ನವದೆಹಲಿ : ಒಂದು ವೇಳೆ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದೇ ಇದ್ದರೆ ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಗುಲಾಂ ನಬಿ, ಚುನಾವಣೆಯ ಮೂಲಕ ಆಯ್ಕೆಯಾದ ಅಧ್ಯಕ್ಷರಿಗೆ ಶೇ.51 ಮಂದಿಯ ಬೆಂಬಲವಾದರೂ ಇರುತ್ತದೆ. ಆದರೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಿದರೆ ಅವರಿಗೆ ಪಕ್ಷದೊಳಗೆ ಶೇ.1ರಷ್ಟು ಕೂಡ ಬೆಂಬಲ ಸಿಗುವುದಿಲ್ಲ. ಹೀಗಾಗಿ ಆಂತರಿಕ ಚುನಾವಣೆ ಮೂಲಕವೇ ಹೊಸ ಆಧ್ಯಕ್ಷರ ನೇಮಕವಾಗಬೇಕು. ಜತೆಗೆ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರನ್ನೂ ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ ಸಾಲು ಸಾಲು ಸೋಲುಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ, ನಮ್ಮ ಪಕ್ಷದ ಒಳಗಡೆ ಚುನಾವಣೆ ನಡೆಯದ ಕಾರಣ ನಾವು ಹಲವು ಚುನಾವಣೆಗಳನ್ನು ಸೋತಿದ್ದೇವೆ. ಒಂದು ವೇಳೆ ಚುನಾವಣೆ ನಡೆದರೆ ನಾಯಕರು ಪಕ್ಷ ಸಂಘಟನೆಯತ್ತ ಮನಸ್ಸು ಮಾಡುತ್ತಾರೆ. ಈಗಲೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ಪಕ್ಷದ ಬಗ್ಗೆ ಆಸಕ್ತಿ ಇರುವ ವ್ಯಕ್ತಿ ನಾನು ಜಿಲ್ಲಾ ಅಧ್ಯಕ್ಷ, ರಾಜ್ಯದ ಅಧ್ಯಕ್ಷನಾಗಬೇಕೆಂದು ಬಯಸುತ್ತಾನೆ. ಆದರೆ ಚುನಾವಣೆ ನಡೆಯದೇ ಸುಲಭವಾಗಿ ನೇಮಕಗೊಳ್ಳುವವರು ಈ ಪ್ರಸ್ತಾಪವನ್ನು ವಿರೋಧಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.