ಬೆಂಗಳೂರು : ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಡಲಪಾಳ್ಯ ವಾರ್ಡ್ ಸಂಖ್ಯೆ-127ರ ಕಲ್ಯಾಣನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ತ್ರಿವಿಧ ದಾಸೋಹಿ, ಡಾ.’ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿ, ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಉದ್ಘಾಟಿಸಿದರು. ಸುಮಾರು 15 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜ್ಞಾನಸೌಧದ ಉದ್ಘಾಟನಾ ಕಾರ್ಯಕ್ರಮ ಸಿದ್ದಗಂಗಾಮಠದ ಶ್ರೀ ಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಶ್ರೀ ಆದಿಚುಂಚನಗಿರಿ ಮಠದ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ನೆರವೇರಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜ್ಞಾನಸೌಧವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ.. ಜ್ಞಾನಾರ್ಜನೆಗೆ ಬೇಕಾದ ಎಲ್ಲಾ ಸೌಲಭ್ಯ ಗಳು ಈ ಕಟ್ಟಡದಲ್ಲಿವೆ.. ಇದನ್ನು ಎಲ್ಲರು ಸದ್ಯುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧ
ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಬೆಂಗಳೂರನ್ನು ಇಡೀ ದೇಶ-ವಿದೇಶದ ಜನರು ಬಂದು ನೊಡುವಂತ ಈ ಸಿಲಿಕಾನ್ ಸಿಟಿಯ ಅಭಿವೃದ್ಧಿಗೋಸ್ಕರ ಹತ್ತಾರು ಯೋಜನೆಗಳನ್ನು ಮಾಡಿದ್ದೇವೆ. ಬಹುಶಃ ಇನ್ನೆರರೆಡು ತಿಂಗಳುಗಳ ಅವಧಿಯಲ್ಲಿ ಆ ಎಲ್ಲಾ ಯೋಜನೆಗಳು ಪ್ರಾರಂಭವಾದಾಗ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಕಾರ್ಯಕ್ರಮದ ರೂವಾರಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಜ್ಞಾನಸೌಧ ಉದ್ಘಾಟಿಸಿದ ಮುಖ್ಯಮಂತ್ರಿಗಳಿಗೆ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿಗಳಿಗೆ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳಿಗೆ ಧನ್ಯವಾದ ತಿಳಿಸಿದರು. ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಅವರ ಆರ್ಶೀವಾದದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಂದು ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ಅನಾವರಣ ಆಗಿದೆ. ನಾವು ದೇವರನ್ನ ನೋಡಲು ತುಮಕೂರಿಗೆ ಹೋಗಬೇಕಿತ್ತು. ಆದ್ರೆ ಈಗ ಆ ದೇವರು ನಿಮ್ಮ ಮನೆ ಮುಂದೆ ಇದೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಇಂತಹ ಇನ್ನಷ್ಟು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜ್ಞಾನಸೌಧದಿಂದ ಎಲ್ಲರಿಗೆ ಅನುಕೂಲವಾಗಲಿದೆ. ಇದನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಿಎಂ ಬಿಎಸ್ ವೈ ಅವರ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಾಡಿಹೊಗಲಿದ ಸೋಮಣ್ಣ, ಹಲವಾರು ಸಂಕಷ್ಟಗಳ ನಡುವೆ ಮುಖ್ಯಮಂತ್ರಿಗಳು ಎಲ್ಲರು ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಒಂದು ವರ್ಷ ಎರಡು ತಿಂಗಳಿನಲ್ಲಿ ಬಿ.ಎಸ್ ಯಡಿಯೂರಪ್ಪನವರು ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆಗಳು, ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಸಂಕಷ್ಟದಲ್ಲಿದ್ದ ಮಡಿವಾಳ ಸಮಾಜ, ಸವಿತಾ ಸಮಾಜಕ್ಕೆ ಮುಖ್ಯಮಂತ್ರಿಗಳು ನೆರವಾಗಿ ನೀಡಿದ್ದ ಅನುದಾನವನ್ನು ಅವರಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇದೊಂದು ಪವಿತ್ರವಾದ ಕಾರ್ಯಕ್ರಮ. ಇಲ್ಲಿನ ಭಾಗದ ಜನರಿಗೆ ಜನ ಕಲ್ಯಾಣಕ್ಕಾಗಿ ಜ್ಞಾನ ಸೌಧವನ್ನು ನಿರ್ಮಿಸಿರುವುದು ಶ್ಲಾಘನೀಯವಾದದ್ದು. ಇದು ಅತ್ಯಂತ ಸಂತೋಷಕರ ಸಂಗತಿ. ಜ್ಞಾನ ಸೌಧದ ಒಳಗೆ ಪ್ರವೇಶ ಮಾಡಿದವರಿಗೆ ನೆತ್ತಿಗೆ ಜ್ಞಾನ ಸಿಗುತ್ತೆ, ದೇಹಕ್ಕೆ ಆರೋಗ್ಯ ಸಿಗುತ್ತೆ. ಈ ಜ್ಞಾನಸೌಧದಲ್ಲಿರುವ ಇ-ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವವರಿಗೆ ಅನುಕೂಲವಾಗಲಿದೆ. ಆರೋಗ್ಯವಂತ ಮನುಷ್ಯನೇ ನಿಜವಾದ ಶ್ರೀಮಂತ. ಹೀಗಾಗಿ ಇಲ್ಲಿ ಸುಸರ್ಜಿತ ಜಿಮ್ ವ್ಯವಸ್ಥೆ ಮಾಡಿಕೊಡಲಾಗಿದೆ. ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಒಂದೇ ಕಡೆ ದೊರಕಿಸಿಕೊಡುವ ಪ್ರಯತ್ನ ಇಲ್ಲಿ ಆಗಿದೆ. ಇದನ್ನು ಎಲ್ಲರು ಸದ್ಯುಪಯೋಗಪಡಿಸಿಕೊಳ್ಳಬೇಕು.
ನಮ್ಮ ಪರಮಪೂಜ್ಯರ ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿಯನ್ನು ಕಟ್ಟಡದ ಮುಂಭಾಗ ಸ್ಥಾಪಿಸಲಾಗಿದೆ. ಅವರು ನಮ್ಮ ನಾಡಿಗೆ ಬೆಳಕಾಗಿ ಬದುಕಿದರು. ಅವರ ಶ್ರೀರಕ್ಷೆ ಎಲ್ಲರ ಮೇಲಿದೆ. ಅಂತಹ ಪೂಜ್ಯರ ಆಶೀರ್ವಾದದಂತೆ ನಾವು ಕೂಡ ಆರೋಗ್ಯಪೂರ್ಣವಾಗಿ ಬದುಕಬೇಕೆನ್ನುವ ಆಶಯ, ಸಂಕಲ್ಪವನ್ನು, ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಉತ್ಥಳಿಯನ್ನು ಅನಾವರಣಗೊಳಿಸಲಾಗಿದೆ ಎಂದರು.
ಖಜಾನೆ ಖಾಲಿ ಆಗಿರಬಹುದು, ನೀರಿನ ಖಜಾನೆ ತುಂಬಿದೆ. ನೀರನ್ನು ಜೀವನ ಎನ್ನುತ್ತಾರೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಲೆಲ್ಲಾ ಚೆನ್ನಾಗಿ ಮಳೆ ಆಗುತ್ತೆ. ಯಡಿಯೂರಪ್ಪನವರು ಹಲವಾರು ತೊಡಕುಗಳ ನಡುವೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ವಿರೋಧಿಗಳು ಮೆಚ್ಚುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಅವರನ್ನು ಅಭಿನಂದಿಸಿದರು..
ವಿ.ಸೋಮಣ್ಣ ಅವರು ವಸತಿ ಸಚಿವರಾಗಿ ವಸತಿಹೀನರ ಬದುಕನ್ನ ವಸತಿಯುತವಾಗಿ ಮಾಡಬೇಕೆಂಬ ಉದ್ದೇಶದಿಂದ ಲಕ್ಷಾಂತರ ಮಂದಿಗೆ ವಸತಿ ಒದಗಿಸಬೇಕೆಂದು ಸಂಕಲ್ಪ ತೊಟ್ಟು ಆ ಮುಖವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕೆಲಸ ನೀಡಿದರೂ ಸಮರ್ಥವಾಗಿ ನಿರ್ವಹಿಸುವ ಶಕ್ತಿ ಸೋಮಣ್ಣರಲ್ಲಿದೆ. ಕ್ಷೇತ್ರದಲ್ಲೂ ಅವರು ಅದ್ಭುತವಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸೋಮಣ್ಣ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ ಕೋವಿಡ್ ವಿರುದ್ಧ ಪ್ರತಿಯೊಬ್ಬರು ಯೋಧರಾಗಿಸ ಹೋರಾಡಬೇಕೆಂದು ಕರೆಕೊಟ್ಟರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಮಾತನಾಡಿ, ಬಹುದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನ ಕೇಂದ್ರ ಇಂದು ಉದ್ಘಾಟನೆಗೊಂಡಿದೆ.
ಈ ಭೂಮಿ ಜಗತ್ತಿಗೆ ಜ್ಞಾನವನ್ನು ಕೊಟ್ಟಂತಹ ನಾಡು. ಸ್ವಾಮಿ ವಿವೇಕನಂದರು ಭಾರತ ಉಳಿದರೇ ಅಳಿಯುವವರ್ಯಾರು. ಭಾರತವೇ ಅಳಿದರೇ ಉಳಿಯುವವರ್ಯಾರು ಎಂದು ಹೇಳುತ್ತಿದ್ದರು. ಇದರನ್ನು ಅರ್ಥಮಾಡಿಕೊಂಡು ಯಡಿಯೂರಪ್ಪನವರು ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ನೀಡಿದ ಅನುದಾನ ಒಂದು ಪೈಸೆಯಷ್ಟು ಭ್ರಷ್ಟಚಾರವಾಗದೇ ಈ ಕಟ್ಟಡಕ್ಕೆ ಉಪಯೋಗವಾಗಿದೆ. ಇದಕ್ಕೆ ಸೋಮಣ್ಣ ಅವರು ಪೂರಕವಾಗಿ ನಿಂತಿದ್ದಾರೆ. ಬೆಂಗಳೂರಿನಲ್ಲಿ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಕಟ್ಟಡಗಳಿವೆ. ಆದ್ರೆ ಈ ಜ್ಞಾನಸೌಧ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕಟ್ಟಡವಾಗಿದ್ದು, ಅತ್ಯಂತ ಅಧ್ಭುತವಾಗಿ ನಿರ್ಮಿಸಲಾಗಿದೆ. ಜ್ಞಾನಸಾಧನೆ ಮಾಡಬೇಕಾದರೇ ದೇಹ ಮತ್ತು ಮನಸ್ಸು ತುಂಬಾ ಚೆನ್ನಾಗಿರಬೇಕು. ಅದಕ್ಕಾಗಿ ಜ್ಞಾನಸೌಧದಂತಹ ಅತ್ಯುತ್ತಮ ಸಾಧನೆಯನ್ನು ಮಾಡಿರುವ ಸೋಮಣ್ಣ ಅವರಿಗೆ ಧನ್ಯವಾದಗಳು. ಈ ವಿಶೇಷ ಜ್ಞಾನಸೌಧದ ಉಪಯೋಗವನ್ನು ಎಲ್ಲರು ಮಾಡಿಕೊಂಡಾಗ ಕಟ್ಟಡ ಮಾಡಿಕೊಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್, ಬಿಬಿಎಂಪಿ ಆಯುಕ್ತರು, ಮೇಯರ್, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.