ಬೆಳಗಾವಿ: ಚಾರಣಕ್ಕೆ ತೆರಳಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಬೆಳಗಾವಿ (Belagavi) ಕಾಲೇಜೊಂದರ 9 ಜನ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
9 ವಿದ್ಯಾರ್ಥಿಗಳು ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ (Jalwani Falls) ನೋಡುವ ಹಿನ್ನೆಲೆಯಲ್ಲಿ ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ತೆರಳಿದ್ದರು. ಪಾರವಾಡ ಗ್ರಾಮದಿಂದ ಮೂರು ಕಿಲೋಮೀಟರ್ ಬೈಕ್ನಲ್ಲಿ ತೆರಳಿದ್ದು, ನಂತರ ಕಾಲು ದಾರಿಯಲ್ಲಿಯೇ ಜಲ್ವಾಣಿ ಫಾಲ್ಸ್ಗೆ ತೆರಳಿದ್ದರು.
ಆದರೆ, ಶುಕ್ರವಾರ ಸಂಜೆ ಮರಳಿ ಬರುವ ಸಂದರ್ಭದಲ್ಲಿ ದಾರಿ ಗೊತ್ತಾಗದೆ ದಟ್ಟ ಕಾಡಿನಲ್ಲಿ ದಾರಿ ತಪ್ಪಿದ್ದರು. ಕೂಡಲೇ ಯುವಕರು ಸ್ನೇಹಿತರಿಗೆ ಫೋನ್ ಮಾಡಿ ಕಾಡಿನಲ್ಲಿ ಕಣ್ಮರೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ರಾತ್ರಿಯಿಡೀ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ರಕ್ಷಿಸಿದ್ದಾರೆ. 30 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆತಂದಿದ್ದಾರೆ.