ಸಂಸತ್ತಿನಲ್ಲಿ ಸಂಸದರ ವೇತನ ಒಂದು ವರ್ಷದವರೆಗೆ 30% ರಷ್ಟು ಕಡಿಮೆ ಮಾಡುವ ಮಸೂದೆಗೆ ಅಂಗೀಕಾರ
ಹೊಸದಿಲ್ಲಿ, ಸೆಪ್ಟೆಂಬರ್16: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸಲುವಾಗಿ ಕೆಲವು ಕಠಿಣ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಸಂಸದರ ವೇತನವನ್ನು ಒಂದು ವರ್ಷದವರೆಗೆ 30% ರಷ್ಟು ಕಡಿಮೆ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಜೊತೆಗೆ ಎಂಪಿಎಲ್ಎಡಿಎಸ್ ನಿಧಿಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಯಿತು.
ಬಹುತೇಕ ಎಲ್ಲಾ ಎನ್ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಯೇತರ ಪಕ್ಷಗಳು ಎಂಪಿಎಲ್ಎಡಿಎಸ್ ನಿಧಿಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದೇಶದಲ್ಲಿ ಸಾಂಕ್ರಾಮಿಕವಿದ್ದರೂ ಕೇಂದ್ರ ವಿಸ್ಟಾಗೆ ಸಂಬಂಧಿಸಿದ ಯೋಜನೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿರುವಾಗ ಕೇಂದ್ರ ಸರ್ಕಾರವು ಅನಗತ್ಯವಾಗಿ ಎರಡು ವರ್ಷಗಳ ಎಂಪಿಎಲ್ಎಡಿಎಸ್ ಹಣವನ್ನು ಏಕೆ ತೆಗೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಸರಕಾರವನ್ನು ಪ್ರಶ್ನಿಸಿದರು.
ಕೇಂದ್ರ ವಿಸ್ಟಾ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಈ ರಾಷ್ಟ್ರದ ಸಾಮಾನ್ಯರಿಗಾಗಿ ಹೆಚ್ಚಿನ ವೆಂಟಿಲೇಟರ್ಗಳನ್ನು ಒದಗಿಸಬೇಕಾಗಿದೆ. ಆದರೆ ಸರಕಾರ ತನ್ನ ವೆಚ್ಚಗಳನ್ನು ಏಕೆ ಕಡಿಮೆ ಮಾಡುತ್ತಿಲ್ಲ? ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸುಪ್ರಿಯಾ ಸೂಲೆ ಪ್ರಶ್ನಿಸಿದರು.
ಇತ್ತ ಮಸೂದೆಯ ಕುರಿತು ಚರ್ಚಿಸುವಾಗ ಲೋಕಸಭೆಯಲ್ಲಿ ಹಿರಿಯ ತೃಣಮೂಲ ಕಾಂಗ್ರೆಸ್ ಮುಖಂಡ ಸೌಗತ ರಾಯ್ ಮಾತನಾಡಿ ನಮ್ಮ ಎಲ್ಲಾ ಸಂಬಳವನ್ನು ತೆಗೆದುಹಾಕಿ ಆದರೆ ಎಂಪಿಎಲ್ಎಡಿಗಳ ನಿಧಿಯನ್ನು ಹಿಂತಿರುಗಿಸಿ. ಸಾಧ್ಯವಾದರೆ ಎಂಪಿಎಎಲ್ಡಿಎಸ್ ನಿಧಿಯನ್ನು ಹೆಚ್ಚಿಸಿ. ಈ ತರ ನಿರ್ಧಾರ ಮಾಡುವ ಬದಲು ಕೇಂದ್ರ ಸರ್ಕಾರವು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಎಡ ಪಕ್ಷಗಳು, ಡಿ ಎಂ ಕೆ , ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ ಪಕ್ಷಗಳು ಎಂಪಿಎಎಲ್ಡಿಎಸ್ ನಿಧಿಯನ್ನು ಸ್ಥಗಿತಗೊಳಿಸಿದ ಸರಕಾರದ ಕ್ರಮವನ್ನು ವಿರೋಧಿಸಿವೆ. ಇದರಿಂದಾಗಿ ಸಂಸದರ ಅಭಿವೃದ್ಧಿ ಕೆಲಸಗಳು ಮೊಟಕು ಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿವೆ.
ಬಿಜು ಜನತಾದಳದ (ಬಿಜೆಡಿ) ಪಿನಾಕಿ ಮಿಶ್ರಾ ಕೂಡ ಸಂಬಳ ಕಡಿತವನ್ನು ಯಾರೂ ದ್ವೇಷಿಸುವುದಿಲ್ಲ ಆದರೆ ಎಂಪಿಎಎಲ್ಡಿಎಸ್ ನಿಧಿ ಕಡಿತದ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಮರುಪರಿಶೀಲಿಸಬೇಕು ಎಂದು ಹೇಳಿದರು.
ಸಂಸತ್ತಿನ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020 ಅನ್ನು ಸೋಮವಾರ ಕೆಳಮನೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಪರಿಚಯಿಸಿದರು.
ಉಭಯ ಸದನದ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತೇನೆ. ಕೆಲವೊಂದು ವಿಷಯಗಳು ಸಂಭವಿಸಿದಾಗ ನಾವು ಅಸಾಧಾರಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ವಿಷಯವನ್ನು ರಾಜಕೀಯಗೊಳಿಸುವುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಎಂಪಿಎಎಲ್ಡಿಎಸ್ ನಿಧಿ ಪ್ರಸ್ತಾಪವು ಕೇವಲ ಎರಡು ವರ್ಷಗಳವರೆಗೆ ತಾತ್ಕಾಲಿಕವಾಗಿದೆ ಎಂದು ಚರ್ಚೆಯ ಕೊನೆಯಲ್ಲಿ ಪ್ರತಿಕ್ರಿಯಿಸುವಾಗ ಜೋಶಿ ಹೇಳಿದರು