ನವದೆಹಲಿ: ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ. ಈ ಬೆನ್ನಲ್ಲಿಯೇ ಸಚಿವೆ ನಿರ್ಮಲಾ ಸೀತಾರಾಮಾನ್ ಅಂಕಿ-ಅಂಶ ಬಿಚ್ಚಿಟ್ಟಿದ್ದಾರೆ.
ಕರ್ನಾಟಕದ ಜಿಎಸ್ಟಿಯ ಒಂದು ಪೈಸೆಯೂ ಬಾಕಿ ಉಳಿದಿಲ್ಲ. ಬರ ಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪ ನಿಧಿಯಡಿ ಮುಂಗಡವಾಗಿ 6,196 ಕೋಟಿ ರೂ, ಹಣ ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 12,476 ಕೋಟಿ ರೂ. ನಲ್ಲಿ 6,196 ಕೋಟಿ ರೂ. ನೀಡಲಾಗಿದೆ. ಆದರೆ, ಕಾಂಗ್ರೆಸ್ ನಯಾ ಪೈಸೆ ನೀಡಿಲ್ಲ ಎಂದು ಹೇಳುತ್ತಿದೆ ಎಂದು ಹೇಳಿದ್ದಾರೆ.
ತೆರಿಗೆ ಕಟ್ಟುತ್ತಿರುವುದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಆದ್ರೆ, ರಾಜಕೀಯ ಪಕ್ಷದ ನೇತೃತ್ವದ ಸರಕಾರ ಈ ಪ್ರಶ್ನೆ ಎತ್ತಿದೆ. ಕರ್ನಾಟಕ ಸರಕಾರ ಮಾತಾಡುತ್ತಿರುವ ಭಾಷೆ ಜನವಿರೋಧಿಯಾಗಿದೆ. ಕೇಂದ್ರ ತಾರತಮ್ಯ ಮಾಡಿದೆ ಎಂಬುವುದು ಸುಳ್ಳು. ಕಾಂಗ್ರೆಸ್ ದೇಶವನ್ನೇ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಹಂಚುವ ಪ್ರತಿ ರಾಜ್ಯದ ಪಾಲು ಆಯೋಗದಿಂದ ಆಯೋಗಕ್ಕೆ ವ್ಯತ್ಯಾಸವಾಗುತ್ತದೆ. ರಾಜ್ಯಗಳ ಮೇಲೆ ಬೀರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯೋಗ ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದ್ದಾರೆ.
14ನೇ ಆಯೋಗದ ಐದು ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು 1,51,309 ಕೋಟಿ ರೂ. ತೆರಿಗೆ ಹಂಚಿಕೆ ಪಡೆದಿದೆ. 15 ನೇ ಹಣಕಾಸು ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ, ಅಂದರೆ ಮಾರ್ಚ್, 2024 ರ ವೇಳೆಗೆ ಕರ್ನಾಟಕವು ಇಲ್ಲಿಯವರೆಗೆ 1,29,854 ಕೋಟಿ ರೂ. ಪಡೆದಿದೆ. ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ನಲ್ಲಿ 44,485 ಕೋಟಿ ರೂ.ಗಳನ್ನು ಮತ್ತಷ್ಟು ಬಿಡುಗಡೆ ಮಾಡಲು ಯೋಜಿಸಿದೆ. ಹಣಕಾಸು ವರ್ಷ 2024-25 ಸೇರಿದಂತೆ ಐದು ವರ್ಷಗಳಲ್ಲಿ ಒಟ್ಟು 1,74,339 ಕೋಟಿ ರೂಪಾಯಿ ಕರ್ನಾಟಕ ಪಡೆದಂತಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕವು 14ನೇ ಆಯೋಗದ ಅವಧಿಗಿಂತ 15ನೇ ಅವಧಿಯ ಮೊದಲ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚು ಮೊತ್ತವನ್ನು ಪಡೆದಿದೆ. ಕರ್ನಾಟಕ ಸರ್ಕಾರ ಮುಂದಿನ 2 ಹಣಕಾಸು ವರ್ಷಗಳು ಅಂದರೆ 2024-25 ಮತ್ತು 2025-26ರ ಕೊರತೆಗಳನ್ನು ಸಹ ಸೇರಿಸಿದೆ. ಕೇರಳ ಕೂಡ ಆದಾಯ ಕೊರತೆ ಅನುದಾನ ಸೇರಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಬಿಹಾರ ಯಾವುದೇ ಆದಾಯ ಕೊರತೆ ಅನುದಾನ ಪಡೆದಿಲ್ಲ ಎಂದು ಹೇಳಿದರು. ಕರ್ನಾಟಕಕ್ಕೆ ಭಾರತ ಸರ್ಕಾರವು 6,280 ಕೋಟಿ ರೂ ಬಡ್ಡಿ ರಹಿತ ಸಾಲ ನೀಡಲಾಗಿದೆ. ವಿಪತ್ತು ನಿರ್ವಹಣೆಗೆ 6,196 ಕೋಟಿ ರೂಪಾಯಿ ಕೇಂದ್ರದಿಂದ ಪಡೆದುಕೊಂಡಿದೆ ಎಂದು ಹೇಳಿದರು.