ಬೆಂಗಳೂರು : ಕೊರೊನಾ ಸಂಕಷ್ಟದ ಸಮಯದಲ್ಲಿ ಆಡಳಿತ ಯಂತ್ರಕ್ಕೆ ಉಪಯುಕ್ತ ಸಲಹೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದ ಉಪೇಂದ್ರ, ಇದೀಗ ಸಮಾಜದ ಪ್ರತಿ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು, ಮತ್ತೆ ಜನರ ಮುಂದೆ ಬಂದಿದ್ದಾರೆ. ಕೊರೊನಾ ಸವಾಲು, ಚುನಾವಣೆ ವಿಚಾರ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಶ್ನೆ ಎತ್ತಿರುವ ಬುದ್ಧಿವಂತ,ರಾಜಕೀಯ ಬೆಂಬಲಿಗರ ಅಂಗಳಕ್ಕೆ ಒಂದು ಪ್ರಶ್ನೆ ಎಸೆದಿದ್ದಾರೆ.
ಆ ಪ್ರಶ್ನೆಯ ಪೂರ್ಣ ವಿವರ ಇಲ್ಲಿದೆ.
ಸರ್ಕಾರದ ಹತ್ತಿರ ಬಿಪಿಎಲ್, ರಸ್ತೆ ಬದಿಯ ವ್ಯಾಪಾರಿಗಳು, ಕಟ್ಟಡ, ವಲಸೆ ಕೂಲಿ ಕಾರ್ಮಿಕರು, ವಿಕಲಾಂಗಚೇತನರು, ವಯೋವೃದ್ಧರು, ಆಟೋ-ಕ್ಯಾಬ್ ಚಾಲಕರು, ಇತರೆ ಎಲ್ಲ ವರ್ಗದ ಜನರ ಡೇಟಾ (ಹೆಸರು, ಫೋಟೋ, ವಿಳಾಸ ಅವಲಂಬಿತರ ಬ್ಯಾಂಕ್ ಡಿಟೇಲ್ಸ್ ಮುಂತಾದ ಸಂಪೂರ್ಣ ಮಾಹಿತಿಗಳು) ಪಾರದರ್ಶಕವಾಗಿ ಆಯಾ ಸೂಕ್ಷ್ಮ ಸಮಯ, ಪ್ರದೇಶಾವಾರು ಸಂಗ್ರಹಿಸಿ ಆಯಾ ಪ್ರದೇಶದಲ್ಲಿ ಅವನ್ನು ಪ್ರಕಟಿಸಿ, ಅದರ ಸರಿ, ತಪ್ಪು ಜನಾಭಿಪ್ರಾಯವನ್ನು ಪಡೆದು ಸರಿಪಡಿಸಿ ಇಟ್ಟುಕೊಂಡು ಅವರಿಗೆ ಒಂದು ಐಡಿ ಕಾರ್ಡ್ ಕೊಟ್ಟು, ಅವರವರಿಗೆ ತಲುಪಬೇಕಾದ ಅಗತ್ಯಗತೆಗಳು, ಸಹಾಯ (ಕರೊನಾ ವೈರಸ್ ಸೋಂಕು) ಇಂಥಹ ಸಂದರ್ಭದಲ್ಲಿ ದೃಶ್ಯ ದಾಖಲೆಗಳೊಂದಿಗೆ ಮಾಡಿದರೆ, ಚುನಾವಣಾ ಸಮಯದಲ್ಲಿ ಈ ದಾಖಲೆಗಳೇ ನಿಮ್ಮನ್ನು ಮತ್ತೆ ಜನರು ಆರಿಸುವಂತೆ ಮಾಡುವುದು.. ಇಷ್ಟು ವರ್ಷ ದೇಶವನ್ನಾಳಿದ ರಾಜಕೀಯ ಪಕ್ಷಗಳು ನಾವು ಅದು ಮಾಡಿದ್ದೀವಿ.. ಇದು ಮಾಡಿದ್ದೀವಿ ಅಂತಾರೆ. ಆದರೆ ಅದು ಸತ್ಯವೋ, ಸುಳ್ಳೋ ಎಂದು ಜನಕ್ಕೆ ಗೊತ್ತಾಗಬೇಕು ಅಲ್ಲವೇ? ಮಾಧ್ಯಮಗಳಲ್ಲಿ ಕೂಗಾಟ, ಕಿರುಚಾಟ, ಕೆಸರೆರಚಾಟ, ಹಣ ಹಂಚುವುದು ಇಂತಹವುಗಳು ಬೇಕಾಗುವುದಿಲ್ಲ ಅಲ್ಲವೇ? ಸರಿ ಸುಮಾರು ಶೇ 40 ಜನರ ತೆರಿಗೆ ಹಣದಲ್ಲಿ ಸಂಭಳ, ಭತ್ಯೆಗಳನ್ನೆಲ್ಲಾ ಪಡೆಯುವ ದೊಡ್ಡ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಕ್ಕೆ ಇದು ಅಸಾಧ್ಯವೇ.. ರಾಜಕೀಯ ಬೆಂಬಲಿಗರು ಇದಕ್ಕೆ ಉತ್ತರಿಸಬೇಕು.. ಎಂದಿದ್ದಾರೆ








