ಬೆಂಗಳೂರು : ಇಷ್ಟು ದಿನ ಕೊರೊನಾ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈಗ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇಂದ್ರದ ನಿಲುವನ್ನು ಟೀಕಿಸಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ತಮ್ಮ ಮೊದಲ ಟ್ವೀಟ್ ನಲ್ಲಿ ‘ಸಂಕಷ್ಟದಲ್ಲಿರುವವರಿಗಾಗಿ ಕೇಂದ್ರ ಸರ್ಕಾರ ಮರುಗಿದೆ! ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಧಾರಾಳ ನೆರವು ನೀಡಿದೆ! ಈ ಕಷ್ಟಕಾಲದಲ್ಲೂ ಮಲ್ಯ, ಮೆಹುಲ್ ಚೋಕ್ಸಿ, ಸಂಜಯ್ ಜುಂಜುನ್ವಾಲ, ಬಾಬಾ ರಾಮದೇವ ಅಂತಹ ಉದ್ದೇಶಪೂರ್ವಕ ಸುಸ್ತಿದಾರರ 68 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಮ್ಯುಚುವಲ್ ಫಂಡ್ ಉದ್ದಿಮೆದಾರರಿಗೆ 50 ಸಾವಿರ ಕೋಟಿ ನೆರವು ನೀಡಲಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ನಂತರ ಇನ್ನೊಂದು ಟ್ವೀಟ್ ನಲ್ಲಿ ‘ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕೆಂಬ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಬೇಡಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದೆ. ‘ನ ಖಾವುಂಗಾ, ನಾ ಖಾನೆ ದುಂಗಾ’ ಎಂದಿದ್ದ ಪ್ರಧಾನಿ ಉದ್ದಿಮೆದಾರರ ಹಿತ ರಕ್ಷಣೆಗೆ ಮಾತ್ರ ಮುಂದಾಗಿರುವುದು ಸರಿಯೇ?’ ಎಂದು ಕುಟುಕಿದ್ದಾರೆ.
ಹಾಗೇ ಮತ್ತೊಂದು ಟ್ವೀಟ್ ನಲ್ಲಿ ‘ಲಾಕ್ ಡೌನ್ ನಿಂದಾಗಿ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ, ಲಕ್ಷಾಂತರ ಜನರ ಉದ್ಯೋಗ ನಷ್ಟವಾಗಿದೆ, ಸಂಬಳವಿಲ್ಲದೆ ಅದೆಷ್ಟೋ ಕುಟುಂಬಗಳು ಪರಿತಪಿಸುತ್ತಿವೆ. ಕೆಲವರು ಆಹಾರವಿಲ್ಲದೇ, ಇನ್ನು ಕೆಲವರು ದೂರದೂರುಗಳಿಗೆ ನಡೆದು ಕೊನೆಯುಸಿರೆಳೆದಿದ್ದಾರೆ’.
‘ಈ ಸಂದರ್ಭದಲ್ಲಿ ಸರ್ಕಾರಕ್ಕೆ ನೆನಪಾಗಬೇಕಿದ್ದು ನಿತ್ಯ ದುಡಿಮೆಯ ಶ್ರಮಿಕ ವರ್ಗ. ರೈತರು, ಅಸಂಘಟಿತ ಕಾರ್ಮಿಕರು ಮತ್ತು ಬಡವರು. ಆದರೆ ಕೇಂದ್ರ ಸರ್ಕಾರಕ್ಕೆ ಕಂಡವರು ಅತಿ ಶ್ರೀಮಂತರು’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಹೀಗೆ ಟ್ವೀಟ್ ಸರಣಿ ಮುಂದುವರೆಸಿ ‘ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದಾಗ ಅವರ ಸಾಲ ಮನ್ನಾ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ರಾಜ್ಯಗಳೂ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದವು. ಆದರೆ, ಆಗ ರೈತರತ್ತ ತಿರುಗಿಯೂ ನೋಡದ ಕೇಂದ್ರ ಈಗ ಮಲ್ಯ, ಚೋಕ್ಸಿಯಂಥವರ ಸಾಲ ಮನ್ನಾ ಮಾಡಿದೆ. ರೈತನಿಗಿಂತ ದೇಶಕ್ಕೆ ದ್ರೋಹ ಬಗೆದವರೇ ಕೇಂದ್ರಕ್ಕೆ ಮುಖ್ಯವಾದರೇ? ಇದೇನಾ ದೇಶ ಪ್ರೇಮ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.