ವಿರಾಟ್ ಅಹಂ ಬಿಟ್ಟು ಬ್ಯಾಟ್ ಬೀಸುತ್ತಿದ್ದಾರೆ : ಗಂಭೀರ್
ಕೇಪ್ ಟೌನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಹಿಂದೆಂದೂ ನೋಡಿರದ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ವಿರಾಟ್ ವೀರಾವೇಶದ ಬ್ಯಾಟ್ ಅನ್ನು ಪಕ್ಕಕ್ಕೆ ಇಟ್ಟು ತಾಳ್ಮೆಯ ಪ್ರತಿರೂಪವಾಗಿ ಬ್ಯಾಟ್ ಬೀಸಿದ್ದರು. ವಿರಾಟ್ ರ ಈ ಇನ್ನಿಂಗ್ಸ್ ನಲ್ಲಿ ಒಂದು ಸಿಕ್ಸರ್, 12 ಬೌಂಡರಿ ಸಮೇತ 79 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್ ಬಗ್ಗೆ ಸಾಕಷ್ಟು ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಚಾರ ಯಾವುದೇ ಇರಲಿ ಕೊಹ್ಲಿಯನ್ನು ಟೀಕಿಸುವ ಗೌತಮ್ ಗಂಭೀರ್, ಇದೇ ಮೊದಲ ಬಾರಿಗೆ ವಿರಾಟ್ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಅಹಂಕಾರವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡಿದ್ರು. ಇದರಿಂದಾಗಿಯೇ ನಿರ್ಣಾಯಕ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು ಎಂದು ಗೌತಮ್ ಅಭಿಪ್ರಾಯಪಟ್ಟಿದ್ದಾರೆ. ವಿದೇಶ ಪ್ರವಾಸಕ್ಕೆ ಹೋಗುವಾಗ ಅಹಂಕಾರವನ್ನು ಬದಿಗಿರಿಸುವಂತೆ ಕೊಹ್ಲಿ ಸಹ ಆಟಗಾರರಿಗೆ ಸೂಚನೆ ನೀಡುತ್ತಿದ್ದು, ಈ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಆ ಸೂತ್ರವನ್ನು ಸರಿಯಾಗಿ ಅಳವಡಿಸಿಕೊಂಡಿದ್ದಾರೆ ಎಂದಿದ್ದಾರೆ.
ಈ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವೇಗಿಗಳು ಪ್ರಚೋದನಕಾರಿ ಎಸೆತಗಳನ್ನು ಎಸೆದರೂ ವಿರಾಟ್ ಏಕಾಗ್ರತೆ ಕಳೆದುಕೊಳ್ಳದೇ ಇನ್ನಿಂಗ್ಸ್ ಕಟ್ಟಿದರು. ಆರಂಭಿಕರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ ವಾಲ್ ತಂಡದ ಮೊತ್ತ 30 ರನ್ ದಾಟುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಿದ್ದರು. ಈ ಸಂಕಷ್ಟದ ಸ್ಥಿತಿಯಲ್ಲಿ ಕ್ರೀಸ್ ಗೆ ಬಂದ ವಿರಾಟ್, ತಮ್ಮ ಸಹಜ ಶೈಲಿಯನ್ನು ಪಕ್ಕಕ್ಕೆ ಇಟ್ಟು, ಬ್ಯಾಟ್ ಬೀಸಿದರು. 201 ಎಸೆತಗಳನ್ನು ಅತ್ಯಂತ ತಾಳ್ಮೆಯಿಂದ ಎದುರಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಬಹಳ ಸಮಯದ ನಂತರ, ಕೊಹ್ಲಿ ತನ್ನಲ್ಲಿರುವ ನಿಜವಾದ ಆಟಗಾರನನ್ನು ಹೊರತೆಗೆದು ಬ್ಯಾಟ್ ಬೀಸಿದರು. ಕೊಹ್ಲಿ ಆಡಿದ ಈ ಕ್ಲಾಸಿ ಇನ್ನಿಂಗ್ಸ್ ಶತಕಕ್ಕೆ ಸಮ ಎಂದು ಗಂಭೀತ್ ಹಾಡಿ ಹೊಗಳಿಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 223 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 210 ರನ್ ಗಳಿಗೆ ಸರ್ವಪತನ ಕಂಡಿತು. ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 70 ರನ್ ಗಳ ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.