ಉಡುಪಿ : ಪ್ರಾಧ್ಯಾಪಕರ ಕಿರುಕುಳದಿಂದ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬ್ರಹ್ಮಾವರ ಮಂದಾರ್ತಿಯ ಮೈರ್ಕೋಮೆ ನಿವಾಸಿ ಚರಣ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇಂದು ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಪ್ರಾಧ್ಯಾಪಕ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಅಂದಹಾಗೆ ಚರಣ್ ಶೆಟ್ಟಿ ಹೆಬ್ರಿ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದು, “ಕಾಲೇಜ್ ಡೇ’ ದಿನ ಮದ್ಯ ಸೇವಿಸಿ ಗಲಾಟೆ ಮಾಡಿದ್ದನಂತೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಮಂಗಳವಾರ ಚರಣ್ ತಂದೆ ಚಂದ್ರಶೆಟ್ಟಿ ಕೂಡ ಪ್ರಾಂಶುಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಬುಧವಾರ ಮಧ್ಯಾಹ್ನ 1.30 ಕ್ಕೆ ಕಾಲೇಜಿನಿಂದ ಮನೆಗೆ ಆಗಮಿಸಿದ್ದ ಚರಣ್ ಮನೆಯಲ್ಲಿ ಬ್ಯಾಗನ್ನಿಟ್ಟು ಹೊರ ಹೋದವನು ಮತ್ತೆ ಹಿಂತಿರುಗಿಲ್ಲ. ಚರಣ್ ತಾನು ಸಾಯುವ ಮುನ್ನ ತನ್ನೋರ್ವ ಸ್ನೇಹಿತನಿಗೆ ಮೊಬೈಲ್ ಸಂದೇಶ ರವಾನಿಸಿದ್ದಾನೆ. “ನನಗೆ ಕಾಲೇಜಿನಲ್ಲಿ ಉಪನ್ಯಾಸಕರಿಂದ ಅವಮಾನವಾಗಿದೆ. ಇದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಸಂದೇಶ ರವಾನಿಸಿದ್ದಾನೆ.
ಬುಧವಾರ ಸಂಜೆ 5.45 ರ ಸುಮಾರಿಗೆ ಮೈರ್ಕೋಮೆ ಅರಣ್ಯ ಪ್ರದೇಶದಲ್ಲಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಚರಣ್ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ಸಹ ಡೆತ್ ನೋಟ್ ದೊರಕಿದ್ದು ಅದರಲ್ಲಿ ತನ್ನ ಉಪನ್ಯಾಸಕರಿಂದಾದ ಅವಮಾನದಿಂದ ನೊಂದು ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದೆ. ಚರಣ್ ಅವರ ತಂದೆಯ ದೂರಿನ ಆಧಾರದ ಮೇಲೆ ಕಾಲೇಜಿನ ಮೂರು ಅಧ್ಯಾಪಕರ ವಿರುದ್ಧ ಐಪಿಸಿಯ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ








