#RRR ಪ್ರೀ ರಿಲೀಸ್ ಇವೆಂಟ್.. ಮಾನ ಮರ್ಯಾದೆ ಇರೋರು ಮಾಡಲ್ಲ ಎಂದ ವಾಟಾಳ್
ಚಿಕ್ಕಬಳ್ಳಾಪುರ : ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನ ಬಹಿಷ್ಕಾರ ಹಾಕಬೇಕು. ಶಿವರಾಜ್ ಕುಮಾರ್ ಅವರು ಆರ್ ಆರ್ ಆರ್ ಪ್ರಿ ರಿಲೀಸ್ ಇವೆಂಟ್ ಗೆ ಹೋಗಬಾರದಿತ್ತು. ಮಾನ ಮರ್ಯಾದೆ ಇರೋರು ಮಾಡುವ ಕೆಲಸ ಇದಲ್ಲ..!
ಇದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಆಕ್ರೋಶಭರಿತ ಮಾತುಗಳು..! ವಾಟಾಳ್ ನಾಗರಾಜ್ ಅವರು ಈ ರೀತಿ ಮಾತನಾಡಲು ಕಾರಣವಾಗಿದ್ದು, ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅನ್ನು ಚಿಕ್ಕಬಳ್ಳಾಪುರದಲ್ಲಿ ಮಾಡಿದ್ದು.
ಹೌದು..! ಮಾರ್ಚ್ 19 ರಂದು ಚಿಕ್ಕಬಳ್ಳಾಪುರದಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ.ಸುಧಾಕರ್ , ನಟ ಶಿವರಾಜ್ ಕುಮಾರ್ ಆಗಮಿಸಿದ್ದರು.
ಕರ್ನಾಟಕದಲ್ಲಿ ತೆಲುಗು ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಮಾಡಿದ್ದು, ಇದೀಗ ವಾಟಾಳ್ ನಾಗರಾಜ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನಾನು ಅಂದು ಮೈಸೂರು ನಗರದಲ್ಲಿ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬೇಡ ಅಂತ ಚಳವಳಿ ಮಾಡಿದೆ. ಆದರೆ ಅದೇ ದಿನ ಚಿಕ್ಕಬಳ್ಳಾಪುರದಲ್ಲಿ ಆರ್ಆರ್ಆರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಇದು ನನಗೆ ಬಹಳ ನೋವು ತಂದಿದೆ. ಇದು ಗಂಡು ಮೆಟ್ಟಿದ ಕನ್ನಡಿಗರ ನೆಲ, ಇಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ, ಮಾನ್ಯತೆ ಗೌರವ ಇರಬೇಕು. ಆದರೆ ತೆಲುಗು ಭಾಷೆಯ ಆರ್ಆರ್ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಮಾನ ಮಾರ್ಯಾದೆ ಇರುವವರು ಮಾಡುವ ಕೆಲಸ ಇದಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಅಪಮಾನ ಎಂದ ವಾಟಾಳ್ ನಾಗರಾಜ್, ಸಚಿವ ಡಾ. ಕೆ. ಸುಧಾಕರ್ ಬಹಿರಂಗ ಕ್ಷಮಾಪಣೆ ಕೇಳಬೇಕು. ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.