ಧಾರವಾಡ: ದುರುಳರು ಬೆಳೆದು ನಿಂತಿದ್ದ ಹತ್ತಿಯನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಗರಗದಲ್ಲಿ ನಡೆದಿದೆ.
ಈಗಾಗಲೇ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಮದ್ಯೆಯೇ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಸ್ವಲ್ಪ ಉಳಿದಿತ್ತು. ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿಯೇ ದುಷ್ಕರ್ಮಿಗಳು ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸಿ ಹಾನಿ ಮಾಡಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಹತ್ತಿ ಬೆಳೆ ಒಣಗಿ ಹೋಗುತ್ತಿದೆ.
ರೈತನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದ ಗಂಗಪ್ಪ ಬಾರ್ಕಿ ಎಂಬ ರೈತರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದರು. ಆದರೆ, ದುಷ್ಕರು ನಾಶ ಮಾಡಿದ್ದಾರೆ.
ಬರಗಾಲ ಇದ್ದರೂ ಗಂಗಪ್ಪ ನೀರು ಹಾಯಿಸಿ ಹತ್ತಿ ಬೆಳೆದಿದ್ದಾರೆ. ಹತ್ತಿಯ ಫಸಲು ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಹತ್ತಿ ಬೆಳೆಗೆ ಕಳೆನಾಶಕ ಹೊಡೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಬೆಳೆ ಸಂಪೂರ್ಣವಾಗಿ ಒಣಗುತ್ತಿದೆ.
ಹೊಟ್ಟೆಕಿಚ್ಚಿನಿಂದಾಗಿ ವಿರೋಧಿಗಳು ಈ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗಂಗಪ್ಪ ಈ ಬಾರಿ ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದರು. ಕೇವಲ 2 ಲಕ್ಷ ರೂ. ಬಂಡವಾಳ ಹಾಕಿ, ಸುಮಾರು 15 ಲಕ್ಷ ರೂ. ಆದಾಯ ತೆಗೆದಿದ್ದರು ಎನ್ನಲಾಗಿದೆ. ಇದು ಅನೇಕರ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ವಿರೋಧಿಗಳು ಈ ರೀತಿ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಸದ್ಯ ಗಂಗಪ್ಪ ನ್ಯಾಯ ಒದಗಿಸಬೇಕೆಂದು ಮನವಿ ಮಾಡುತ್ತಿದ್ದಾರೆ.