ಧಾರವಾಡ: ಮಗು ಅಳುತ್ತದೆ ಎಂದರೆ ಪಾಲಕರ ಜೀವ ಹಿಂಡಿದಂತಾಗುತ್ತದೆ. ಆದರೆ, ಇಲ್ಲೊಬ್ಬ ಪಾಪಿ ಜೋರಾಗಿ ಅಳುತ್ತಿದೆ ಎಂಬ ಕಾರಣಕ್ಕೆ ನೆಲಕ್ಕೆ ಹೊಡೆದಿದ್ದಾನೆ.
ಈ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ. ಶಂಭುಲಿಂಗಯ್ಯ ಶಹಾಪುರಮಠ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿದ ಪಾಪಿ ತಂದೆ ಎನ್ನಲಾಗಿದೆ. ಒಂದು ವರ್ಷದ ಹೆಣ್ಣು ಮಗು ಕಳೆದ ರಾತ್ರಿ ವಿಪರೀತ ಅಳುತ್ತಿತ್ತು. ಅದನ್ನು ಸಮಾಧಾನ ಮಾಡಲು ಆಗದೆ, ಶಂಭುಲಿಂಗಯ್ಯ ನೆಲಕ್ಕೆ ಎತ್ತಿ ಬಿಸಾಕಿದ್ದಾನೆ. ಇದರಿಂದ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೇ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ದಾಖಲಿಸಿದ್ದಾರೆ. ಗರಗ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.