ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಉದ್ಯೋಗಿಗಳು(employees) ಸಿಟ್ಟಾಗಿ ಕಂಪನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೆಪ್ಟೆಂಬರ್ 27 ರಂದು ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಗೆ ಬೆಂಕಿ ಹಚ್ಚಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಪೂಜಾರಿ, ಲ್ಯಾವ್ಸನ್ ಪೀಟರ್ ಜಾನ್ ಎಂಬ ಇಬ್ಬರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಟೇಬಲ್,ಸ್ವಿಚ್ ಬೋರ್ಡ್ ಸುಟ್ಟು ಕರಕಲಾಗಿದ್ದು, ಕಂಪನಿಯಲ್ಲಿ 11 ಲಕ್ಷ ರೂ. ಬೆಲೆ ಬಾಳುವ ಪೀಠೋಪಕರ ಕೂಡ ಹಾನಿಯಾಗಿವೆ.
ಉಮಾಶಂಕರ್ ಮತ್ತು ರೂಪ ಎಂಬುವವರ ಒಡೆತನದ ಕಂಪನಿಯಲ್ಲಿ ರಾಹುಲ್ ಏರಿಯಾ ಸೇಲ್ಸ್ ಮ್ಯಾನೇಜರ್ ಹಾಗೂ ಲ್ಯಾವ್ ಸನ್ ಪೀಟರ್ ಜಾನ್ ರೀಜಿನಲ್ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಬ್ಬರೂ ಟಾರ್ಗೆಟ್ ರೀಚ್ ಮಾಡದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ರಾಹುಲ್ ಮತ್ತು ಲ್ಯಾವ್ಸನ್, ರೂಪಗೆ ಕರೆ ಮಾಡಿ ಸಂಬಳ ಕೊಡುವಂತೆ ಒತ್ತಾಯ ಮಾಡಿದ್ದರು. ಅವರಿಗೆ ಸಂಬಳ ನಿರಾಕರಿಸಲಾಗಿತ್ತು. ಹೀಗಾಗಿ ಸಿಟ್ಟಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಕಿ ಹಚ್ಚಿ ಆರೋಪಿಗಳು ಪರಾರಿಯಾಗಿದ್ದು, ಘಟನೆ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.