ಕುಮಟಾದಲ್ಲಿ ನಡೆದ ಕೊಲೆ ಪ್ರಕರಣ ಬೇಧಿಸಲು ಮೂರು ದಿನಗಳ ಹಿಂದಿನ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ಪೊಲೀಸರಿಗೆ ಸಹಾಯ ಮಾಡಿದೆ.
ಸೆ.30ರಂದು ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಾಟ್ ನ ದೇವಸ್ಥಾನದ ಹಿಂಭಾಗದಲ್ಲಿ ವ್ಯಕ್ತಿಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು, ಮೃತನನ್ನು ಬಶೀರ್ (40) ಎನ್ನಲಾಗಿದೆ. ಚೂಪಾದ ಆಯುಧಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು.
ಮೊದಲು ತನಿಖೆ ಆರಂಭಿಸಿದ ಕುಮಟಾ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ವ್ಯಕ್ತಿಯ ಪಾಕೆಟ್ ನಲ್ಲಿ ಸಿಕ್ಕ ಸಾರಿಗೆ ಬಸ್ ಟಿಕೆಟ್ ನಿಂದ ಇತ್ತೀಚೆಗೆ ಗಜೇಂದ್ರ ಗಢಕ್ಕೆ ಭೇಟಿ ನೀಡಿದ್ದು ದೃಢವಾಗಿತ್ತು. ಆತ ಒಬ್ಬನೇ ಗಜೇಂದ್ರ ಗಢಕ್ಕೆ ಹೋಗಿರಲಿಲ್ಲ. ಮತ್ತೊಬ್ಬರು ಕೂಡ ಆತನ ಜೊತೆ ಪ್ರಯಾಣಿಸಿದ್ದರು.
ತನಿಖೆ ವೇಳೆ ಪತ್ನಿಯೂ ಪ್ರಯಾಣಿಸಿರುವುದು ಬೆಳಕಿಗೆ ಬಂದಿತ್ತು. ಬಶೀರ್ ಪತ್ನಿ ರಜ್ಮಾ ಆತನೊಂದಿಗೆ ತೆರಳಿದ್ದಳು. ರಜ್ಮಾಗೆ ಬಶೀರ್ ಇಷ್ಟವಿರಲಿಲ್ಲ. ಇಬ್ಬರು ಮಕ್ಕಳಿದ್ದಾರೆ. ಕೆಲವು ತಿಂಗಳ ಹಿಂದೆ ಕುರಿಗಳನ್ನು ಮಾರಲು ಹೋಗಿದ್ದಾಗ ಬಶೀರ್ ಗೆ ಬಾದಾಮಿಯಲ್ಲಿ ಪರಶುರಾಮ ಎಂಬಾತ ಪರಿಚಯವಾಗಿದ್ದ. ಬಶೀರ್ ಸೋದರ ಸಂಬಂಧಿ ಕಾಸಿಂ ಎಂಬಾತನಿಂದ ಪರಶುರಾಮನ ಜೊತೆ ಪರಿಚಯವಾಗಿತ್ತು.
ನಂತರ ರಜ್ಮಾಗೆ ಪರಶುರಾಮ್ ಜೊತೆ ಅನೈತಿಕ ಸಂಬಂಧ ಬೆಳೆದಿದೆ. ಬಶೀರ್ ಆಕ್ಷೇಪ ವ್ಯಕ್ತ ಪಡಿಸಿದ್ದ. ಹೀಗಾಗಿ ಬಶೀರ್ ಕೊಲೆ ಮಾಡಲು ರಜ್ಮಾ, ಪರಶುರಾಮ ತಂತ್ರ ಹೆಣೆದಿದ್ದಾರೆ. ಬಶೀರ್ ನನ್ನು ಕೊಲೆ ಮಾಡಲು ರಜ್ಮಾ ಸೆಪ್ಟಂಬರ್ 26 ರಂದು 10 ಸಾವಿರ ರು ಹಣ ನೀಡಿ, ಪರಶುರಾಮ್ ಹಾಗೂ ಬಶೀರ್ ನನ್ನು ಮಂಗಳೂರಿಗೆ ಕಳುಹಿಸಿದ್ದಾಳೆ.
ಪರುಶುರಾಮ್ ನೊಂದಿಗೆ ಬಶೀರ್ ಪ್ರಯಾಣ ಬೆಳೆಸಿದ್ದ. ಆರೋಪಿ ಪರಶುರಾಮ್ ತನ್ನ ಸ್ನೇಹಿತ ಆದೇಶ್ನನ್ನು ಭೇಟಿಯಾಗಲು ಬಶೀರ್ ಮತ್ತು ಇನ್ನೊಬ್ಬ ಸ್ನೇಹಿತ ರವಿಯ ಜೊತೆ ಮಂಗಳೂರಿಗೆ ಹೋಗಿದ್ದ. ಅಲ್ಲಿ ಆದೇಶ್ನೊಂದಿಗೆ ಉಳಿದುಕೊಂಡು ಅಲ್ಲಿಂದ ಒಟ್ಟಿಗೆ ಪಣಂಬೂರು ಬೀಚ್ ಗೆ ತೆರಳಿ ಬಶೀರ್ನನ್ನು ಕೊಲೆ ಮಾಡುವ ಯೋಜನೆ ಹಾಕಿದ್ದ.
ಅಲ್ಲಿಂದ ಎಲ್ಲರೂ ದೇವಿಮನೆ ಘಾಟ್ ಗೆ ಬಂದಿದ್ದಾರೆ. ಅಲ್ಲಿ ಇಳಿದ ನಂತರ ಆರೋಪಿಗಳು, ಬಶೀರ್ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ನಂತರ ಆತನನ್ನು ಕೊಲೆ ಮಾಡಿ ಶವ ಬಿಸಾಡಿ ಹೋಗಿದ್ದಾರೆ. ಟಿಕೆಟ್ ಕೊಲೆಯ ಸುಳಿವು ನೀಡಿದ್ದು, ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.