ರೈತ ಸರ್ಕಾರ ಎಂದೇಳಿ ರೈತರಿಗೆ ಟೋಪಿ ಹಾಕಬಾರದು : ಸಿದ್ದರಾಮಯ್ಯ
ಬೆಂಗಳೂರು : ಈಗ ಬಿಜೆಪಿಯವರು ನಷ್ಟದಲ್ಲಿರುವ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ತಮ್ಮದು ರೈತರ ಸರ್ಕಾರ ಎಂದು ಹೇಳಿ ರೈತರಿಗೆ ಟೋಪಿ ಹಾಕುವ ಕೆಲಸ ಮಾಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಿರಂತರ ಸುರಿದ ಮಳೆಯಿಂದಾಗಿ ಈ ಭಾಗದ ರೈತರ ಬೆಳೆಯಲ್ಲಿ ಶೇ. 60 ರಷ್ಟು ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಸಾಲಮಾಡಿ ರೈತರು ಕಲ್ಕತ್ತಾದಿಂದ ಹೂಗಿಡಗಳನ್ನು ತರಿಸಿ ಹೊಲದಲ್ಲಿ ಹಾಕಿದ್ದರು. ಮಳೆಯಿಂದಾಗಿ ಬೆಳೆಪೂರ್ತಿ ಕೊಚ್ಚಿಹೋಗಿದೆ
ಕಳೆದ 25 ದಿನಗಳಿಂದ ಮಳೆಯಾಗುತ್ತಿದ್ದು ಬೆಳೆ ನಾಶವಾಗಿದೆ. ಬಿಜೆಪಿ ಸರ್ಕಾರ ಈಗಾಗಲೇ ಬೆಳೆನಷ್ಟದ ಸಮೀಕ್ಷೆ ಮಾಡಿಸಬೇಕಿತ್ತು, ಜಿಲ್ಲಾ ಉಸ್ತುವಾರಿ ಸಚಿವರು, ಮಂತ್ರಿಗಳು ರೈತರ ಸಂಕಷ್ಟ ಆಲಿಸಬೇಕಿತ್ತು. ಇದ್ಯಾವುದನ್ನೂ ಸರ್ಕಾರ ಮಾಡಿಲ್ಲ.
ಇನ್ನೂ ತಡಮಾಡದೆ ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಬೆಳೆನಷ್ಟದ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರದ ಹಣ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ.
2015-16 ರಲ್ಲಿ ರಾಯಚೂರು, ಸಿಂಧನೂರು ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆನಷ್ಟವಾಗಿತ್ತು, ಆಗ ನಮ್ಮ ಸರ್ಕಾರ ಪ್ರತೀ ಹೆಕ್ಟೇರ್ ಗೆ ರೂ. 25,000 ಪರಿಹಾರ ನೀಡಿತ್ತು. ಎನ್.ಡಿ.ಆರ್.ಎಫ್ ನಾಮ್ರ್ಸ್ ನಲ್ಲಿ ಸೂಚಿಸಿರುವುದಕ್ಕಿಂತ ಹೆಚ್ಚು ಪರಿಹಾರ ನಾವು ನೀಡಿದ್ದೆವು.
ಈಗ ಬಿಜೆಪಿಯವರು ನಷ್ಟದಲ್ಲಿರುವ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ತಮ್ಮದು ರೈತರ ಸರ್ಕಾರ ಎಂದು ಹೇಳಿ ರೈತರಿಗೆ ಟೋಪಿ ಹಾಕುವ ಕೆಲಸ ಮಾಡಬಾರದು. ಈ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.