಕರು ಮೂಗು ಮುರಿದಿದ್ದರು.
ಹೊಸ ಮಹಾರಾಜ ನಾಲ್ವಡಿಯವರಿಗೆ ಶುಭ ಹಾರೈಸಿದ ಮೇಲೆ ಕರ್ಜನ್ ರಾಜಮಾತೆಗೆ ನೀಡುವ ೧೯ ಗನ್ ಸಲ್ಯೂಟಿನ ಬಗ್ಗೆ ವಿವರಿಸುವಾಗ ಸಭಾಸದರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಮೈಸೂರು ಸಂಸ್ಥಾನದ ಪೂರ್ವ ಚರಿತ್ರೆಯನ್ನು ಕ್ರೋಢೀಕರಿಸಿ ಹೇಳಿದ ಲಾರ್ಡ್ ಕರ್ಜನ್,ʼ ಮಹಾರಾಜರು ಪ್ರಾಪ್ತ ವಯಸ್ಕರಾಗುವ ತನಕ ಎಂಟು ವರ್ಷಗಳ ಕಾಲ ಸರ್ವ ಜನ ಸಮ್ಮತವಾಗುವ ರೀತಿಯಲ್ಲಿ, ಅತ್ಯಂತ ವಿವೇಕ ಮತ್ತು ವಿಚಕ್ಷಣತೆಯಿಂದ ಮಹಾರಾಣಿಯವರು ಆಡಳಿತ ನಡೆಸಿದ ರೀತಿಯನ್ನುʼ ಮುಕ್ತ ಕಂಠದಿಂದ ಕೊಂಡಾಡಿದರು.
“ಮಹಾರಾಣಿಯವರು ದೂರದೃಷ್ಟಿ ಇಟ್ಟುಕೊಂಡು ಕಟ್ಟಲು ಪ್ರಾರಂಭಿಸಿದ ವಾಣಿ ವಿಲಾಸ ಅಣೆಕಟ್ಟು (ಹಿರಿಯೂರು ಬಳಿ); ಶಿವನಸಮುದ್ರದ ಬಳಿಯ ಜಲ ವಿದ್ಯುತ್ ಉತ್ಪಾದನೆ ಇನ್ನೇನು ಮುಗಿಯಲು ಬಂದಿದ್ದು ಇವೆಲ್ಲವೂ ಅನನ್ಯ ಸಾಧನೆಗಳಾಗಿವೆ. ಇದಲ್ಲದೆ ಮಹಾರಾಣಿಯವರ ತಾಯ್ತನದ ಅಂತಃಕರಣ ಬಹು ದೊಡ್ಡದು. ನಿರ್ಲಕ್ಷಿತರಾಗಿರುವ ದೀನಾತಿ ದೀನರ ಏಳಿಗೆ ಬಗ್ಗೆ ಅವರು ಅನುಷ್ಠಾನಕ್ಕೆ ತಂದಿರುವ ಕಾರ್ಯಗಳಾದರೂ ಅಷ್ಟೇ. ಚಕ್ರವರ್ತಿನಿಯವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಪಿಡುಗುಗಳಾಗಿದ್ದ ಬಾಲ್ಯ ವಿವಾಹ ಪದ್ಧತಿ ನಿಷೇಧ (೧೮೯೪); ಬಸವಿ ಬಿಡುವ ಪದ್ಧತಿ ನಿರ್ಮೂಲನೆ (೧೮೯೨); ದಲಿತರಿಗಾಗಿ ಪ್ರತ್ಯೇಕ ಶಾಲೆಗಳು, ಅವರಿಗೆ ವೃತ್ತಿಪರ ಶಿಕ್ಷಣಗಳ ನೀಡಿಕೆ; ಉಚಿತ ಭೋಜನ, ವಸತಿ, ಬಟ್ಟೆ, ಸ್ಕಾಲರ್ ಶಿಪ್ ನೀಡಿಕೆ; ಉದ್ಯೋಗದ ಖಾತ್ರಿ ಇರುವ ತಾಂತ್ರಿಕ ಶಿಕ್ಷಣದ ಪಾಲಿಟೆಕ್ನಿಕ್ ನಿರ್ಮಾಣ (೧೮೯೨); ಸಿವಿಲ್ ಸರ್ವೀಸ್ ಪರೀಕ್ಷೆಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆ, ಕಾಲೇಜು, ಆಸ್ಪತ್ರೆಗಳ ಸ್ಥಾಪನೆ ಮುಂತಾದುವನ್ನು ಶ್ರದ್ಧೆಯಿಂದ ಕಾರ್ಯಗತ ಗೊಳಿಸಿದ್ದಾರೆ. ಕಾನೂನು ರಚಿಸುವುದು