ಭೀಕರ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರ ಹತ್ತಿರ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಬೆಳಕಿಗೆ ಬಂದಿದೆ.
ಟ್ಯಾಂಕರ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಪುರಷ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಮಹಾರಾಷ್ಟ್ರ ಮೂಲದವರು ಎನ್ನಲಾಗಿದ್ದು, ಇಂದ್ರಜೀತ್ ಮೋಹನ್ ಡಮ್ಮನಗಿ(27) ಕಲ್ಯಾಣಿ ಡಮ್ಮನಗಿ(24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೃತನ ತಂದೆ- ತಾಯಿಯನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಇಂದ್ರಜೀತ್ ಮತ್ತು ಕಲ್ಯಾಣಿ ಕುಟುಂಬದವರೊಂದಿಗೆ ಬದಾಮಿ ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಸಕ್ಕರೆ ಕಾರ್ಖಾನೆಯ ಹತ್ತಿರ ಟ್ಯಾಂಕರ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.








