ಲಕ್ನೋ: ಹೆಮ್ಮಾರಿ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ತಮಿಳುನಾಡಿನಲ್ಲಿ ಶಾಸಕರೊಬ್ಬರನ್ನು ಬಲಿ ಪಡೆದಿದ್ದ ಕೊರೊನಾ, ಉತ್ತರ ಪ್ರದೇಶದಲ್ಲಿ ಸಚಿವರೊಬ್ಬರನ್ನು ಬಲಿ ಪಡೆದಿದೆ.
ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವೆ ಕಮಲಾರಾಣಿ ವರುಣ್ ಕೊರೊನಾಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲೇ ಮೊದಲ ಸಚಿವರೊಬ್ಬರು ಕೊರೊನಾಗೆ ಬಲಿಯಾದಂತಾಗಿದೆ.
62 ವರ್ಷದ ಕಮಲಾರಾಣಿ, ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿದ್ದರು. ಜುಲೈ 18ರಂದು ಕಮಲಾ ರಾಣಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಲಕ್ನೋದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸಚಿವೆ ಕಮಲಾ ರಾಣಿ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿನ್ನೆಯೂ ಟ್ವೀಟ್ ಮಾಡಿದ್ದ ಕಮಲಾ ರಾಣಿ..!
ಕಮಲಾ ರಾಣಿ ತಮ್ಮ ಸಾವಿಗೂ ಮುನ್ನ ಎರಡು ಟ್ವೀಟ್ ಮಾಡಿದ್ದಾರೆ. ನಿನ್ನೆ ಸಂಜೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಯುವ ವಿಜ್ಞಾನಿಗಳ ಜತೆ ನಡೆಸಿದ ಸ್ಮಾರ್ಟ್ ಹ್ಯಾಕಥಾನ್ ಭಾಷಣವನ್ನು ರೀಟ್ವೀಟ್ ಮಾಡಿದ್ದರು.
ಸಂಜೆ 6 ಗಂಟೆ ವೇಳೆಗೆ ಮೃತಪಟ್ಟ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಮರ್ಸಿಂಗ್ ನಿಧನಕ್ಕೂ ಕಮಲಾ ರಾಣಿ ಸಂತಾಪ ವ್ಯಕ್ತಪಡಿಸಿದರು. ಆದರೆ, ದುರ್ದೈವದ ಸಂಗತಿ ಎಂದರೆ, ಅಮರ್ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಕಮಲಾ ರಾಣಿ ಕೂಡ ಇಹಲೋಕದ ಪಯಣ ಮುಗಿಸಿದ್ದಾರೆ.
2017ರಲ್ಲಿ ಕಾನ್ಪುರದ ಘಾತಮ್ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕಮಲಾ ರಾಣಿ, ಮಹಿಳಾ ಸಬಲೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರನ್ನು ಸಚಿವೆ ಎನ್ನುವುದಕ್ಕಿಂತ ಸಮಾಜ ಸೇವಕಿ ಹಾಗೂ ಮಹಿಳಾ ಹೋರಾಟಗಾರ್ತಿ ಎಂದೇ ಜನಪ್ರಿಯತೆಗೆ ಪಾತ್ರರಾಗಿದ್ದರು.