ದೊಡ್ಡದಲ್ಲ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಸಾಧನೆ ಅಡಗಿದೆ. ಇವೆಲ್ಲವನ್ನೂ ಮಹಾಸಮ್ರಾಜ್ಞಿ ಮನಗಂಡಿದ್ದಾರೆ. ಅದಕ್ಕಾಗಿ ೧೯ ಕುಶಾಲುತೋಪುಗಳ ಗೌರವಾರ್ಪಣೆಯನ್ನು ಜೀವಮಾನವಿಡೀ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಾರೆʼ ಎಂದಾಗ, ಇಡೀ ಸಭೆ ಗಡಚಿಕ್ಕುವ ಚಪ್ಪಾಳೆಯಿಂದ ತುಂಬಿ ಹೋಯಿತು.
ರಾಜ್ಯಾಡಳಿತದಿಂದ ಮಹಾರಾಣಿಯವರು ನೇಪಥ್ಯಕ್ಕೆ ಸರಿದರೂ ಪ್ರಜೆಗಳ ಕ್ಷೇಮ ಮತ್ತು ಅಭಿವೃದ್ಧಿಯತ್ತ ಅವರ ಗಮನವಿತ್ತು. ಮಗನೊಂದಿಗೆ ಚರ್ಚಿಸುತ್ತಿದ್ದರು. ಅದೊಂದು ಬಾರಿ ಶಿವಮೊಗ್ಗೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಜನ ತುಂಬಿಕೊಂಡಿರುವುದು ಕಾಣಿಸಿತು. ಕಾರಿನಿಂದಿಳಿದು ವಿಚಾರಿಸಿದರೆ ತುಂಬು ಗರ್ಭಿಣಿಯೊಬ್ಬಳು ವಿದ್ರಾವಕವಾಗಿ ಸತ್ತು ಬಿದ್ದಿದ್ದಾಳೆ. ಒಂದೆರಡು ದಿನಗಳಿಂದ ಬೇನೆ ತಿನ್ನುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನೋವು ತಡೆಯದೆ ತೀರಿಕೊಂಡಿದ್ದಳು. ಅದಕ್ಕಿಂತ ದಾರುಣವೆಂದರೆ ೫೦–೬೦ ಮೈಲಿ ಫಾಸಲೆಯಲ್ಲಿ ಒಂದೂ ಪ್ರಸೂತಿ ಕೇಂದ್ರಗಳಿಲ್ಲ. ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಲಾಗುತ್ತಿಲ್ಲ. ಜಾನುವಾರುಗಳಿಗೂ ಇದೇ ಸಮಸ್ಯೆ. ಪ್ರತಿವರ್ಷ ನೂರಾರು ಗರ್ಭಿಣಿಯರು ಸಾಯುತ್ತಿದ್ದಾರೆ ಮತ್ತು ಗಬ್ಬದ ಹಸುಗಳು ಸಾವನ್ನಪ್ಪುತ್ತಿವೆ ಎಂದು ಜನ ಅಹವಾಲು ತೋಡಿಕೊಂಡರು. ರಾಣಿಯ ಮನಸ್ಸು ಕದಡಿಹೋಯಿತು. ಏನೋ ಸಂಕಲ್ಪ ಮೂಡಿತು. ಅದನ್ನು ಅಲ್ಲಿದ್ದ ಜನಕ್ಕೆ ಹೇಳಿಯೂ ಬಿಟ್ಟರು. ಮೈಸೂರಿಗೆ ಬಂದವರೇ ಮಗ ನಾಲ್ವಡಿಯವರ ಬಳಿ ಕೋರಿಕೆ ಮುಂದಿಟ್ಟರು. ಮೈಸೂರು ಸಂಸ್ಥಾನದ ಎಲ್ಲ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ತುರ್ತುಚಿಕಿತ್ಸೆ ನೀಡಬಲ್ಲ ಒಂದೊಂದು ಚಿಕ್ಕದಾದ ಹೆರಿಗೆ ಆಸ್ಪತ್ರೆ ಮತ್ತು ಪಶುವೈದ್ಯಶಾಲೆ ನಿರ್ಮಿಸಲು ಕೇಳಿಕೊಂಡರು.
