ಕಾಗೆ ಕಾಟದಿಂದ ಹೈರಾಣಾದ ಗ್ರಾಮಸ್ಥರು Saaksha Tv
ಚಿತ್ರದುರ್ಗ: ಒಂಟಿಯಾಗಿ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡಿದರೆ ಕಾಗೆಯೊಂದು ಕುಟುಕಿ ಸಂಕಷ್ಟ ನೀಡುತ್ತಿರುವ ಪ್ರಸಂಗ ಜಿಲ್ಲೆಯ ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ನಡೆದಿದೆ.
ಕಳೆದ 6 –7 ತಿಂಗಳುಗಳಿಂದ ಗ್ರಾಮದಲ್ಲಿ ಒಂಟಿ ಕಾಗೆಯೊಂದು ಗ್ರಾಮಸ್ಥರಿಗೆ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದು, ಕಾಗೆಯ ವಿಚಿತ್ರ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ಅಲ್ಲದೇ ಕಾಗೆಗೆ ಮನೆ ಕಿಟಕಿಯ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಕಂಡರೂ ಆಗೋದಿಲ್ಲವಂತೆ. ಗಾಜುಗಳೇನಾದರೂ ಕಣ್ಣಿಗೆ ಬಿದ್ದರೆ ಸಾಕಾಗೋವರೆಗೂ ಕುಟುಕುತ್ತಲೇ ಇರುತ್ತದೆ. ಹೀಗೆ ಕಾಗೆ ಕುಟುಕಿ ಕುಟುಕಿ ಕೆಲವರ ತಲೆ ಗಾಯ ಆಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಈ ಕಾಗೆ ಇಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿರೋದಕ್ಕೆ ಗ್ರಾಮದ ಆಂಜನೇಯ ಸ್ವಾಮಿಯ ಶಾಪವೇ ಕಾರಣವಂತೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಪಾಳು ಬಿದ್ದು, ಹಲವು ವರ್ಷಗಳೇ ಕಳೆದಿದ್ದು, ಅದರ ಅಭಿವೃದ್ಧಿ ಕಾರ್ಯ, ಮರು ಪ್ರತಿಷ್ಠಾಪನೆಗೆ, 10 ವರ್ಷದ ಹಿಂದೆ ಗ್ರಾಮಸ್ಥರು ಕೈ ಹಾಕಿದ್ದರು.
ಆದರೆ, ಆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆಂಜನೇಯ ಸ್ವಾಮಿ ಗ್ರಾಮಕ್ಕೆ ಶಾಪ ಹಾಕಿದ್ದಾರೆ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ ಶನಿ ಮಹಾತ್ಮ ವಾಹನವಾಗಿರುವ ಕಾಗೆ ರೂಪದಲ್ಲಿ ಈ ರೀತಿ ಕಾಟ ಕೊಡುತ್ತಿದ್ದಾನೆ ಎಂಬುದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಒಟ್ಟಾರೆ ಕಳೆದ 6 ತಿಂಗಳಿಂದ ಕಾಗೆ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮರು ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಜತೆಗೆ ಕಾಗೆ ಕಾಟ ತಪ್ಪುತ್ತದೆ ಎಮಬುವುದು ಇಲ್ಲಿನ ಗ್ರಾಮಸ್ಥರ ನಂಬಿಕೆ.