ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಿಸ್ಟಾಡೋಮ್ ಪ್ರಯಾಣಕ್ಕೆ ದಿನಗಣನೆ
ಬೆಂಗಳೂರು : ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಪಾಲಿಗೆ ಸ್ವರ್ಗ.
ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಪ್ರಯಾಣಿಕರು ಮನವಿ ಮಾಡಿದ್ದರು.
ಇದೀಗ ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗಗಳಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್ಗಳನ್ನು ಜೋಡಿಸಿದೆ.
ಈ ಮೂಲಕ ಪ್ರಯಾಣಿಕರು ವಿಸ್ಟಾಡೋಮ್ ಕೋಚ್ನಲ್ಲಿ ಕುಳಿತು ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಕಾಲ ಕೊನೆಗೂ ಕೂಡಿ ಬಂದಿದೆ.
ರೈಲು ಪ್ರಯಾಣದ ಬುಕ್ಕಿಂಗ್ ಇಂದಿನಿಂದ ಆರಂಭವಾಗಿದ್ದು, ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ ನಿಗದಿಪಡಿಸಲಾಗಿದೆ.
ಮೊದಲ ರೈಲು ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ಸ್ಪೆಷಲ್ ಜು.7ರಂದು ಯಶವಂತಪುರದಿಂದ ಹೊರಡಲಿದೆ.
ಎರಡನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ಸ್ಪೆಷಲ್ ಜು. 8 ರಂದು ಯಶವಂತಪುರದಿಂದ ಹಾಗೂ ಮೂರನೇ ರೈಲು ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಸ್ಪೆಷಲ್ ಎಕ್ಸ್ಪ್ರೆಸ್ ಜು.10 ರಂದು ಯಶವಂತಪುರದಿಂದ ಹೊರಡಲಿದೆ.