`ಸುಮಲತಾ ದೇಶದ್ರೋಹಿ, ಅವರದ್ದು ನಟೋರಿಯಸ್ ಬಿಹೇವಿರ್’
ಮೈಸೂರು : ಸಂಸದೆ ಸುಮಲತಾ ವಿರುದ್ಧ ಮಂಡ್ಯ ಜೆಡಿಎಸ್ ಶಾಸಕರು ಬೆಂಕಿ ಉಗುಳುತ್ತಿದ್ದು, ಇವರ ಸಮರ ತಾರಕ್ಕೇಕೆರಿದೆ. ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸುಮಲತಾ ಅವರ ಹೇಳಿಕೆ ಮಂಡ್ಯದಲ್ಲಿ ಬೆಂಕಿ ಹೊತ್ತಿಸಿದ್ದು, ಆ ಭಾಗದ ಜೆಡಿಎಸ್ ಶಾಸಕರು ಸಂಸದೆ ವಿರುದ್ಧ ಫುಲ್ ಗರಂ ಆಗಿದ್ದಾರೆ. ಸ್ವತಃ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರೇ ಮಂಡ್ಯ ರಣರಂಗಕ್ಕೀಳಿದು ಸಂಸದೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಮಧ್ಯೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ಅಧಿಕಾರಿಗಳೊಂದಿಗೆ ಕೆ.ಆರ್.ಎಸ್ ಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರಶ್ರೀಕಂಠಯ್ಯ, ಸುಮಲತಾ ಅವರದ್ದು ಎಷ್ಟು ನಟೋರಿಯಸ್ ಬಿಹೇವಿರ್ ಎಂಬುದು ಗೊತ್ತು. ಕೆ.ಆರ್.ಎಸ್. ಡ್ಯಾಂ ಗೆ ಅಡ್ಡಲಾಗಿ ನಿಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದು ಬೇರೆ ದಾಟಿಯಲ್ಲಿ. ಸುಮಲತಾ ಅವರು ಅದನ್ನು ತಮಗೆ ಬೇಕಾದಂತೆ ತಿರುಗಿಸಿ ಮಹಿಳೆ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದರು, ಗೌರವವಿಲ್ಲ ಎಂಬ ನಾಟಕೀಯ ಹೇಳಿಕೆಗಳನ್ನು ನೀಡುತ್ತಾ ಅದನ್ನೆ ದೊಡ್ಡ ವಿಚಾರವಾಗಿ ಮಾಡಿದರು.
ಇನ್ನು ನಾನು ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಬಗ್ಗೆ ಪಾಸಿಟಿವ್ ಆಗಿ ಮಿಸೈಲ್ ಎಂಬ ಹೇಳಿಕೆ ನೀಡಿದ್ದೆ. ಅದನ್ನು ಕೂಡ ಬೇರೆ ರೀತಿಯಲ್ಲಿ ಮಾತನ್ನು ತಿರುಗಿಸಿ, ತನಗೆ ಅನ್ವಯವಾಗುವಂತೆ ಹೇಳಿದ್ದಾರೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ನಟನೆ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅವರ ಈ ನಟನಾ ಪ್ರತಿಭೆಗೆ ಪ್ರಶಸ್ತಿ ನೀಡಲೇಬೇಕು ಎಂದು ಲೇವಡಿ ಮಾಡಿದರು.
ಇನ್ನು ಕೆಆರ್ ಎಸ್ ಬಿರುಕು ವಿಚಾರವಾಗಿ ಮಾತನಾಡಿ, ಕೆ.ಆರ್.ಎಸ್.ನಲ್ಲಿ ಬಿರುಕು ಎಂದು ಹೇಳಿಕೆ ನೀಡಿ ಆತಂಕ ಸೃಷ್ಟಿಸಿದರು. ಇಷ್ಟು ವರ್ಷದಿಂದ ನಾವು ನೋಡುತ್ತಿದ್ದೇವೆ ನಮಗ್ಯಾರಿಗೂ ಕಾಣದ ಬಿರುಕು ಸುಮಲತಾಗೊಬ್ಬರಿಗೆ ಕಂಡಿದ್ದು ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ ಕೆ.ಆರ್.ಎಸ್. ರಾಷ್ಟ್ರೀಯ ಸಂಪತ್ತು ಸರಿಯಾದ ಮಾಹಿತಿ ಇಲ್ಲದೇ ಸುಳ್ಳು ಹೇಳಿಕೆಗಳನ್ನು ನೀಡಿ ಆತಂಕ ಸೃಷ್ಟಿ ಮಾಡಿರುವುದು ದೇಶ ದ್ರೋಹದಷ್ಟೇ ಅಪರಾದ. ಸುಮಲತಾ ದೇಶದ್ರೋಹಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಗರಂ ಆದರು.