ಚಿಕ್ಕಮಗಳೂರು: ಶೃಂಗೇರಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆಕೆಯ ತಾಯಿ ಸೇರಿದಂತೆ ನಾಲ್ವರು ದೋಷಿಗಳೆಂದು ತೀರ್ಪು ನೀಡಿದೆ.
ಅಲ್ಲದೇ, ಈ ನಾಲ್ವರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ. ಆರಂಭದಲ್ಲಿ 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಶೃಂಗೇರಿ ಪೊಲೀಸರು ನಂತರ ತಾಯಿ ಸೇರಿದಂತೆ 53 ಜನರ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ಪ್ರತ್ಯೇಕವಾಗಿ 39 ಪ್ರಕರಣಗಳು ಕೂಡ ದಾಖಲಾಗಿದ್ದವು. ಆಕೆಯ ತಾಯಿಯೇ ತನ್ನ 15 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದಳು. ನ್ಯಾಯಾಲಯ ಮೂರು ವರ್ಷಗಳ ಕಾಲ ಪ್ರತಿಯೊಂದು ಎಫ್ಐಆರ್ ಅನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿತ್ತು. 53 ಜನರ ಪೈಕಿ 49 ಜನ ನಿರ್ದೋಷಿಗಳು. ತಾಯಿ ಗೀತಾ, ಆಕೆಯನ್ನ ಮೊದಲ ಬಾರಿಗೆ ಬಳಸಿಕೊಂಡ ಅಭಿ ಹಾಗೂ ಆಕೆಯನ್ನು ಬಲವಂತವಾಗಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಆ ಕೆಲಸಕ್ಕೆ ದೂಡಿದ ಗಿರೀಶ್ ಹಾಗೂ ದೇವಿಶರಣ್ ದೋಷಿಗಳು ಎಂದು ಕೋರ್ಟ್ ತೀರ್ಮಾನಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕರಣ ವೇಶ್ಯಾವಾಟಿಕೆಗೆ ದೂಡಿದವರು, ಆಕೆಯನ್ನ ಆ ಕೆಲಸಕ್ಕೆ ಪ್ರೇರೇಪಿಸುವುದು ಮಾತ್ರ ತಪ್ಪು ಎಂದು ತೀರ್ಮಾನಿಸಿದೆ. ಹಣ ನೀಡಿ ಗ್ರಾಹಕರಾಗಿ ಹೋಗುವುದು ತಪ್ಪಲ್ಲ. ಆದರೆ ಬಲವಂತವಾಗಿ, ಬೆದರಿಸಿ ಆ ಕೆಲಸ ಮಾಡಿಸುವುದು ತಪ್ಪು ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.