ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿತ್ತು. ಆಗ ಉತ್ತರ ಪ್ರದೇಶದ ಸರಕಾರ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದವರನ್ನು ಗುರುತಿಸಿ, ನಷ್ಟವನ್ನು ಅವರೇ ತುಂಬಿಕೊಡಬೇಕೆಂದು ಗಲಭೆಕೋರರಿಗೆ ನೋಟಿಸ್ ಜಾರಿಮಾಡಿತ್ತು.
ಇದೀಗ ಅಲ್ಲಿನ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಲಭೆಕೋರರ ಭಾವಚಿತ್ರ ವಿಳಾಸವಿರುವ ಬ್ಯಾನರ್ ಗಳನ್ನು ರಸ್ತೆಗಳಲ್ಲಿ ಕಟ್ಟಿ ನಷ್ಟ ಭರಿಸುವಂತೆ ಸೂಚನೆ ನೀಡಿದೆ. ಲಕ್ನೋ ದ ಪ್ರಮುಖ ರಸ್ತೆಗಳಲ್ಲಿ, ಬೀದಿಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಬ್ಯಾನರ್ ಗಳು ರಾರಾಜಿಸುತ್ತಿದ್ದು, ಇದರ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಬ್ಯಾನರ್ ಗಳಲ್ಲಿ ತಮ್ಮ ಭಾವಚಿತ್ರ ಪ್ರಕಟಿಸಿರುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.