ತಾಯಿಯ ಮಾತನ್ನು ಎಂದೂ ಮೀರದ ನಾಲ್ವಡಿಯವರು ಅಮ್ಮನ ಮಾತಿಗೆ ಮುನಿದುಬಿಟ್ಟರು. “ಕನ್ನಂಬಾಡಿ ಕಟ್ಟುವುದಕ್ಕೇ ರಾಜ್ಯದ ಬೊಕ್ಕಸ ಬರಿದಾಗಿದೆ. ಸಂಸ್ಥಾನದೆಲ್ಲೆಡೆ ಸಾಲ ಎತ್ತಿರುವುದು ಗೊತ್ತಿಲ್ಲವೇ? ಆ ಕೆಲಸವೇ ಇನ್ನೂ ಮುಗಿದಿಲ್ಲ. ಬೆಂಕಿರೋಗಕ್ಕೂ (೧೯೧೯ರ ಪ್ಲೇಗ್) ಜನರಿಗೆ ಸರಿಯಾದ ಸೌಲಭ್ಯ ಒದಗಿಸಲಾಗುತ್ತಿಲ್ಲ. ಬರಗಾಲದ ಸಮಸ್ಯೆಗಳು ನೂರಾರಿವೆ. ಯಾವುದೇ ಹೊಸ ಖರ್ಚು ಈಗ ಬಿಲ್ ಕುಲ್ ಆಗುವುದಿಲ್ಲ. ನಿಧಾನವಾಗಿ ಮಾಡೋಣ” ಎಂದು ಬಿಟ್ಟರು.
ಪ್ರೀತಿಯ ಮಗನಾದರೇನು? ರಾಜನ ಮಾತಿಗೆ ಎದುರಾಡುವುದುಂಟೇ? ಆ ತಾಯಿ ಕಣ್ಣೀರು ಮಿಡಿದು ಮೌನವಾದರು. ತಮ್ಮ ಖಾಸಗಿ ಒಡವೆಗಳನ್ನು ಅಡವಿಟ್ಟು ಸಾಲ ತೆಗೆದುಕೊಳ್ಳೋಣವೆಂದರೆ, ರಾಜ್ಯದ ಸಮಸ್ಯೆಗಳು ಸಧ್ಯಕ್ಕೆ ಮುಗಿಯುವಂತಹುದಲ್ಲ. ಅಡವಿಟ್ಟದ್ದನ್ನು ಬಿಡಿಸಿಕೊಳ್ಳುವುದಾದರೂ ಯಾವಾಗ? ಬೊಂಬಾಯಿಯಲ್ಲಿ ತಮ್ಮ ಸ್ವಂತ ಒಡವೆಗಳನ್ನು ಮಾರಿಸಿ ಸಂಸ್ಥಾನದ ನಾನಾ ಕಡೆ ಹೆರಿಗೆ ಮತ್ತು ಪಶು ಚಿಕಿತ್ಸಾ ಕೇದ್ರಗಳನ್ನು ತೆರೆದಿದ್ದು ಇತಿಹಾಸ. ಈ ಮನೋಧರ್ಮವಿದ್ದ ಮಾತೆಗೆ ಬರಿಯ ಹತ್ತೊಂಬತ್ತೇನು? ಇಪ್ಪತ್ತೊಂದು ಕುಶಾಲು ತೋಪುಗಳ ಗೌರವಾರ್ಪಣೆಗೂ ಅವರು ಅರ್ಹರಾಗಿದ್ದರು.
(ಆಕರ: ನಾನಾ ಮೂಲಗಳು)
-ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು