ಬಾಗಲಕೋಟೆ: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ. 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ. 13ಕ್ಕೆ ಫಲಿತಾಂಶ ಹೊರ ಬೀಳಲಿದೆ. ಆದರೆ, ಈ ಬಾರಿ ಗಾಲಿ ಜನಾರ್ಧನ ರೆಡ್ಡಿ ಅವರ ನಡೆ ಕುತೂಹಲ ಕೆರಳಿಸಿದ್ದು, ನಾನೇ ಕಿಂಗ್ ಮೇಕರ್ ಎಂದು ಹೇಳುತ್ತಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿಯ ಮತಗಳನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಜನಾರ್ದನ ರೆಡ್ಡಿ ಹಿನ್ನಡೆ ಉಂಟು ಮಾಡಲಿದ್ದಾರೆ ಎಂಬ ಲೆಕ್ಕಾಚಾರವಿದೆ. ಇಂತಹ ಸಂದರ್ಭದಲ್ಲಿ ಅವರ ಹೇಳಿಕೆಯೊಂದು ವೈರಲ್ ಆಗಿದೆ.
ಬಾಗಲಕೋಟೆಯ ಕೂಡಲಸಂಗಮಕ್ಕೆ ಭೇಟಿ ನೀಡಿದ್ದ ಅವರು, ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ನಮ್ಮ ಪಕ್ಷ ಅನಿವಾರ್ಯವಾಗಿದೆ. ನಾನು ಈ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ಆ ಮಟ್ಟಕ್ಕೆ ಜನರ ಆಶೀರ್ವಾದ ನಮ್ಮ ಪಕ್ಷಕ್ಕೆ ಸಿಗುತ್ತದೆ. ನಮ್ಮನ್ನು ಬಿಟ್ಟು ಸರ್ಕಾರ ಮಾಡುವ ಪರಿಸ್ಥಿತಿಯಲ್ಲಿ ಯಾರೂ ಇರಲಿಕ್ಕಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತಿದೆ, ಆ ವಿಶ್ವಾಸವೂ ನನ್ನಲ್ಲಿ ಇದೆ ಎಂದು ಹೇಳಿದ್ದಾರೆ.